ಮಂಜುನಾಥ್ ಕೆ: ಹೂವಿನ ಹಿಪ್ಪರಗಿಯಲ್ಲಿ ಮುದ್ದೇಬಿಹಾಳ, ಬ.ಬಾಗೇವಾಡಿ ತಾಲೂಕು ಚಿತ್ರಕಲಾ ಶಿಕ್ಷಕರ ಕಾರ್ಯಾಗಾರ ಉದ್ಘಾಟನೆ ಬೋಧನಾ ಸಾಮರ್ಥ್ಯ ಹೆಚ್ಚಳಕ್ಕೆ ಕಾರ್ಯಾಗಾರ ಸಹಕಾರಿ

ಲೋಕದರ್ಶನ ವರದಿ 


ಬಸವನ ಬಾಗೇವಾಡಿ 07: ಶಿಕ್ಷಕ ವೃತ್ತಿಯ ಬೋಧನಾ ಸಾಮರ್ಥ್ಯ ವರ್ಧನೆಗೆ ವಿಷಯ ವೇದಿಕೆಯ ಕಾರ್ಯಾಗಾರಗಳು ತುಂಬಾ ಸಹಕಾರಿಯಾಗಿವೆ ಎಂದು ಜಿಲ್ಲಾ ಸಂಪನ್ಮೂಲ ವ್ಯಕ್ತಿ, ಚಿತ್ರಕಲಾವಿದ, ಶಿಕ್ಷಕ ಮಂಜುನಾಥ್ ಮಾನೆ ಅಭಿಪ್ರಾಯಪಟ್ಟರು. 

    ತಾಲೂಕಿನ ಹೂವಿನ ಹಿಪ್ಪರಗಿಯ ಎಂ.ಜಿ.ಕೋರಿ, ಡಾ.ಬಿ.ಜಿ.ಬ್ಯಾಕೋಡ ಪ್ರೌಢಶಾಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವಿಜಯಪುರ ಹಾಗು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಬ.ಬಾಗೇವಾಡಿ ಇವರ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ  ಮುದ್ದೇಬಿಹಾಳ ಹಾಗು ಬಸವನ ಬಾಗೇವಾಡಿ ತಾಲ್ಲೂಕಿನ ಚಿತ್ರಕಲಾ ಶಿಕ್ಷಕರ ವಿಷಯ ವೇದಿಕೆ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. 

    ನಿರಂತರ ಬೋಧನಾ ಪ್ರಕ್ರಿಯೆಯಲ್ಲಿ ಉತ್ಸಾಹದಿಂದ ತನ್ಮಯರಾಗಲು ಹಾಗು ಇತರ ಹೊಸತನದ ವಿಚಾರಧಾರೆ ಮಂಡಿಸಲು ಇಂಥ ಕಾರ್ಯಾಗಾರಗಳು ಶಿಕ್ಷಕ ಬಳಗಕ್ಕೆ ಪೂರಕ ಪ್ರೇರಣೆ ನೀಡುತ್ತವೆ ಅಲ್ಲದೇ ಮಕ್ಕಳ ಶ್ರೇಯೋಭಿವೃದ್ಧಿಯ ಕಲಿಕಾ ಚಟುವಟಿಕೆ ಮಟ್ಟ ವೃದ್ಧಿಸಲು ಉತ್ತೇಜನ ಕೊಡುತ್ತವೆ ಎಂದರು. 

    ವಿದ್ಯಾರ್ಥಿಗಳಲ್ಲಿ ಹುದುಗಿರುವ ಸುಪ್ತ ಭಾವನೆಗಳನ್ನು ಚಿತ್ರಕಲೆ ಮೂಲಕ ಅರಳಿಸಿ ಶೈಕ್ಷಣಿಕ ಕಲಿಕಾಭಿರುಚಿ ಬೆಳೆಸಿ ಸ್ಪರ್ಧಾತ್ಮಕ ಅಂಗಳದಲ್ಲಿ ಆತ್ಮವಿಶ್ವಾಸದಿಂದ ಕರೆದೊಯ್ಯುಬೇಕು. ಚಿತ್ರಕಲಾ ಶಿಕ್ಷಣ ಮಕ್ಕಳಿಗೆ ವಿಶಿಷ್ಟ ರೀತಿಯ ಅನುಭವ ನೀಡುವದಲ್ಲದೇ ಉಲ್ಲಾಸದಲ್ಲಿ ವಿದ್ಯಾರ್ಜನೆಗೆ ತಲ್ಲೀನರಾಗುವಂತೆ ಆಸಕ್ತಿ ಕೆರಳಿಸುತ್ತದೆ. ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಗುಣಮಟ್ಟಕ್ಕೂ ಚಿತ್ರಕಲಾಭ್ಯಾಸ ನಂಟು  ಹೊಂದಿದ್ದು  ಆ ದಿಸೆಯಲ್ಲಿ ಚಿತ್ರಕಲಾ ಶಿಕ್ಷಕ ಸಮೂಹ ಕ್ರಿಯಾಶೀಲರಾಗಿ ವೃತ್ತಿ ಕಾಯಕಕ್ಕೆ ನವೋಲ್ಲಾಸ ತುಂಬುತ್ತಾ ಸಾಗಬೇಕು ಎಂದರು. 

