ಸಿಂದಗಿ 11: ಗುಣಾತ್ಮಕ ಶಿಕ್ಷಣಕ್ಕೆ ಮತ್ತೊಂದು ಹೆಸರೇ ಸಿಂದಗಿಯ ಪಿಇಎಸ್ ಸಂಸ್ಥೆಯಾಗಿದೆ. ವಿದ್ಯಾರ್ಥಿಗಳು ಪರಿಶ್ರಮ ಪಟ್ಟಲ್ಲಿ ಯಶಸ್ಸು ಕಾಣಲು ಸಾಧ್ಯವಿದೆ. ಸಾಧನೆಗೆ ಬಡತನ, ಧರ್ಮ, ಜಾತಿ, ಭಾಷೆ ಯಾವುದೂ ಅಡ್ಡಿಯಾಗುವುದಿಲ್ಲ ಎಂದು ವಿಶ್ರಾಂತ ಉಪನ್ಯಾಸಕ ಎಸ್.ವಾಯ್. ಬೀಳಗಿ ಹೇಳಿದರು.
ಪಟ್ಟಣದ ಪಿಇಎಸ್ ಸಂಸ್ಥೆಯ ಸಭಾಭವನದಲ್ಲಿ ಮಂಗಳವಾರ ಪಿ.ಇ.ಎಸ್. ಗಂಗಾಧರ ಎನ್. ಬಿರಾದಾರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯಕ್ಕೆ 2025-26ನೇ ಸಾಲಿಗೆ ಪ್ರವೇಶ ಪಡೆದ ಪ್ರಥಮ ವರ್ಷದ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಶಿಕ್ಷಕರು, ಪಾಲಕರು, ವಿದ್ಯಾರ್ಥಿಗಳೆಂಬ ಆಧಾರ ಸ್ಥಂಭದ ಮೇಲೆಯೇ ಶಿಕ್ಷಣ ನಿಂತಿದೆ. ಕಠಿಣವಾದ ಕೆಲಸಗಳನ್ನು ಸವಾಲಾಗಿ ಸ್ವೀಕರಿಸಿದಲ್ಲಿ ವಿದ್ಯಾರ್ಥಿಗಳು ಅಂದುಕೊಂಡ ಗುರಿಯನ್ನು ಸಾಧಿಸಬಹುದಾಗಿದೆ. ವಿಶ್ರಾಂತ ಪ್ರಾಚಾರ್ಯ ಬಿ.ಪಿ. ಕರ್ಜಗಿ ಅವರು ಕಟ್ಟಿದ ಪಿಇಎಸ್ ಶಿಕ್ಷಣ ಸಂಸ್ಥೆ ಹೆಮ್ಮರವಾಗಿ ಬೆಳೆಯುತ್ತಿದೆ. ಇಲ್ಲಿ ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಸುತ್ತಿರುವುದು ವಿಶೇಷವಾಗಿದೆ. ಆದ್ದರಿಂದ ಪ್ರಥಮ ವರ್ಷಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿಗಳು ಕಾಲೇಜಿನ ಸಮಯವನ್ನು ವ್ಯರ್ಥಮಾಡದೇ ಸತತ ಅಧ್ಯಯನ ಮಾಡಿ. ಘಳಿಯದ ವಿಷಯವನ್ನು ಆಯಾ ವಿಷಯದ ಉಪನ್ಯಾಸಕೊಂದಿಗೆ ಚರ್ಚಿಸಿ ವಿಷಯ ಜ್ಞಾನ ಪಡೆದುಕೊಳ್ಳಿ. ಪಿಯುಸಿ ಹಂತದಲ್ಲಿ ಉತ್ತಮ ಸಾಧನೆ ಮಾಡುವ ಜೊತೆಗೆ ಹೆತ್ತವರಿಗೂ, ಕಾಲೇಜಿಗೂ ಕೀರ್ತಿ ತನ್ನಿ ಎಂದು ಶುಭಹಾರೈಸಿದರು.
ಸಾನಿಧ್ಯ ವಹಿಸಿದ ಆಲಮೇಲ ವಿರಕ್ತಮಠದ ಶ್ರೀ ಜಗದೇವ ಮಲ್ಲಿಬೊಮ್ಮಯ್ಯ ಸ್ವಾಮಿಜಿ ಮಾತನಾಡಿ, ವಿದ್ಯಾರ್ಥಿ ಜೀವನ ಅತ್ಯಮೂಲ್ಯವಾಗಿದ್ದು. ವಿದ್ಯಾರ್ಥಿ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ಹರಿಸಿ, ಭವಿಷ್ಯ ರೂಪಿಸಿಕೊಳ್ಳಬೇಕು ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡುವುದರ ಜತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸಬೇಕು ಮತ್ತು ಮಕ್ಕಳ ಸವಾಂರ್ಗೀಣ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಗೌರವಕಾರ್ಯದರ್ಶಿ ಬಿ.ಪಿ. ಕರ್ಜಗಿ ಮಾತನಾಡಿ, ಸಂಸ್ಥೆಯಲ್ಲಿ ಕೊಡುವಂತ ಶಿಕ್ಷಣವನ್ನು ಪ್ರಾಮಾಣಿಕವಾಗಿ ಅಧ್ಯಯನ ಮಾಡಿದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ. ಕಲಿಕೆ ಜೊತೆಗೆ ಸಂಸ್ಕಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳ ಬೇಕು. ವಿದ್ಯಾರ್ಥಿಗಳು ಮೊದಲು ಸಮಯಪಾಲನೆ ಅನುಸರಿಸಬೇಕು. ಕಾಲೇಜಿನಲ್ಲಿ ಅನುಭವಿ ಉಪನ್ಯಾಸಕರಿದ್ದು ಅವರು ಹೇಳಿಕೊಡುವ ಪಾಠ ಅರಿತು ಅಧ್ಯಯನ ಮಾಡಿ. ಉತ್ತಮ ಸಾಧನೆ ಮಾಡುವ ಜೊತೆಗೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದು ಹೇಳಿದರು.
ಸಂಸ್ಥೆ ಆಢಳಿತಾಧಿಕಾರಿ ಐ.ಬಿ. ಬಿರಾದಾರ, ನಿವೃತ್ತ ಉಪನ್ಯಾಸಕ ಪಿ.ಎಂ. ಮಡಿವಾಳರ, ಸಾಹಿತಿ ಕೆ.ಎಚ್. ಸೋಮಾಪೂರ, ಪದವಿ ಕಾಲೇಜಿನ ಪ್ರಾಚಾರ್ಯ ಜಿ.ಎಸ್. ಕಡಣಿ, ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಆರ್.ಬಿ. ಗೋಡಕರ ವೇದಿಕೆ ಮೇಲೆ ಇದ್ದರು.
ವಿದ್ಯಾರ್ಥಿಗಳು, ಉಪನ್ಯಾಸಕರು ಭಾಗವಹಿಸಿದ್ದರು.