ಪತ್ರಿಕಾರಂಗದ ವೃತ್ತಿಬದ್ದತೆ, ಕ್ರಿಯಾಶೀಲತೆ, ಕಾರ್ಯಕ್ಷಮತೆಗೆ ಮತ್ತೊಂದು ಹೆಸರು ಕೆ.ವಿ.ಪ್ರಭಾಕರ್.

(ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾಗಿರುವ ಇವರ ಜೀವನದ ಒಂದು ಗುಟ್ಟು ಇದೆ.
“ನನಗೆ ಇಬ್ಬರು ಪತ್ನಿಯರು. ನನ್ನದು ಬಹಳ ದೊಡ್ಡ ಫ್ಯಾಮಿಲಿ”...ಇದು ಕೆ.ವಿ.ಪ್ರಭಾಕರ್ ಅವರೇ ಹೇಳಿದ ಅವರದೇ ಬದುಕಿನ ಗುಟ್ಟು.
ಮೊದಲ ಪತ್ನಿ ಮೀರಾ.ಎರಡನೇ ಪತ್ನಿ ಪತ್ರಿಕಾವೃತ್ತಿ.)
ಮೀರಾ ಅವರ ಜತೆಗಿನ ದಾಂಪತ್ಯಕ್ಕೆ ಇಬ್ಬರು ಪುಟ್ಟ ಮಕ್ಕಳು.ಅಭಯ್ ಸೂರ್ಯ ಮತ್ತು ಐಶ್ವರ್ಯ.ಇದೊಂದು ಪುಟ್ಟದಾದ ಪ್ರೀತಿಯ ಕುಟುಂಬ.ಆದರೆ, ಇದು ಪ್ರಭಾಕರ್ ಅವರ ಮೊದಲ ಸಂಸಾರ ಅಲ್ಲ ಎನ್ನುವುದು ನಿಮಗೆ ಗೊತ್ತಿರಲಿ.
ಪ್ರಭಾಕರ್ ಅವರು ತಮ್ಮ ಎರಡನೇ ಪತ್ನಿ ಜತೆಗೆ ಮೊದಲ ಸಂಸಾರ ಆರಂಭಿಸಿದರು.ಪತ್ರಿಕಾ ವೃತ್ತಿಯೇ ಇವರ ಎರಡನೇ ಪತ್ನಿ.ಈ ವೃತ್ತಿಯಲ್ಲಿರುವ ನೂರಾರು ಮಂದಿ ಹಿರಿಯರ ಮತ್ತು ಕಿರಿಯರನ್ನು ತಮ್ಮ ಕುಟುಂಬದವರು ಅಂತಲೇ ಈ ಕ್ಷಣಕ್ಕೂ ಭಾವಿಸಿದ್ದಾರೆ, ಈ ಕಾರಣಕ್ಕೇ ಇವರದ್ದು ದೊಡ್ಡ ಕುಟುಂಬ.ಇಲ್ಲಿ ಸೇರಿರುವ ನಾವೆಲ್ಲರೂ ಪ್ರಭಾಕರ್ ಅವರ ವೃತ್ತಿ ಕುಟುಂಬದ ಭಾಗವೇ ಆಗಿದ್ದೇವೆ.
ಕೆ.ವಿ.ಪ್ರಭಾಕರ್ ಅವರ ಪತ್ರಿಕಾ ಸಂಸಾರದ ಪಯಣ ಆರಂಭವಾಗಿದ್ದು ವರದಿಗಾರರಾಗಿ ಅಲ್ಲ. ಬದಲಿಗೆ ಪತ್ರಿಕೆ ಹಂಚಿಕೆದಾರರಾಗಿ.
ಕೋಲಾರದ ಕುರುಬರಪೇಟೆಯ  ಮಧ್ಯಮ ವರ್ಗದ ವೆಂಕಟೇಶಪ್ಪ ಮತ್ತು ಲಕ್ಷ್ಮೀದೇವಿ ಅವರ ಪುತ್ರ ಕೆ.ವಿ.ಪ್ರಭಾಕರ್ ತಮ್ಮ ಪ್ರಾಥಮಿಕ ಮತ್ತು ಪದವಿ ಶಿಕ್ಷಣವನ್ನು ಪೂರ್ತಿಯಾಗಿ ಮುಗಿಸಿದ್ದು ಕೋಲಾರ ಮತ್ತು ಕೆಜಿಎಫ್ ನಲ್ಲೆ
ಹೇಳಿಕೊಳ್ಳುವಂತಹ ಯಾವುದೇ ಸಾಮಾಜಿಕ ಹಿನ್ನೆಲೆ ಇಲ್ಲದ ಪ್ರಭಾಕರ್ ಅವರು ಕೋಲಾರದ ಧ್ವನಿಯಾಗಿದ್ದ “ಕೋಲಾರ ಪತ್ರಿಕೆ"ಯ ಹಂಚಿಕೆದಾರರಾಗಿ ಕೆಲಸಕ್ಕೆ ಸೇರಿದವರು, ಬಳಿಕ ತಮ್ಮ ವೃತ್ತಿಪರತೆ-ಮಹತ್ವಾಕಾಂಕ್ಷೆ-ಕಾರ್ಯಕ್ಷಮತೆ ಮತ್ತು ಶ್ರಮ ಹಾಗೂ ಶ್ರದ್ದೆಯಿಂದ ಕೋಲಾರ ಪತ್ರಿಕೆ, ಸುದ್ದಿ ಸಂಚಯ, ಕೋಲಾರ ವಾಣಿ ಪತ್ರಿಕೆಯ ವರದಿಗಾರರಾದರು, ಉಪಸಂಪಾದಕರೂ ಆದರು.
