ದ್ವಿತೀಯ ಪಿಯುಸಿ ಪರೀಕ್ಷೆ-2 ಸೂಸುತ್ರವಾಗಿ ನಡೆಸಲು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಸೂಚನೆ

ವಿಜಯಪುರ, ಏ.27: ಜಿಲ್ಲೆಯಲ್ಲಿ ಒಟ್ಟು 5 ಕೇಂದ್ರಗಳಲ್ಲಿ ಏಪ್ರೀಲ್ 29 ರಿಂದ ಮೇ 16ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ-2 ನಡೆಯಲಿವೆ. ಮುಕ್ತ ಹಾಗೂ ಪಾರದರ್ಶಕವಾಗಿ ಪರೀಕ್ಷೆಗಳನ್ನು ನಡೆಸಲು ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಗಳು ಕಾರ್ಯೋನ್ಮುಖರಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಸೂಚನೆ ನೀಡಿದರು. 

ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಭಗಣದಲ್ಲಿ ನಡೆದ  ದ್ವಿತೀಯ ಪಿಯು ಪರೀಕ್ಷೆ-2ರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪರೀಕ್ಷಾ ದಿನದಂದು ಜಿಲ್ಲಾ ಖಾಜಾನೆ ಭದ್ರತಾ ಕೊಠಡಿಯಿಂದ ಗೌಪ್ಯ ಬಂಡಲ್ ಗಳನ್ನು ಪಡೆದು ಸಂಬಂಧಪಟ್ಟ ಪರೀಕ್ಷಾ ಕೇಂದ್ರಗಳಿಗೆ ರವಾನಿಸಲು 5 ರೂಟ್‌ಗಳನ್ನು ಮಾಡಲಾಗಿದೆ. ಇದಕ್ಕಾಗಿ ತಹಶೀಲ್ದಾರರು, ಉಪತಹಶೀಲ್ದಾರರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ವಿಜಯಪುರ ಸರಕಾರಿ/ಅನುದಾನಿತ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರು/ಹಿರಿಯ ಉಪನ್ಯಾಸಕರನ್ನು ತ್ರಿಸದಸ್ಯ ಸಮಿತಿಯ ಸದಸ್ಯರನ್ನಾಗಿ ಜಿಲ್ಲಾಧಿಕಾರಿ ಯವರು ನೇಮಕ ಮಾಡಿದ್ದಾರೆ ಎಂದು ತಿಳಿಸಿದರು. 

ಪರೀಕ್ಷಾ ಕೇಂದ್ರಗಳಲ್ಲಿ ನಿಗಧಿಪಡಿಸಿದ ಕೋಠಡಿಯಲ್ಲಿಯೇ ಗೌಪ್ಯ ಬಂಡಲ್‌ಗಳನ್ನು ಮುಖ್ಯ ಅಧೀಕ್ಷಕರು ಹಾಗೂ ಸಹ ಮುಖ್ಯ ಅಧೀಕ್ಷಕರಿಗೆ ಸಿಸಿ ಟಿವಿ ಕಣ್ಗಾವಲಿನಲ್ಲಿಯೇ ಹಸ್ತಾಂತರಿಸಬೇಕು.  ಜಿಲ್ಲಾ ಖಜಾನೆಯಿಂದ ಗೌಪ್ಯ ಬಂಡಲ್‌ಗಳನು ಪಡೆದುಕೊಂಡು ಪರೀಕ್ಷಾ ಕೇಂದ್ರಗಳಿಗೆ ರವಾನೆ ಮಾಡುವ ಕಾರ್ಯದಲ್ಲಿ ಯಾವುದೇ ಲೋಪದೋಷ ಊಂಟಾಗದಂತೆ ನೋಡಿಕೋಳ್ಳಬೇಕು. ಪ್ರಶ್ನೇ ಪತ್ರಿಕೆ ಸಾಗಿಸುವ ವಾಹನಗಳಿಗೆ ಕಡ್ಡಾಯವಾಗಿ ಜಿಪಿಎಸ್ ಆಕ್ಟೀವೇಟ್ ಆಗಿರುವಂತೆ ನೋಡಿಕೋಳ್ಳಬೇಕು. ಎಲ್ಲಿಯೂ ಅನಗತ್ಯವಾಗಿ ವಾಹನ ನಿಲುಗಡೆ ಮಾಡಬಾರದು ಎಂದು ಸೂಚಿಸಿದರು. 

ಪರೀಕ್ಷಾ ಕೇಂದ್ರಗಳಲ್ಲಿ  ಕುಡಿಯಲು ನೀರು, ಶೌಚಾಲಯ ಇತ್ಯಾದಿ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಕಲ್ಪಿಸಬೇಕು. ಕೊಠಡಿಗಳಲ್ಲಿ ಉತ್ತಮ ಗಾಳಿ ಬೆಳಕು ಹೊಂದಿರುವಂತೆ ನೋಡಿಕೊಳ್ಳಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಅಕ್ರಮ ಚಟುವಟಿಕೆಗೆ ಆಸ್ಪದ ನೀಡಬಾರದು. ಮುಕ್ತ ಹಾಗೂ ಪಾರದರ್ಶಕ ಪರೀಕ್ಷೆ ನಡೆಸಲು ವೆಬ್‌ಕಾಸ್ಟಿಂಗ್ ಮಾಡಲಾಗಿದೆ. ಇದಕ್ಕಾಗಿ ಇಲಾಖೆ ಸೂಚಿಸಿರುವ ನಿಯಮಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು ಎಂದರು. 

ಪರೀಕ್ಷೆಗಳು ನಡೆಯುವ ದಿನಗಳಂದು ಪರೀಕ್ಷಾ ಕೇಂದ್ರದ 200 ಮೀ ಸುತ್ತಲೂ 144 ಕಲಂ ಜಾರಿಯಲ್ಲಿರುತ್ತದೆ. ಕೇಂದ್ರದ ಸುತ್ತಮುತ್ತ ವ್ಯಾಪ್ತಿಯಲ್ಲಿರುವ ಜೆರಾಕ್ಸ್‌ ಸೆಂಟರ್, ಕಂಪ್ಯೂಟರ್ ಸೆಂಟರ್‌ಗಳನ್ನು ಮುಚ್ಚಿಸಬೇಕು. ಪರೀಕ್ಷಾ ಕೇಂದ್ರಗಳಲಿ ಮೊಬೈಲ್ ಬಳಸುವುದು ನಿಷೇಧಿಸಲಾಗಿದೆ ಎಂದು ಹೇಳಿದರು. 

ಪೂರ್ವಭಾವಿ ಸಭೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಿ.ಕೆ. ಹೊಸಮನಿ, ವಿವಿಧ ತಾಲೂಕಿನ  ಬಿಇಒ, ಪ್ರಾಚಾರ್ಯರು, ಉಪನ್ಯಾಸಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.