ಯೌವನದ ನಡೆ ಬದುಕಿನ ಸೂತ್ರ: ಗಜಾನನ ಸುತಾರ

The formula for the life of youth: Gajanana Sutara

ಬಾಗಲಕೋಟೆ 16: ಯೌವನದಲ್ಲಿ ತೆಗೆದುಕೊಳ್ಳುವ ನಿರ್ಧಾರ ಮತ್ತು ಪರಿಶ್ರಮ ಮುಂದಿನ ಜೀವನವನ್ನು ನಿರ್ಧರಿಸುತ್ತದೆ. ಇದು ಜೀವನದ ಅತ್ಯಮೂಲ್ಯ ಸಮಯವಾಗಿದ್ದು ವ್ಯಸನದಾಸರಾಗದೆ ಗುರಿ ಸಾಧಿಸುವತ್ತ ಹೆಜ್ಜೆಗಳು ಇರಲಿ ಎಂದು ಬಾಗಲಕೋಟೆ ಜಿಲ್ಲೆಯ ಉಪ ಪೊಲೀಸ್ ಅಧೀಕ್ಷಕ ಗಜಾನನ ಸುತಾರ ಹೇಳಿದರು.  

ನಗರದ ಬಿ.ವಿ.ವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾದ ಪ್ರತಿಭಾ ಪುರಸ್ಕಾರ ಹಾಗೂ ಬಿ.ಎ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ , ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು. ಯುವ ಜನತೆ ಮಾದಕ ವ್ಯಸನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತಿದ್ದಾರೆ. ಮನರಂಜನೆ ಮತ್ತು ಸ್ನೇಹ ಸಹವಾಸಗಳು ಇದಕ್ಕೆ ಕಾರಣವಾಗುತ್ತಿವೆ. ವ್ಯಸನ ದಾಸಿಯಾದರೆ ಹೊರಬರುವುದು ಕಷ್ಟ ಜಾಗೃತರಾಗಿರಿ. ಋಣಾತ್ಮಕ ಚಿಂತನೆಗಳಿಗೆ ಬಲಿಯಾಗದೆ, ಅಹಂ ಭಾವನೆ ಮೈಗೂಡಿಸಿಕೊಳ್ಳದೆ ಸೌಜನ್ಯಯುತ ಮತ್ತು ಗೌರವಯುತ ಜೀವನ ರೂಪಿಸಿಕೊಳ್ಳಿ, ನಿರ್ಧಿಷ್ಟ ಗುರಿಯೊಂದಿಗೆ ಅಧ್ಯಯನ ಮಾರ್ಗ ಕಂಡುಕೊಳ್ಳಿ ಎಂದರು. 

ಸೈಬರ್ ಅಪರಾಧಗಳು ಹೆಚ್ಚುತ್ತಿದ್ದು ಮಹಿಳೆಯರು ಮತ್ತು ಯುವಜನತೆ ಎಚ್ಚರಿಕೆ ವಹಿಸಬೇಕು. ವೈಯಕ್ತಿಕ ವಿಷಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೊದಲು ಜಾಗೃತಿ ವಹಿಸಿ. ಅದೊಂದು ವರ್ಚುವಲ್ ಜಗತ್ತಾಗಿದ್ದು ಅದರಿಂದ ಜೀವನ ನಿರ್ಮಾಣವಾಗದು. ಸೈಬರ್ ವಂಚನೆಗೆ ಒಳಗಾದರೆ ನಿರ್ಭಯವಾಗಿ ಪೊಲೀಸ್ ಇಲಾಖೆಯ ಗಮನಕ್ಕೆ ತರಬೇಕು. ವಾಹನ ಸಂಚಾರದ ವೇಳೆ ರಸ್ತೆ ನಿಯಮಗಳನ್ನು ಪಾಲಿಸಿ ಜೀವ ಮತ್ತು ಜೀವನದ ಬಗ್ಗೆ ಕಾಳಜಿ ವಹಿಸಿ. ಕ್ರೀಡೆ ಮತ್ತು ದೈಹಿಕ ಚಟುವಟಿಕೆಯಲ್ಲಿ ಪಾಲ್ಗೊಂಡು ಆತ್ಮಸ್ಥೈರ್ಯ ಮತ್ತು ಆರೋಗ್ಯದ ಕಡೆಗೆ ಗಮನ ವಹಿಸಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. 