ಇಲ್ಲಿಯ ಅನುಭವ ಇವರನ್ನು ಕೋಲಾರದ ಹೊರಗೂ ಚಾಚಿಕೊಳ್ಳುವಂತೆ ಮಾಡಿತು.ಒಂದಷ್ಟು ಕಾಲ ಅನುಭವ ಪಡೆದುಕೊಂಡ ಬಳಿಕ ರಾಜಧಾನಿ ಬೆಂಗಳೂರಿನ ಕಡೆಗೆ ಮುಖಮಾಡಿದರು.
೧೯೯೯ ರಲ್ಲಿ ರಾಜಧಾನಿಗೆ ಕಾಲಿಟ್ಟರು. ಇಲ್ಲಿ ವಿಜಯಕರ್ನಾಟಕ, ಕನ್ನಡಪ್ರಭ ಪತ್ರಿಕೆಗಳ ಮೂಲಕ ವೃತ್ತಿ ಬದುಕಿನ ಮತ್ತೊಂದು ಹಂತಕ್ಕೆ ಏರಿ ವರದಿಗಾರ, ವಿಶೇಷ ವರದಿಗಾರ ಹಾಗೂ ಮುಖ್ಯ ವರದಿಗಾರರೂ ಆಗಿ ರಾಜಕೀಯ, ಅಪರಾಧ, ಸಿವಿಕ್ ಸೇರಿ ಹಲವಾರು ವಿಭಾಗಗಳಲ್ಲಿ ವೃತ್ತಿಯಲ್ಲಿ ಪಳಗಿದರು.  ಕಾಲು ಶತಮಾನ ಕಾಲದ ಇವರ ವೃತ್ತಿಪರತೆ ಇವರ ಕೈ ಹಿಡಿದು ವಿಧಾನಸೌಧದ ಅಧಿಕಾರ ಕೇಂದ್ರಕ್ಕೆ ಕರೆ ತಂದಿತು.
೨೦೧೩ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಧ್ಯಮ ಸಮನ್ವಯಾಧಿಕಾರಿಯಾಗಿ, ಆಗ ಮಾಧ್ಯಮ ಸಲಹೆಗಾರರಾಗಿದ್ದ ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅವರ ಜೊತೆಗೆ ಪತ್ರಿಕಾವೃತ್ತಿಯ ಮತ್ತೊಂದು ಆವೃತ್ತಿಗೆ ಜಮೆ ಆದರು.
ಅಲ್ಲಿಂದ ಇಲ್ಲಿಯವರೆಗೂ ಒಂದು ದಶಕ ಕಾಲ ನಿರಂತರವಾಗಿ ತಮ್ಮ ಪಾಲಿಗೆ ಬಂದ ಹೊಣೆಗಾರಿಕೆಯನ್ನು ಅತ್ಯಂತ ಪರಿಣಾಮಕಾರಿಯಾಗಿ, ಜವಾಬ್ದಾರಿಯಿಂದ ಮತ್ತು ಘನತೆಯಿಂದ ನಿರ್ವಹಿಸಿದ್ದರ ಒಟ್ಟು ಪರಿಣಾಮವಾಗಿ ಸಿದ್ದರಾಮಯ್ಯ ಅವರು ಎರಡನೇ ಬಾರಿ ಮುಖ್ಯಮಂತ್ರಿ ಆಗುತ್ತಿದ್ದಂತೆ ಮಾಧ್ಯಮ ಸಲಹೆಗಾರರಾಗುವ ಜವಾಬ್ದಾರಿಯೂ ಒದಗಿ ಬಂದಿದೆ.
ಮಾಧ್ಯಮ ಸಲಹೆಗಾರ ಎನ್ನುವುದು ಸಂಪುಟ ದರ್ಜೆಯ ಸ್ಥಾನ ಮಾನ. ಆದರೆ, ಪತ್ರಕರ್ತ ಎನ್ನುವುದಕ್ಕಿಂತ ದೊಡ್ಡ ಸ್ಥಾನ ಮಾನ ತಮಗೆ ಯಾವುದೂ ಇಲ್ಲ ಎನ್ನುವ ಮನೋಧರ್ಮದಕ್ಕೇ ಪ್ರಭಾಕರ್ ಅವರು ಈಗಲೂ ತಮ್ಮ ಆಲೋಚನೆಯನ್ನು ಸೀಮಿತಗೊಳಿಸಿಕೊಂಡು ಹಾಗೆಯೇ “ಡೌನ್ ಟು ಅರ್ಥ್” ಆಗಿದ್ದಾರೆ.