     ಮುಖ್ಯ ಅತಿಥಿ ಪ್ರಾಚಾರ್ಯ ಎಸ್‌.ಕೆ. ಭಜಂತ್ರಿ ಮಾತನಾಡಿ, ವಿಶಿಷ್ಟ ಜ್ಞಾನ, ಕೌಶಲ್ಯ ದಿಂದ ಕೂಡಿರುವ ಚಿತ್ರಕಲೆ ವಿಷಯ ಮಕ್ಕಳ ಅಂತರಿಕ ಹಾಗು ಬಾಹ್ಯ ಜ್ಞಾನ ಗುರುತಿಸುಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಆ ಕಾರಣ ಮಕ್ಕಳಿಗೆ ಪ್ರೋತ್ಸಾಹದ ಸಿಂಚನ ನೀಡಿ.ಚಿತ್ರ ಬಿಡಿಸುವ ಕಲಾ ನೈಪುಣ್ಯತೆ ಬೆಳೆಸಿ ಎಂದರು. 

     ಕ್ಲಿಷ್ಟಕರ ಚಿತ್ರಗಳನ್ನು ಸರಳೀಕೃತ ರೂಪದಲ್ಲಿ ಚಿತ್ರಿಸುವ ಬಗೆ ಮನದಟ್ಟು ಮಾಡಿಕೊಡಿ. ಸರಳ ಗೈ ಚಿತ್ರಣ ವಿಜ್ಞಾನ ಕಲಿಕೆಗೆ ಅನುಕೂಲ. ಪ್ರಾಣಿ,ಪಕ್ಷಿ ಚಿತ್ರಗಳಿಗೆ ಆದ್ಯತೆ ನೀಡಿದರೆ ಮಕ್ಕಳ ಕಲಿಕೆ ಪರಿಣಾಮಕಾರಿ ಅಗಬಲ್ಲದು. ಶಿಕ್ಷಕರು ಶಿಕ್ಷಣದ ವಿಷಯ ಮೂಲ ಅಧೀನದಲ್ಲಿರಬೇಕು. ಬೋಧನಾ ವಿಶೇಷ ಪದ್ದತಿ ಶಿಕ್ಷಕರಲ್ಲಿದ್ದರೆ ಮಾತ್ರ ಪಾಠ ಪ್ರವಚನ ಉತ್ಕಟವಾಬಲ್ಲದು ಎಂದರು.  

   ಗುರು ಬಳಗ ಎಷ್ಟೇ ಅನುಭವ ಹೊಂದಿದರು ಸಹ ಹೊಸ ಹೊಸ ವಿಚಾರಾಂಶ ಅರಿಯಬೇಕು.ಅಂದಾಗ ಬೋಧನೆಯಲ್ಲಿ ಆತ್ಮತೃಪ್ತಿ ಪಡೆಯಲು ಸಾಧ್ಯ. ಮಕ್ಕಳಲ್ಲಿ ಕಲಿಕಾಸಕ್ತಿ ಮೂಡಿಸುವರೇ ನಿಜವಾದ ಆದರ್ಶ ಶಿಕ್ಷಕರು. ನಿರಾಸಕ್ತಿ ಮೂಡಿಸುವರು ಎಂದೂ ಒಳ್ಳೆಯವರಾಗಿ ಮಕ್ಕಳ ದೃಷ್ಟಿಯಲ್ಲಿ ಬಿಂಬಿತರಾಗಲಾರರು ಎಂದರು. 

    ಧನಾತ್ಮಕ, ಜ್ಞಾನಾತ್ಮಕ, ಭಾವನಾತ್ಮಕ, ಕ್ರಿಯಾತ್ಮಕ ಶಕ್ತಿ ಕೌಶಲ್ಯ ಮಕ್ಕಳ ವಲಯದಲ್ಲಿ ಮೂಡಿಸಿ ವೃತ್ತಿ ಗೌರವ ಹೆಚ್ಚಿಸಿಕೊಳ್ಳಲು ಶಿಕ್ಷಕರು ಮುಂದಾಗಬೇಕು ಎಂದು ಅವರು ಸೂಚ್ಯವಾಗಿ ನುಡಿದರು.  

