ಕಾಗವಾಡ 17: ತೋಟದಲ್ಲಿ ಕಟ್ಟಿರುವ ಮನೆಗಳ ಬಿ-ಖಾತಾ ಮಾಡಿಸಿಕೊಳ್ಳುವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ, ಅದರಿಂದಾಗುವ ಲಾಭ ಮತ್ತು ಸರ್ಕಾರದ ಯೋಜನೆಗಳ ಕುರಿತು ಅರಿವು ಮೂಡಿಸಬೇಕೆಂದು ಶಾಸಕ ರಾಜು ಕಾಗೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಅವರು ಶನಿವಾರ ದಿ. 17 ರಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳ ಜೊತೆ ಸನ್ 2024-25 ನೇ ಸಾಲಿನ 4ನೇ ತ್ರೈಮಾಸಿಕ ಸಭೆಯಲ್ಲಿ ಮಾತನಾಡುತ್ತಿದ್ದರು. ಸಾರ್ವಜಜನಿಕರು ತಮ್ಮ ತೋಟಗಳಲ್ಲಿ ಕೊಟ್ಯಾಂತರ ರೂ. ಖರ್ಚು ಮಾಡಿ, ಮನೆ ಕಟ್ಟಿಸಿರಿತ್ತಾರೆ. ಆದರೇ ಅಲ್ಪ ಪ್ರಮಾಣದ ತೆರಿಗೆ ತಪ್ಪಿಸಲು ಬಿ-ಖಾತಾ ಮಾಡಿಸಿಕೊಂಡಿರುವುದಿಲ್ಲ. ಇದರಿಂದಾಗಿ ಅವರಿಗೆ ಸರ್ಕಾರದ ಯೋಜನೆಗಳು ದೊರೆಯುವುದಿಲ್ಲ. ಅಧಿಕಾರಿಗಳು ಅವರಿಗೆ ಮನವರಿಕೆ ಮಾಡಿಸಿ, ಹೆಚ್ಚಿನ ಪ್ರಮಾಣದಲ್ಲಿ ಬಿ-ಖಾತಾ ಮಾಡಿಸಬೇಕು ಎಂದು ಸೂಚಿಸಿದರು.
ಆರೋಗ್ಯ ಇಲಾಖೆಯ ಅಧಿಕಾರಿಗಳ ನಡವಳಿಕೆಯ ಕುರಿತು ಅಸಮಾಧಾನ ಹೊರಹಾಕಿದ ಅವರು, ಸಾರ್ವಜನಿಕರಿಗೆ ಸಂಬಂಧಿಕರ ಸಾವಿನ ದುಃಖದಲ್ಲಿ ಮರಣೋತ್ತರ ಪರೀಕ್ಷೆಗೆ ಕಿರಿಕಿರಿ ಮಾಡಬೇಡಿ ಎಂದು ಖಡಕ್ ವಾರ್ನಿಂಗ್ ನೀಡಿದರು.
ಅರಣ್ಯ ಇಲಾಖೆಯ ಅಧಿಕಾರಿಗಳೇ ರಸ್ತೆ ಪಕ್ಕದಲ್ಲಿ ನೆಡುವ ಗಿಡಗಳ ಬಗ್ಗೆ ಕಾಳಜಿ ವಹಿಸಿ, ಗಿಡಗಳ ಪೋಷಣೆಯ ಕುರಿತು ಜವಾಬ್ದಾರಿ ತೋರಿ ಎಂದು ಸೂಕ್ಷ್ಮವಾಗಿ ಎಚ್ಚರಿಕೆ ನೀಡಿದರು.
ಮುಂಗಾರ ಹಂಗಾಮು ಆರಂಭಕ್ಕೂ ಮುನ್ನ ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರಗಳ ಕೊರೆತೆಯಾಗದಂತೆ ನೋಡಿಕೊಳ್ಳಬೇಕೆಂದು ಸೂಚಿಸಿದರು.
ತಾಲೂಕಿನ ವಸತಿ ನಿಲಯದ ಶಾಲೆ ಹಾಗೂ ಒಟ್ಟಾರೆಯಾಗಿ ಕ್ಷೇತ್ರದಲ್ಲಿ ಎಸ್ಎಸ್ಎಲ್ಸಿ ಫಲಿತಾಂಶ ಕಡಿಮೆಯಾಗಿದ್ದು, ಮುಂಬರುವ ದಿನಗಳಲ್ಲಿ ಇದನ್ನು ಸರಿಪಡಿಸಿಕೊಳ್ಳುವಂತೆ ಸೂಚಿಸಿದರು.
ಮತಕ್ಷೇತ್ರದ ಯಾವ ಗ್ರಾಮದಲ್ಲಿಯೂ ಸಹ ಜೆಜೆಎಮ್ ಕಾಮಗಾರಿ ಸಂಪೂರ್ಣಗೊಂಡಿಲ್ಲ. ಕೆಲವು ಗ್ರಾಮಗಳಲ್ಲಿ ಕಾಮಗಾರಿಗಳು ಪೂರ್ಣಗೊಂಡರೂ ಸಹ ಮನೆ ಮನೆಗೆ ನೀರು ತಲುಪಿಲ್ಲ. ಹೀಗಾಗಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಜಲ ಜೀವನ ಮಶೀನ ಕಾಮಗಾರಿ ಸಂಪೂರ್ಣವಾಗಿ ಹಳ್ಳ ಹಿಡಿದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾಗವಾಡ ತಹಶೀಲ್ದಾರ ರಾಜೇಶ ಬುರ್ಲಿ, ಅಥಣಿ ತಹಶೀಲ್ದಾರ ಸಿದರಾಯ ಭೋಸಗಿ, ತಾ.ಪಂ. ಇಒ ವೀರಣ್ಣ ವಾಲಿ, ಸಿಡಿಪಿಒ ಸಂಜುಕುಮಾರ ಸದಲಗೆ, ಪಿಡಬ್ಲ್ಯೂಡಿ ಇಲಾಖೆಯ ಜಯಾನಂದ ಹಿರೇಮಠ, ಬಸವರಾಜ ಮಗದುಮ್ಮ, ಸಮಾಜ ಕಲ್ಯಾಣ ಇಲಾಖೆಯ ಬಸವರಾಜ ಯಾದವಾಡ, ಬಿಸಿಎಂನ ವೆಂಕಟೇಶ ಕುಲಕರ್ಣಿ, ಕೃಷಿ ಇಲಾಖೆಯ ನಿಂಗನಗೌಡ ಬಿರಾದರ, ಆರ್ಎಪ್ಓ ರಾಕೇಶ ಅರ್ಜನವಾಡ, ಪ್ರಶಾಂತ ಗೌರಾಣಿ, ಬಿಸಿಯೂಟದ ಅಧಿಕಾರಿ ಮಲ್ಲಿಕಾರ್ಜುನ ನಾಮದಾರ, ಡಿ.ಕೆ. ಕಾಂಬಳೆ, ಪ್ರಶಾಂತ ಪೋತದಾರ, ಮಹಾಂತೇಶ ಕೌವಲಾಪೂರ, ಕೆ.ಕೆ. ಗಾವಡೆ, ಸುರೇಶ ಪತ್ತಾರ, ಎ.ಡಿ. ಅನ್ಸಾರಿ, ಸೇರಿದಂತೆ ಇಲಾಖೆಯ ಅಧಿಕಾರಿಗಳು, ಪ.ಪಂ.ನ ಮುಖ್ಯಾಧಿಕಾರಿಗಳು, ಎಲ್ಲ ಗ್ರಾಮಗಳ ಪಿಡಿಒಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.