ನಿತ್ಯ ೧೬ ರಿಂದ ೧೮ ಗಂಟೆ ಅಧಿಕಾರ ರಾಜಕಾರಣಕ್ಕೆ ಅಂಟಿಕೊAಡಿದ್ದರೂ, ತಮ್ಮ ಜವಾಬ್ದಾರಿ ಮತ್ತು ಕೆಲಸದ ಆಚೆಗೆ ರಾಜಕಾರಣವನ್ನು ಅಂಟಿಸಿಕೊಳ್ಳದ ಪ್ರಭಾಕರ್, ತಮ್ಮ ಅನುಭವಗಳನ್ನು ಅಕ್ಷರಕ್ಕೆ ಇಳಿಸಲು ಮುಂದಾದರೆ ಇವರ ಅನುಭವ ಮತ್ತು ಗ್ರಹಿಕೆ ರಾಜಕೀಯ ವಿಪ್ಲವಗಳಿಗೇ ಕಾರಣ ಆಗಬಹುದು.
ಅಧಿಕಾರ ರಾಜಕಾರಣದ ಗರ್ಭದಲ್ಲೇ ಇದ್ದರೂ ಇವೆರಡರಿಂದಲೂ ವೃತ್ತಿಪರ ಅಂತರವನ್ನು ಕಾಯ್ದುಕೊಳ್ಳುವುದು ಬಹಳ ಸವಾಲಿನದ್ದು.ಈ ಸವಾಲನ್ನು ಅತ್ಯಂತ ಸುಲಭವಾಗಿ ರೂಢಿಸಿಕೊಂಡವರು ಪ್ರಭಾಕರ್.
ಸಿದ್ದರಾಮಯ್ಯ ಅವರು ಮೊದಲ ಬಾರಿ ಮುಖ್ಯಮಂತ್ರಿ ಆದ ಹೊತ್ತಲ್ಲಿ ಅವರ ನೆರಳಿಗೆ ಬಂದ ಪ್ರಭಾಕರ್ ಅವರು, ಮುಖ್ಯಮಂತ್ರಿ ಅವಧಿ ಮುಗಿದ ಬಳಿಕವೂ ಆ ನೆರಳಿನಿಂದ ಹೊರಗೆ ಬರಲಿಲ್ಲ. ಹೊಸ ಮುಖ್ಯಮಂತ್ರಿಗಳ ನೆರಳಿಗೆ ಹಾತೊರೆಯಲಿಲ್ಲ. ದಿನದ ೧೬ ಗಂಟೆಯನ್ನು ಇದೇ ನೆರಳಿನಲ್ಲಿ ಕಳೆದರು.ಇಲ್ಲೇ ವಿಸ್ತರಿಸಿಕೊಂಡರು.
ಹೀಗಾಗಿ  ಕೆ.ವಿ.ಪ್ರಭಾಕರ್ ಅವರಿಗೆ ಸಂದಿರುವ “ಮಾಧ್ಯಮ ಸಲಹೆಗಾರ” ಎನ್ನುವ ಜವಾಬ್ದಾರಿ ಇವರು ಇದುವರೆಗೂ ನಿರ್ವಹಿಸಿಕೊಂಡು ಬರುತ್ತಿರುವ ದೊಡ್ಡ ಜವಾಬ್ದಾರಿಯ ಮುಂದುವರೆದ ಭಾಗ ಅಷ್ಟೆ.
ಇಲ್ಲಿ ಮತ್ತೊಂದು ಸಂಗತಿಯನ್ನು ಸ್ಮರಿಸಿಕೊಳ್ಳಲೇಬೇಕು. ಕೆ.ವಿ.ಪ್ರಭಾಕರ್ ಅವರ ಈ ಸಹನೆ ಮತ್ತು ಸಾಧನೆಗೆ ಕಾರಣ ಆದವರಲ್ಲಿ ಮೊದಲ ಪತ್ನಿ ಮೀರಾ ಮತ್ತು ಇವರ ದಾಂಪತ್ಯದ ಕುಡಿಗಳಾದ ಅಭಯ್ ಸೂರ್ಯ ಮತ್ತು ಐಶ್ವರ್ಯ ಅವರ ತ್ಯಾಗ ದೊಡ್ಡದಿದೆ.
ಅವರುಗಲಕು ಪ್ರಭಾಕರ್ ಅವರ ಕೆಲಸದ ಒತ್ತಡ ಮತ್ತು ಅನಿವಾರ್ಯತೆಗಳನ್ನು ಅತ್ಯಂತ ಸಮಾಧಾನ ಮತ್ತು ಸಹೃದಯತೆಯಿಂದ ಒಪ್ಪಿಕೊಂಡು ಸಂದರ್ಭದ ಜತೆ ರಾಜಿ ಮಾಡಿಕೊಂಡಿದ್ದಾರೆ.ಹೀಗಾಗಿ ಇವತ್ತಿನ ಈ ಸನ್ಮಾನದಲ್ಲಿ ಪ್ರಭಾಕರ್ ಅವರ ಪತ್ನಿ ಮತ್ತು ಮಕ್ಕಳ ಪಾಲೂ ಇದೆ ಎಂದು ನಾವು ಹೆಮ್ಮೆಯಿಂದ ಹೇಳುತ್ತೇವೆ.