    ಆಯ್‌.ಆರ್‌.ಮಠ ಕಾರ್ಯಾನುಭ ಕುರಿತು ಉಪನ್ಯಾಸ ನೀಡಿ, 1986 ರಲ್ಲಿ ಸಾಮಾಜಿಕ ಉಪಯುಕ್ತ ಉತ್ಪಾದನಾ ಕಾರ್ಯ (ಎಸ್ ಯುಪಿಡಬ್ಲೂ) ವಿಷಯ ಪಠ್ಯ ಪುಸ್ತಕದಲ್ಲಿ ಸೇರಿ​‍್ಡಸಿದ್ದು ಇದು ಮಕ್ಕಳು ಸ್ವಾವಲಂಬಿ ಬದುಕು ಕಂಡುಕೊಳ್ಳಲು ಪ್ರಯೋಜನಕಾರಿ ಅಗಿದೆ ಎಂದರು. ಸಿದ್ದವಸ್ತುಗಳ ತಯಾರಿಕೆಯ ಸುಲಭ ವಿಧಾನ ತಿಳಿಸಿಕೊಟ್ಟರು. ತಲೆ ನೋವು ನಿವಾರಕ ಝಂಡುಬಾಮ್, ವಿಕ್ಸ್‌ ತಯಾರಿಕೆ ಕುರಿತು ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳೆದುರು ಪ್ರಾತ್ಯಕ್ಷಿಕೆ ನೀಡಿದರು.  

   ಅಧ್ಯಕ್ಷತೆ ಗ್ರಾಮಾಂತರ ವಿ.ವ.ಸಂಘದ ಅಧ್ಯಕ್ಷ ಎಸ್‌.ಎಸ್‌.ಬ್ಯಾಕೋಡ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಂಸ್ಥೆ ಕಾರ್ಯದರ್ಶಿ ಎಂ.ಎಸ್‌.ಬ್ಯಾಕೋಡ, ನಿದೇ9ಶಕ ಸಿ.ಎಸ್‌.ಗಬ್ಬೂರ, ಮುಖ್ಯ ಶಿಕ್ಷಕ ವಿ.ಡಿ.ಲಮಾಣಿ,ಸುರೇಶ ಬಾಬು ಆಗಮಿಸಿದ್ದರು. 

    ತಾಲೂಕು ಚಿಶಿ ಸಂಘದ ಅಧ್ಯಕ್ಷ ಆರ್‌.ಡಿ.ನಾಯಕ, ಮಾಜಿ ಜಿಲ್ಲಾಧ್ಯಕ್ಷ ಎಸ್‌.ಆಯ್‌.ಬಗಲಿ ಇತರರು ವೇದಿಕೆಯಲ್ಲಿದ್ದರು. 

  ಸುದೀರ್ಘ ಸೇವಾ ಅವಧಿ ಪೂರೈಸಿ ಸೇವಾ ನಿವೃತ್ತಿ ಹೊಂದಿದ ಖ್ಯಾತ ಕಲಾವಿದ ಬ.ಬಾಗೇವಾಡಿ ಸರ್ವೋದಯ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ ಕೆ.ಗಂಗಾಧರ ಹಾಗು ಕೋಲಾರ ಎಸ್‌.ಎಸ್‌.ಪಿಯು ಕಾಲೇಜು ವಿಭಾಗ ಪ್ರೌಢಶಾಲೆಯ ಎಂ.ಎಸ್‌.ಹುಲ್ಲೂರ ಅವರನ್ನು  ಶಾಲು ಹೊದಿಸಿ ಸನ್ಮಾನಿಸಲಾಯಿತು.  

    ಹಿರಿಯ ಶಿಕ್ಷಕರಾದ ಸಿ.ಎಸ್‌.ಚಿಮ್ಮಲಗಿ, ಆರ್‌.ಎನ್‌.ಪವಾರ,ರವಿ ಎಸ್ ಬಡಿಗೇರ, ಜೆ.ಎನ್‌.ರೂಗಿ, ಜಿ.ಸಿ.ಸಬರದ, ಎಸ್‌.ಎಂ.ಡಾಂಗೆ, ಬಿ.ಎನ್‌.ನಾಯಕರ,  ಎಸ್‌.ಎಸ್‌.ಬೆಲ್ಲೋಟಗಿ,  ಎಸ್‌.ಆರ್‌.ಪಗಡಿ, ಆರ್‌.ಡಿ.ಬಡಿಗೇರ, ಸಿ.ಕೆ.ಪತ್ತಾರ, ಆಯ್‌.ಎಸ್‌.ಮಲಘಾಣ,  ಸಿ.ಎಸ್‌.ಹೂಗಾರ, ಜಿ.ವ್ಹಿ.ಬಾಗೇವಾಡಿ,ವಿ.ಎಸ್‌.ತೋದಲಬಾಗಿ, ರಾಘ ಮ್ಯಾಗೇರಿ, ನಾಗರಾಳ, ಎಸ್‌.ಎ.ದ್ರಾಕ್ಷಿ, ಆರ್‌.ಎನ್‌.ಪವಾರ ಇತರರಿದ್ದರು. 

  ಕೃಷ್ಣಾ ಬಡಿಗೇರ ಸ್ವಾಗತಿಸಿ ನಿರೂಪಿಸಿದರು. ಬಾಪುಗೌಡ ಪಾಟೀಲ ವಂದಿಸಿದರು.