ಅಧ್ಯಕ್ಷತೆ ಸ್ಥಾನವಹಿಸಿ ಮಾತನಾಡಿದ ಪ್ರಾಚಾರ್ಯರಾದ ಎಸ್‌. ಆರ್ ಮುಗನೂರಮಠ ಕನಸುಗಳು ವಿದ್ಯಾರ್ಥಿಗಳಿಗೆ ಅವಶ್ಯಕ, ಕನಸುಗಳನ್ನು ನನಸಾಗುವಲ್ಲಿ ಶ್ರಮವನ್ನು ತೊಡಗಿಸಬೇಕು, ವಿದ್ಯಾರ್ಥಿ ಜೀವನ ಬಂಗಾರದ ಜೀವನವಿದ್ದಂತೆ ಬದುಕನ್ನು ರೂಪಿಸುವ ಹವ್ಯಾಸಗಳನ್ನು ಬೆಳಸಿಕೊಳ್ಳಿ. ನಿವು ಇಡುವ ಹೆಜ್ಜೆಗಳು ಯಶಸ್ವಿ ಹೆಜ್ಜೆಗಳಾಗಲಿ ಎಂದು ಹಾರೈಸಿದರು. 

ಸಾಧಕರಿಗೆ ಸತ್ಕಾರ ಪುರಸ್ಕಾರ: 

ಮಹಾವಿದ್ಯಾಲಯದ ಕಲಾದೀಪ್ತಿ ವಾರ್ಷಿಕ ಸಂಚಿಕೆ ಮತ್ತು ಡಾ.ಎಸ್‌.ಎನ್ ರಾಂಪೂರ ಸಂಪಾದಿತ ದೇಶಗತ ಮನೆತನಗಳು ಹಾಗೂ ಸಮಕಾಲಿನ ಮಠ-ಮಾನ್ಯಗಳು ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ಡಿಲಿಟ್ ಪದವಿ ಪಡೆದ ಡಾ. ಆರ್‌.ನಾಗರಾಜು ಮತ್ತು ಡಾಕ್ಟರೇಟ್ ಪದವಿ ಪಡೆದ ಡಾ.ಎಂ.ಎಚ್ ವಡ್ಡರ ಹಾಗೂ, ಡಾ.ಸಂತೋಷ ಗೊರವ ಅವರನ್ನು ಸತ್ಕರಿಸಿ ಗೌರವಿಸಲಾಯಿತು. ಕ್ರೀಡೆ ಹಾಗೂ ಸಾಂಸ್ಕೃತಿಕ ಚಟಿವಟಿಕೆಯಲ್ಲಿ ಸಾಧನೆಗೈದ ಮತ್ತು ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಸತ್ಕರಿಸಲಾಯಿತು. ಡಾ.ಎಸ್‌.ಡಿ ಕೆಂಗಲಗುತ್ತಿ ವಾರ್ಷಿಕ ವರದಿ ವಾಚನ ಮಾಡಿದರು. 

ಬಿವಿವಿ ಸಂಘದ ಕಾಲೇಜುಗಳ ಆಡಳಿತ ಮಂಡಳಿ ಪದನಿಮಿತ್ತ ಕಾರ್ಯದರ್ಶಿ ಡಾ.ಎಸ್‌.ಎಮ್ ಗಾಂವ್ಕರ್, ಐಕ್ಯೂಎಸಿ ಸಂಯೋಜಕ ಡಾ.ಎ.ಯು ರಾಠೋಡ, ಸಾಂಸ್ಕೃತಿಕ ಚಟುವಟಿಕೆ ಸಂಯೋಜಕ ಡಾ.ಕೆ.ವಿ ಮಠ, ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಎಸ್‌.ಎನ್ ರಾಂಪೂರ, ದೈಹಿಕ ನಿರ್ದೇಶಕ ಎಮ್‌.ಎಮ್ ದೇವನಾಳ, ವಿದ್ಯಾರ್ಥಿ ಪ್ರತಿನಿಧಿ ವಾರೇಶ ಯಂಕಂಚಿ ಮತ್ತು ಪಾರ್ವತಿ ಹಿರೇಮಠ ಉಪಸ್ಥಿತರಿದ್ದರು.