ತಮ್ಮ ವೃತ್ತಿ ಬದುಕಿನ ಹೆದ್ದಾರಿಯಲ್ಲಿ ಕೆಂಪೇಗೌಡ ಪ್ರಶಸ್ತಿ, ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಪ್ರೆಸ್ ಕ್ಲಬ್ ಪ್ರಶಸ್ತಿ, ಕೋಲಾರ ಜಿಲ್ಲಾ ಪತ್ರಕರ್ತರ ಸಂಘ ಕೊಡ ಮಾಡುವ ಪತ್ರಿಕೋಧ್ಯಮದ ಹೆಮ್ಮೆ ಜಿ.ನಾರಾಯಣಸ್ವಾಮಿ ಪ್ರಶಸ್ತಿ, ರಾಜ್ಯ ಪತ್ರಕರ್ತರ ಸಂಘದ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರ, ಸನ್ಮಾನಗಳು ಈಗಾಗಲೇ ಪ್ರಭಾಕರ್ ಅವರಿಗೆ ಸಂದಿವೆ. ಈ ಸಾಲಿಗೆ ವಾರ್ತಾ ಇಲಾಖೆ ಕೂಡ ತನ್ನ ಕರ್ತವ್ಯವನ್ನು ಪಾಲಿಸುತ್ತಾ ಈಗ ಪ್ರಭಾಕರ್ ಅವರಿಗೆ ಸನ್ಮಾನಿಸಿದೆ.
ಕೆ.ವಿ.ಪ್ರಭಾಕರ್ ಅವರು ಹೀಗೆಯೇ ತಮ್ಮ ಕಾರ್ಯಕ್ಷಮತೆ ಮೂಲಕ  ಬಹಳ ದೊಡ್ಡದಾದ ಪತ್ರಿಕಾ ವೃತ್ತಿ ಬಾಂಧವರ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಾ ಸಾಗುತ್ತಾರೆ ಎನ್ನುವ ಭರವಸೆ ನಮಗಿದೆ.
ಇಲ್ಲಿಯವರೆಗೂ ಹತ್ತಾರು ಪತ್ರಕರ್ತರ  ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಹಲವು ಮಾಧ್ಯಮ ಸಂಸ್ಥೆಗಳಿಗೆ ನಾನಾ ಹಂತಗಳಲ್ಲಿ ನೆರವಾಗಿದ್ದಾರೆ. 
ಬಹಳ ದೊಡ್ಡ ಕುಟುಂಬ ಹೊಂದಿರುವ ಕೆ.ವಿ.ಪ್ರಭಾಕರ್ ಅವರಿಗೆ ದೇವರು ಅಷ್ಟೇ ದೊಡ್ಡ ಯಶಸ್ಸನ್ನು ಇನ್ನಷ್ಟು ದಯಪಾಲಿಸಿ ಆಯಸ್ಸು, ಆರೋಗ್ಯವನ್ನು ಹೆಚ್ಚಿಸಲಿ ಎಂದು ಸಮಸ್ತ ಪತ್ರಿಕಾ ವೃಂದದವರ ಪರವಾಗಿ ನಾವು ಪ್ರಾರ್ಥಿಸುತ್ತೇವೆ.

ಪತ್ರಕರ್ತರ ಸ್ನೇಹಿ ಶ್ರೀ ಗಿರೀಶ್ ಕೋಟೆ
ಶ್ರೀ ಗಿರೀಶ್ ಕೋಟೆ  ಮೂಲತಃ  ಭದ್ರಾವತಿಯ  ಶ್ರೀ ಕೋಟೆಗೌಡ ಮತ್ತು  ತಾಯಿ ಶ್ರೀಮತಿ ಸರೋಜಮ್ಮ ಮುದ್ದಿನ  ಹಿರಿಯ ಮಗ.  ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಭದ್ರಾವತಿ,  ಶಿವಮೊಗ್ಗ ಜಿಲ್ಲೆಯಲ್ಲಿ   ಪೊರೈಸಿ, ವೃತ್ತಿ ಬದುಕನ್ನು ಅರಸಿಕೊಂಡು  ಬೆಂಗಳೂರು ಮಹಾನಗರ ಸೇರಿದರು, ಇಲ್ಲಿ ಅಗ್ನಿ ವಾರ ಪತ್ರಿಕೆಯ ಪ್ರಮುಖ ವರದಿಗಾರರಾಗಿ ನಂತರ ವಿಜಯ ವಾಣಿ ವಿಜಯ ಕರ್ನಾಟಕದಲ್ಲಿ ಸುಮಾರು ೨ ದಶಕಗಳಿಂದ ಪತ್ರಿಕೋದ್ಯಮದಲ್ಲಿ ವಿವಿಧ  ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದರು. ಸಿದ್ದರಾಮಯ್ಯ ರವರು ವಿರೋಧ ಪಕ್ಷದ ನಾಯಕರಾಗಿದ್ದ 
ಸಂದರ್ಭದಲ್ಲಿ ಅವರ ಮಾಧ್ಯಮ ವಿಭಾಗದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈಗ ಮಾನ್ಯ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರ  ವಿಶೇಷ ಕರ್ತವ್ಯಾಧಿಕಾರಿಯಾಗಿ  ಕಾರ್ಯನಿರ್ವಹಿಸುತ್ತಿದ್ದಾರೆ. 
ಇವರು ಹಲವಾರು ಪ್ರಗತಿಪರ ಲೇಖನ, ಸಂಶೋಧನಾ ವರದಿಗಳು ಮತ್ತು ಸಮರ ಸೇನಾನಿ ಎಂಬ  ಗ್ರಂಥ,  ಇನ್ನೂ ಹಲವಾರು ವಿಶಿಷ್ಟವಾದ ಪುಸ್ತಕಗಳನ್ನು ಹೊರತಂದಿದ್ದಾರೆ. 
