ವಿದ್ಯಾರ್ಥಿಗಳಿಗೆ ಗುರಿ-ಗುರು ಹಾಗೂ ಸ್ನೇಹಿತ-ಸಲಹೆ ತುಂಬಾ ಮುಖ್ಯ: ನ್ಯಾ. ಎ.ಎಂ.ಬಡಿಗೇರ

A mentor and a friend are very important for students: Justice A.M. Badigera

ಮಹಾಲಿಂಗಪುರ 15: ವಿದ್ಯಾರ್ಥಿದೆಸೆಯಲ್ಲಿ ಗುರುಗಳ ಮಾರ್ಗದರ್ಶನ ಮತ್ತು ಒಳ್ಳೆ ಸ್ನೇಹಿತರ ಸಲಹೆಗಳು ಸಾಧನೆಗೆ ಪೂರಕ ಎಂದು ಧಾರವಾಡದ ಸಿವಿಲ್ ಕೋರ್ಟ್‌ ನ್ಯಾಯಮೂರ್ತಿ ಎ.ಎಂ.ಬಡಿಗೇರ ಹೇಳಿದರು.  

ಸ್ಥಳೀಯ ಕೆಎಲ್‌ಇ ಸಂಸ್ಥೆಯ ಪದವಿ ಮಹಾವಿದ್ಯಾಲಯದಲ್ಲಿ ಗುರುವಾರ ನಡೆದ 38ನೇ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. 

ವಿದ್ಯಾರ್ಥಿಗಳನ್ನು ಜೀವನದಲ್ಲಿ ಸ್ವತಂತ್ರರಾಗಿ ಸಾಗುವಂತೆ ಮಾಡುವುದೇ ಶಿಕ್ಷಣ. ವಿದ್ಯಾರ್ಥಿಗಳು ಗುರುಗಳಿಗೆ ವಿಧೇಯರಾಗಿರಬೇಕು. ಜೀವನದಲ್ಲಿ ಕೆಟ್ಟ ವಿಷಯಗಳಿಗಿಂತ ಒಳ್ಳೆಯ ವಿಷಯಗಳಿಗೆ ಹೆಚ್ಚು ಆದ್ಯತೆ ನೀಡಿ, ಒಳ್ಳೆಯವರ ಸಹವಾಸ ಮಾಡಿ ಸಾಧನೆಗೆ ಸಹಾಯಕವಾಗುವ ಸಂಗತಿಗಳ ಬಗ್ಗೆ ಮಾತ್ರ ಯೋಚಿಸಬೇಕು. ಎಲ್ಲರೂ ಜನನ ಪ್ರಮಾಣಪತ್ರ ಆದಿಯಾಗಿ ಎಲ್ಲ ದಾಖಲೆಗಳನ್ನು ಸರಿಯಾಗಿ ನಮೂದಿಸಿಕೊಂಡು ಕಾಯ್ದುಕೊಳ್ಳಬೇಕು ಎಂದರು.  

ಬೆಳಗಾವಿಯ ಆರ್‌.ಸಿ.ಯು ಕುಲಸಚಿವ (ಮೌಲ್ಯಮಾಪನ) ಪ್ರೋ. ಆರ್‌.ಎನ್‌. ಕದಮ್ ಮಾತನಾಡಿ ವಿವಿ ಆಡಳಿತದಲ್ಲಿ ಸಾಕಷ್ಟು ಸುಧಾರಣೆಯಾಗಿದ್ದು, ವಿದ್ಯಾರ್ಥಿಗಳ ಹಿಂದಿನ ಎಲ್ಲಾ ಅಂಕಪಟ್ಟಿಗಳು ಹಾಗೂ ಸಂಬಂಧಿಸಿದ ಎಲ್ಲಾ ದಾಖಲಾತಿಗಳನ್ನು ಆದಷ್ಟು ಬೇಗ ತಲುಪಲಿವೆ ಎಂದರು.  

ಪ್ರಾಚಾರ್ಯ ಡಾ.ಕೆ.ಎಂ ಅವರಾದಿ ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುಚಟಿಕೆಗಳಲ್ಲಿ ರಾಷ್ಟ್ರ, ರಾಜ್ಯ, ಅಂತರ ವಲಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಎರಡೂ ವಿಶ್ವವಿದ್ಯಾಲಗಳ ಕ್ರೀಡಾ ವಿಭಾಗದಲ್ಲಿ ‘ಯುನಿವರ್ಸಿಟಿ ಬ್ಲೂ’ ಆಗಿ ಮಹಾವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾರೆ ಎಂದರು.  

ಕಾರ್ಯಕ್ರಮದಲ್ಲಿ ನಾನಾ ಸ್ಪರ್ಧೆಗಳಲ್ಲಿ (ಕ್ರೀಡಾ, ಸಾಂಸ್ಕೃತಿಕ, ಪ್ರತಿಭಾ ಪುರಸ್ಕಾರ) ವಿಜೇತ ನೂರಾರು ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.  

ಪಾಲಿಟೆಕ್ನಿಕ್ ಪ್ರಾಚಾರ್ಯ ಎಸ್‌.ಐ.ಕುಂದಗೋಳ, ಸ್ಥಾನಿಕ ಆಡಳಿತ ಮಂಡಳಿ ಸದಸ್ಯರಾದ ಅಶೋಕ ಅಂಗಡಿ, ಸಂತೋಷ ಹುದ್ದಾರ, ಐಕ್ಯೂಎಸ್‌ಸಿ ಸಂಯೋಜಕಿ ಡಾ. ಸುನಂದಾ ಸೊರಗಾಂವಿ. ಪಿಯು ಪ್ರಾಚಾರ್ಯ ಎಲ್‌. ಬಿ. ತುಪ್ಪದ, ಉಪಪ್ರಾಚಾರ್ಯ ಬಿ. ಎನ್ ಅರಕೇರಿ, ಸಿಬ್ಬಂದಿ ಕಾರ್ಯದರ್ಶಿ ಎ. ಎಂ. ಉಗಾರೆ, ಪಿ.ಎಸ್‌.ಹಿಪ್ಪರಗಿ, ವಿ.ಎನ್‌.ಅಡಹಳ್ಳಿ, ಟಿ.ಡಿ,ಡಂಗಿ, ಸಿ.ಎಂ.ಐಗಳಿ, ಜೆ.ಆರ್‌.ಪಾಟೀಲ, ವಿನಾಯಕ ಬಡಿಗೇರ, ವಿದ್ಯಾರ್ಥಿ ಪ್ರತಿನಿಧಿ ಈಶ್ವರಿ ಕಾಗಿ, ಡಾ. ಸುನಂದಾ ಸೊರಗಾಂವಿ ಸ್ವಾಗತಿಸಿದರು. ವಾಣಿಶ್ರೀ ಕುದರಿ ಹಾಗೂ ಕೀರ್ತನಾ ಪೂಜಾರಿ ನಿರೂಪಿಸಿದರು. ಡಾ. ಎಸ್‌. ಎಸ್‌. ಕೋಳಿ ವಂದಿಸಿದರು.  

ಮಹಾಲಿಂಗಪುರದ ಕೆಎಲ್‌ಇ ಸಂಸ್ಥೆಯ ಪದವಿ ಮಹಾವಿದ್ಯಾಲಯದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಕ್ರೀಡಾ ಸಾಧಕರನ್ನು ಸನ್ಮಾನಿಸಲಾಯಿತು.