ಮಾಧ್ಯಮ ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟ ಮತ್ತು ವಿಶೇಷವಾದ ಛಾಪನ್ನು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.  ಅವರ ಮಾಧ್ಯಮ ಕ್ಷೇತ್ರ ವಿಶೇಷ  ಸೇವೆ ಮತ್ತು ಅವರ ಸಮಾಜ ಸೇವೆಯನ್ನು ಪರಿಗಣಿಸಿ  ಬೆಳಗಾವಿ ಜಿಲ್ಲೆಯ  ಎಲ್ಲ ಪತ್ರಕರ್ತರ ಸಮೂಹ ಸೇರಿ ಅವರಿಗೆ ಅಭಿಮಾನದ  ಅಭಿನಂದನೆ ಮಾಡುತ್ತಿರುವುದು ಶ್ಲಾಘನೀಯ. ಇನ್ನೂ ಇಂತಹ ನೂರಾರು ಗೌರವ ಪುರಸ್ಕಾರಗಳು ಗಿರೀಶ್ ಕೋಟೆ ಅವರ ಬೆನ್ನಿಗೆರಲಿ ಎಂದು ಆಶೀಸುತ್ತೇವೆ.

ಹಿರಿಯ ಪತ್ರಕರ್ತರಾದ  ಶ್ರೀ ಎಂ.ಕೆ.ಹೆಗಡೆ
ಈಗ ಶ್ರೀ ಎಂ ಕೆ ಹೆಗಡೆ ಅವರು ಮಾನ್ಯ  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆಯ ಮಾಧ್ಯಮ ಸಲಹೆಗಾರರಾಗಿ  ಕಾರ್ಯನಿರ್ವಹಿಸುತ್ತಿವುದು ನಮ್ಮ ಜಿಲ್ಲೆಗೆ ಹೆಮ್ಮೆಯ ವಿಷಯ.
ಹೆಗಡೆ ಅವರು ಉತ್ತರಕನ್ನಡ ಜಿಲ್ಲೆಯ ಶಿರ್ಶಿಯ ಹೆಗಡೆ ಕಟ್ಟಾ ಕಲ್ಮನೆ ಮೂಲದವರಾದ ಶ್ರೀ ಹೆಗಡೆ ಅವರು ಕಳೆದ ೩ ದಶಕಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ವಿವಿಧ ಪತ್ರಿಕೆಗಳ ಹಲವಾರು ವಿಭಾಗಗಳಲ್ಲಿ ಕಾರ್ಯನಿರ್ವಹಿಸಿ ಮಾಧ್ಯಮ ಕ್ಷೇತ್ರದಲ್ಲಿ ವಿಶಿಷ್ಟವಾದ ಕೃಷಿ ಮಾಡಿದ ಹೆಮ್ಮೆ ಅವರದು.
ನಾಡಿನ ಹೆಸರಾಂತ  ಪತ್ರಿಕೆಗಳಾದ ಕನ್ನಡಪ್ರಭ, ವಿಜಯಕರ್ನಾಟಕ, ವಿಜಯವಾಣಿ  ಹೀಗೆ ಹತ್ತು ಹಲವಾರು ಪತ್ರಿಕೆಗಳ  ಎಲ್ಲ ವಿಭಾಗಗಳಲ್ಲಿ ಕಾರ್ಯನಿರ್ವಹಿಸಿದವರು.
ಬೆಳಗಾವಿಯಿಂದ ಪ್ರಗತಿ ವಾಹಿನಿ ಎಂಬ ಸುದ್ದಿ ಸಂಸ್ಥೆಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ.
ಹೆಗಡೆ ಅವರ ಮಾಧ್ಯಮ ಕ್ಷೇತ್ರದ ಸಾಧನೆ ಗುರುತಿಸಿ ಹಲವಾರು ಸಂಘ –ಸಂಸ್ಥೆಗಳು ಅವರಿಗೆ ಗೌರವಸನ್ಮಾನನೀಡಿವೆ.
ಬೆಳಗಾವಿಯಲ್ಲಿ ಕುಟುಂಬ ವಾಸವಾಗಿದ್ದು, ಅವರ ಮುಂದಿನ ಮಾಧ್ಯಮ ಪಯಣ  ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸುತ್ತೇವೆ.

ಸ್ನೇಹಜೀವಿ ಶ್ರೀ ಕೆ.ಪಿ. ಪುಟ್ಟಸ್ವಾಮಯ್ಯ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ  ಇಲಾಖೆಯ ಉಪ ನಿರ್ದೇಶಕ(ವಾಣಿಜ್ಯ ಪ್ರಚಾರ)
ರಾದ ಸ್ನೇಹಜೀವಿ ಕೆ.ಪಿ. ಪುಟ್ಟಸ್ವಾಮಯ್ಯ ಅವರು  ನಿವೃತ್ತಿ ಹೊಂದಿ ಈಗ ಮಾನ್ಯ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರ  ವಿಶೇಷ ಕರ್ತ್ಯವಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪತ್ರಕರ್ತರ ವಲಯದ  ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿರುವ ಇವರು ಸದಾ  ಹಸನ್ಮುಖಿ. ತಮ್ಮ ಸರಳತೆ ಮತ್ತು ಸಜ್ಜನಿಕೆಯಿಂದ  ಹಿರಿ ಕಿರಿಯರ ಜತೆ ಸಲುಗೆ ಬೆಳೆಸಿಕೊಂಡರೂ ಎಂದೂ ಎಲ್ಲೆ ಮೀರದವರು. ಕೆ.ಪಿ. ಪುಟ್ಟಸ್ವಾಮಯ್ಯ ಅವರು ರೇಷ್ಮೆ ಹಾಗೂ  ಮಾವು ಖ್ಯಾತಿಯ ರಾಮನಗರ ಮೂಲದವರು.  ೧೯೯೫ರಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಸೇರ್ಪಡೆಗೊಂಡವರು. ಹಾಸನ ಜಿಲ್ಲಾ  ಕಚೇರಿಯಲ್ಲಿ ವಾರ್ತಾ ಸಹಾಯಕರ ಹುದ್ದೆಗೆ  ನೇಮಕಗೊಂಡ ನಂತರ ತಮ್ಮ ವೃತ್ತಿಯಲ್ಲಿ  ಧ್ಯಾನಾಸಕ್ತಿಯಿಂದ ತೊಡಗಿಸಿಕೊಂಡರು. ಇಲ್ಲಿ ಒಂದಷ್ಟು ಅನುಭವ ಗಳಿಸುತ್ತಿದ್ದಂತೆ ಅವರು ಕೆಲ  ಕಾಲದ ನಂತರ, ಅದೇ ಜಿಲ್ಲೆಯ ಸಕಲೇಶಪುರ ಉಪ  ವಿಭಾಗೀಯ ಕಚೇರಿಗೆ ವರ್ಗಾವಣೆಗೊಂಡಿದ್ದಾರೆ.  ಅಲ್ಲಿ ಸಹಾಯಕ ನಿರ್ದೇಶಕರ ಹುದ್ದೆಯಲ್ಲಿ ಅವರು  ನಿರ್ವಹಿಸಿದ ಕಾರ್ಯವನ್ನು ಆ ಭಾಗದ ಪತ್ರಕರ್ತರು  ಇಂದಿಗೂ ಅಪಾರವಾಗಿ ಸ್ಮರಿಸುತ್ತಿದ್ದಾರೆ. 
ನಂತರ, ೨೦೦೬ರಲ್ಲಿ ಕೆ.ಪಿ. ಪುಟ್ಟಸ್ವಾಮಯ್ಯ  ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಚೇರಿಗೆ    ವರ್ಗಾವಣೆಗೊಂಡಿದ್ದಾರೆ. ಆ ನಂತರ ಕೆಲವೇ  ತಿಂಗಳಲ್ಲಿ ಅವರನ್ನು ವಿಧಾನಸೌಧದ ಪತ್ರಿಕಾ ಕೊಠಡಿಯ ಉಸ್ತುವಾರಿಯಾಗಿ ನೇಮಿಸಲಾಯಿತು. 
ಅಂದಿನಿಂದ ಸತತ ೧೭ ವರ್ಷಗಳಿಗೂ ಹೆಚ್ಚು ಕಾಲ  ವಿಧಾನಸೌಧದಲ್ಲಿ ನಡೆದ ಎಲ್ಲಾ  ಕಾರ್ಯಕ್ರಮಗಳು  ಮತ್ತು ಕಾರ್ಯ ಕಲಾಪಗಳಿಗೆ, ಸಭೆ ಮತ್ತು  ಸಮಾರಂಭಗಳಿಗೆ ಅವರು ಸಾಕ್ಷಿಯಾಗಿದ್ದಾರೆ. ಈ  ಸಂದರ್ಭದಲ್ಲಿ ಅವರು ಮಾಧ್ಯಮ ಸಮನ್ವಯ  ಕಾರ್ಯವನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರ್ವಹಿಸಿದ್ದಾರೆ. 
ಅಷ್ಟೇ ಅಲ್ಲ ! ಸಚಿವರೊಂದಿಗೂ ಸಮನ್ವಯ  ಸಾಧಿಸಿ ಇಲಾಖೆಯ ಕೀರ್ತಿ ಗೌರವಗಳನ್ನು ಹೆಚ್ಚಿಸಿದ್ದಾರೆ.  ಬೆಂಗಳೂರಿನ ಮಹಾರಾಣಿ ಮಹಿಳಾ ವಿಶ್ವವಿದ್ಯಾಲಯದ  ರೇಷ್ಮೆ ಕೃಷಿ ನಿಕಾಯ ವಿಭಾಗದಲ್ಲಿ ಇವರ ಮಡದಿ  ಡಾ. ಎಂ.ಸಿ. ಮಂಜುಳಾ ಪ್ರಾಧ್ಯಾಪಕರಾಗಿ ಸೇವೆ  ಸಲ್ಲಿಸುತ್ತಿದ್ದಾರೆ. ಇವರ ಪುತ್ರ ಸಿದ್ಧಾರ್ಥ ದೆಹಲಿಯ  ಇಂಡಿಯನ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ  ಜವಳಿ ತಂತ್ರಜ್ಞಾನ ಕುರಿತು ವ್ಯಾಸಂಗ  ಮಾಡುತ್ತಿದ್ದಾರೆ. ಪುಟ್ಟ ಕುಟುಂಬದೊAದಿಗೆ  ನೆಮ್ಮದಿಯ ಬದುಕು ಸಾಗಿಸುತ್ತಿರುವ  ಪುಟ್ಟಸ್ವಾಮಯ್ಯ ಅವರಿಗೆ ಶುಭವಾಗಲಿ. 
ನಿವೃತ್ತಿಯ  ನಂತರವೂ ಮುಖ್ಯಮಂತ್ರಿಗಳ ಮಾಧ್ಯಮ ವಿಭಾಗದಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿರುವ  ಅವರ ಮಾಧ್ಯಮ ಕ್ಷೇತ್ರ ವಿಶೇಷ  ಸೇವೆ ಮತ್ತು ಅವರ ಸಮಾಜ ಸೇವೆಯನ್ನು ಪರಿಗಣಿಸಿ ಬೆಳಗಾವಿ ಜಿಲ್ಲೆಯ  ಎಲ್ಲ ಪತ್ರಕರ್ತರ ಸಮೂಹ ಸೇರಿ ಅವರಿಗೆ ಅಭಿಮಾನದ ಅಭಿನಂದನೆ ಮಾಡುತ್ತಿರುವುದು ಶ್ಲಾಘನೀಯ.
ಇನ್ನೂ ಇಂತಹ ಹತ್ತಾರು ಗೌರವ ಪುರಸ್ಕಾರಗಳು ಅವರ ಮುಡಿಗೆರಲಿ ಎಂದು ಆಶೀಸುತ್ತೇವೆ.

ಹಿರಿಯ ಪತ್ರಕರ್ತ  ಶ್ರೀ ದೀಪಕ ಕರಾಡೆ
ಈಗ ಶ್ರೀ ದೀಪಕ ಕರಾಡೆ ಅವರು ಮಾನ್ಯ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರ ತಾಂತ್ರಿಕ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿವುದು ನಮಗೆ ಹೆಮ್ಮೆಯ ವಿಷಯ.
ದೀಪಕ ಮೂಲತಃ ಧಾರವಾಡದದವರಾಗಿದ್ದು ಅವರ ತಂದೆ ರಾಮಚಂದ್ರ, ರತ್ನಾ ಪ್ರಿಂಟಿAಗ್ ಉಧ್ಯಮದಲ್ಲಿ ಹೆಸರು ಮಾಡಿದವರು, ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋಧ್ಯಮ ವಿಭಾಗದಲ್ಲಿ  ಶಿಕ್ಷಣ ಪಡೆದು, ತದನಂತರ  ವೆಬ್ ದುನಿಯಾ, ದೂರದರ್ಶನ. ಶ್ರೀಶಂಕರ್, ಐಬಿಎಂಆರ್, ಕವಿವಿಯಲ್ಲಿ ಪ್ರಾಧ್ಯಾಪಕರಾಗಿ  ಕಾರ್ಯನಿರ್ವಹಿಸಿ, 
ತದನತರ ಕಳೆದ ಬಾರಿಯ ಕಾಂಗ್ರೆಸ್ ಸರ್ಕಾರದ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಸಚಿವರಾಗಿದ್ದ ಶ್ರೀ ಶಿವರಾಜ್ ತಂಗಡಗಿಯವರಿಗೆ ಮಾಧ್ಯಮ ಸಂಯೋಜಕರಾಗಿ  ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದರು.
ತದನಂತರ ಬಂದ ಬಿಜೆಪಿ ಸರ್ಕಾರದಲ್ಲಿ ಮಾನ್ಯ ಪಶುಸಂಗೋಪನಾ ಸಚಿವರ ಮಾಧ್ಯಮ ಸಂಯೋಜಕರಾಗಿ ಕಾರ್ಯನಿರ್ವಹಿಸಿ, ನಂತರ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ್ ಬೊಮ್ಮಾಯಿ ರವರ ಮಾಧ್ಯಮ ಸಲಹೆಗಾರರ ತಾಂತ್ರಿಕ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.
ಅವರ ಮಡದಿ ಸುಶೀಲಾ ಪ್ರಜಾವಾಣಿ ಪತ್ರಿಕೆಯ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮಗಳು ರಾಗಸನ್ನಿಧಿ ಪ್ರಾಥಮಿಕ ಶಿಕ್ಷಣ ಪಡೆಯುತ್ತಿದ್ದು ಸಧ್ಯ ಬೆಂಗಳೂರಿನಲ್ಲಿಯೇ ವಾಸವಾಗಿದ್ದಾರೆ.
ಇವರ ಮಾಧ್ಯಮ ಸೇವೆಯನ್ನು ಪರಿಗಣಿಸಿ ಹಲವಾರು ಸಂಘ-ಸAಸ್ಥೆಗಳು ಗೌರವಿಸಿ ಸನ್ಮಾನಿಸಿವೆ. ಅವರ ಮಾಧ್ಯಮ ಕ್ಷೇತ್ರದ ಸೇವೆ ನಿರಂತರವಾಗಿ ಎತ್ತರಕ್ಕೆರಲಿ ಎಂದು  ಶುಭ ಹಾರೈಸುತ್ತೇವೆ. 
ಮಾಧ್ಯಮದವರ ಮಿತ್ರ  ಶ್ರೀ ಕೆ ಎಸ್ ನಾಗರಾಜ್
ಈಗ ಕೆ ಎಸ್ ನಾಗರಾಜ್ ಅವರು ಮಾನ್ಯ ಮುಖ್ಯಮಂತ್ರಿಗಳ ಕಚೇರಿ ಮಾಧ್ಯಮ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿವುದು ನಮ್ಮ ಜಿಲ್ಲೆಗೆ ಹೆಮ್ಮೆಯ ವಿಷಯ.
ಬೆಳಗಾವಿ ಜಿಲ್ಲೆಯ ಘಟಪ್ರಭಾ ಮೂಲದ ಶ್ರೀ ಕೆ ಎಸ್ ನಾಗರಾಜ್ ಅವರ ತಂದೆ ಸಿದ್ದಲಿಂಗಪ್ಪ, ತಾಯಿ ಬೇಬಿತಾಯಿ ಕಿರಿಯ ಮಗ, ಪ್ರಾಥಮಿಕ ಶಿಕ್ಷಣ ಮತ್ತು ಪ್ರೌಢಶಿಕ್ಷಣ ಘಟಪ್ರಭಾದಲ್ಲಿ ಪೂರೈಸಿ ತದನಂತರ ಬೆಳಗಾವಿಗೆ ಬಂದು ಉನ್ನತ ಶಿ್ಕ್ಷಣ ಮುಗಿಸಿ, ಅಲ್ಲಿಯೇ ಹಸಿರುಕ್ರಾಂತಿ ದಿನಪತ್ರಿಕೆಯಲ್ಲಿ ವೃತ್ತಿ ಬದುಕನ್ನು ಆರಂಭಿಸಿದವರು.
ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸಿ, ತದನಂತರ ಹೈದ್ರಾಬಾದ ನ ಈಟಿ ಕನ್ನಡದಲ್ಲಿ ಕೆಲಸ ಮಾಡಿ, ತದನಂತರ ಬೆಂಗಳೂರಿಗೆ ಬಂದು, ಬೆಂಗಳೂರಿನಲ್ಲಿ ಹಲವು ಟಿವಿ, ಡಿಜಟಲ್ ಮೇಡಿಯಾಗಳಲ್ಲಿ ಕಾರ್ಯನಿರ್ವಹಿಸಿ ನಂತರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಹಾಪೌರರ ಮಾಧ್ಯಮ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದರು.
ಇವರು ಈ ಹಿಂದೆ ವಿಧಾನಪರಿಷತ್ ಸಭಾಪತಿಗಳ ಮಾಧ್ಯಮ ಕಾರ್ಯದರ್ಶಿಯಾಗಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ಮಾಧ್ಯಮ ಕಾರ್ಯದರ್ಶಿಯಾಗಿ, ಹಾಗೂ ವಿಧಾನ ಪರಿಷತ್ ವಿರೋಧಪಕ್ಷದ ನಾಯಕರ ಮಾಧ್ಯಮ ಕಾರ್ಯದರ್ಶಿಯಾಗಿ , ಸಾರಿಗೆ ಸಚಿವರ ಮಾಧ್ಯಮ ಕಾರ್ಯದರ್ಶಿಯಾಗಿ, ಪ್ರತಿಷ್ಠಿತ ಬೆಂಗಳೂರು ಪ್ರೆಸ್ ಕ್ಲಬ್ ನ ಪದಾಧಿಕಾರಿಯಾಗಿ, ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರ ಮತ್ತು ವರದಿಗಾರರ ಸಂಘದ, ಹಾಗೂ ವಿವಿಧ ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದಾರೆ.
ಇವರ ಮಾಧ್ಯಮ ಕ್ಷೇತ್ರದ ಸೇವೆಯನ್ನು ಗುರುತಿಸಿ ನಾಡಿನ ಪ್ರತಿಷ್ಠಿತ ಪ್ರಶಸ್ತಿಯಾದ ನಾಡಪ್ರಭು ಕೇಂಪೇಗೌಡ ಪ್ರಶಸ್ತಿ ನೀಡಲಾಗಿದೆ.   ಈಟಿವಿ ಕನ್ನಡ,  ರಾಜ್ಯ ಓಬಿಸಿ ಸಂಪಾದಕರ ವರದಿಗಾರರ ಸಂಘ,  ಹಲವು ಕನ್ನಡ ಸಂಘ-ಸಂಸ್ಥೆಗಳು, ಪ್ರತಿಷ್ಠಾನಗಳು ಮತ್ತು ಮಾಧ್ಯಮ ಸಂಸ್ಥೆಗಳು ಪ್ರಶಸ್ತಿಗಳನ್ನು ನೀಡಿ ಅಭಿನಂದಿಸಿವೆ.
ಶ್ರೀಯುತರ ಮಡದಿ ಶ್ರಿಮತಿ ಅರ್ಚನಾ ಅವರು ಖಾಸಗಿ ಶಾಲೆಯೊಂದರ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರೆ, ಒಬ್ಬಳು ಮಗಳು ಮತ್ತು ಮಗ ಪ್ರಾಥಮಿಕ ಶಿಕ್ಷಣ ಪಡೆಯುತ್ತಿದ್ದಾರೆ.ಅವರ ಮುಂದಿನ ಬದುಕು ಹಸನಾಗಿರಲಿ ಎಂದು ಶುಭ ಹಾರೈಸುತ್ತೇವೆ.