ಉಡಾಳ ಚಿತ್ರದ ಮೊದಲ ಹಂತದ ಚಿತ್ರೀಕರಣ ವಿಜಯಪುರದಲ್ಲಿ ಪೂರ್ಣ

ವಿಜಯಪುರ.ಮಾ,27- ಯೋಗರಾಜ್ ಸಿನಿಮಾಸ್ ಹಾಗೂ ರವಿ ಶಾಮನೂರು ಫಿಲಂಸ್ ಲಾಂಛನದಲ್ಲಿ ದಾವಣಗೆರೆಯ ರವಿ ಶಾಮನೂರು ಹಾಗೂ ಯೋಗರಾಜ್ ಭಟ್ ಅವರು ನಿರ್ಮಿಸುತ್ತಿರುವ, ಅಮೋಲ್ ಪಾಟೀಲ್ ನಿರ್ದೇಶನದಲ್ಲಿ ಪೃಥ್ವಿ ಶಾಮನೂರು ನಾಯಕನಾಗಿ ನಟಿಸುತ್ತಿರುವ "ಉಡಾಳ" ಚಿತ್ರಕ್ಕೆ ಬಿಜಾಪುರದಲ್ಲಿ ಮೊದಲ ಹಂತದ ಚಿತ್ರೀಕರಣ ನಡೆದಿದೆ.  

ಚಿತ್ರದ ನಾಯಕ ಪೃಥ್ವಿ ಈ ಚಿತ್ರದಲ್ಲಿ ಗೈಡ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 25 ದಿನಗಳ ಮೊದಲ ಹಂತದ ಚಿತ್ರೀಕರಣದಲ್ಲಿ ಹಾಡು, ನೃತ್ಯ ಹಾಗೂ ಮಾತಿನ ಭಾಗದ ಸನ್ನಿವೇಶಗಳನ್ನು ಚಿತ್ರಿಸಿಕೊಳ್ಳಲಾಗಿದೆ. ಈ ಭಾಗದ ಚಿತ್ರೀಕರಣ ಸಂಪೂರ್ಣ ಬಿಜಾಪುರದಲ್ಲೇ ನಡೆದಿದೆ. ಈಗಾಗಲೇ ಚಿತ್ರದ ಮುಕ್ಕಾಲು ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ.   ಸದ್ಯದಲ್ಲೇ ದ್ವಿತೀಯ ಹಂತದ ಚಿತ್ರೀಕರಣ ಆರಂಭವಾಗಲಿದೆ ಎಂದು ನಿರ್ದೇಶಕ ಅಮೋಲ್ ಪಾಟೀಲ್ ತಿಳಿಸಿದ್ದಾರೆ."ಉಡಾಳ" ಪಕ್ಕಾ ಕಮರ್ಷಿಯಲ್ ಜಾನರ್ ಚಿತ್ರವಾಗಿದೆ. ಲವ್, ಕಾಮಿಡಿ ಸೇರಿದಂತೆ ಎಲ್ಲಾ ಅಂಶಗಳು ಈ ಚಿತ್ರದಲ್ಲಿದೆ. ಬಿಜಾಪುರ ಹಾಗು ಉತ್ತರ ಕರ್ನಾಟಕದಲ್ಲಿ ನಡೆಯುವಂತಹ ಅಪ್ಪಟ ಜವಾರಿ ಕಥೆಯಾಗಿದೆ.ಯೋಗರಾಜ್ ಭಟ್ ಅವರ ಜೊತೆಗೆ ಸಹ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಅಮೋಲ್ ಪಾಟೀಲ್ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಚಿತ್ರರಂಗ ಪ್ರವೇಶಿಸಿದ್ದಾರೆ, ಅಮೋಲ್ ಪಾಟೀಲ್ ಬಿಜಾಪುರ ಮೂಲದವರು ಎನ್ನುವುದು ಮತ್ತೊಂದು ವಿಶೇಷ.ತಮ್ಮ ಮೊದಲ ಚಿತ್ರ "ಪದವಿಪೂರ್ವ" ದಲ್ಲೇ ಬಯಲು ಸೀಮೆ ದಾವಣಗೆರೆಯ ಪೃಥ್ವಿ ಶಾಮನೂರು ಪ್ರೇಕ್ಷಕರ ಮನ ಗೆದ್ದಿದ್ದರು. ಪ್ರಸ್ತುತ ಅವರು ನಾಯಕರಾಗಿ ನಟಿಸುತ್ತಿರುವ "ಉಡಾಳ" ಚಿತ್ರದ ಕುರಿತು ಸಾಕಷ್ಟು ನೀರೀಕ್ಷೆಯಿದೆ. ಪೃಥ್ವಿ ಶಾಮನೂರು ಅವರಿಗೆ ನಾಯಕಿಯಾಗಿ  ಹೃತಿಕ ಶ್ರೀನಿವಾಸ್ ನಟಿಸುತ್ತಿದ್ದಾರೆ.  ಬಲ ರಾಜವಾಡಿ, ಸುಮಿತ್, ಹರೀಶ್ ಹಿರಿಯೂರು, ಮಾಳು ನಿತ್ನಾಳ್,  ಪ್ರವೀಣ್ ಗೋಕಾಕ್, ವಾದಿರಾಜ್, ದಯಾನಂದ್ ಮುಂತಾದವರು ತಾರಾಬಳಗದಲ್ಲಿದ್ದಾರೆ. 

ಯೋಗರಾಜ್ ಭಟ್ ಅವರು ಚಿತ್ರದ ಹಾಡುಗಳನ್ನು ರಚಿಸಿದ್ದು, ಚೇತನ್ ಡ್ಯಾವಿ ಸಂಗೀತ ನೀಡಿದ್ದಾರೆ. ಶಿವಶಂಕರ್ ನೂರಂಬಡ ಛಾಯಾಗ್ರಹಣ, ಅರ್ಜುನ್ ರಾಜ್ ಸಾಹಸ ನಿರ್ದೇಶನ ಹಾಗೂ ಮೋಹನ್, ರಘು ಅವರ ನೃತ್ಯ ನಿರ್ದೇಶನ "ಉಡಾಳ" ಚಿತ್ರಕ್ಕಿದೆ.ಈ ಹಿಂದೆ ಪದವಿ ಪೂರ್ವ ಸಿನೆಮ ನಿರ್ಮಾಣ ಮಾಡಿದ್ದ ದಾವಣಗೆರೆಯ ರವಿ ಶಾಮನೂರು ಹಾಗೂ ಯೋಗರಾಜ್ ಭಟ್ ಮತ್ತೆ ಈ ಚಿತ್ರಕ್ಕಾಗಿ ಒಂದಾಗಿದ್ದಾರೆ. ಇದೆ ವರ್ಷದ ಕೊನೆಯಲ್ಲಿ ಸಿನೆಮ ರಿಲಿಜ್ ಮಾಡುವ  ಸಾಧ್ಯತೆ ಇದೆ. 

ಬಿಜಾಪುರದ ಜನತೆಗೆ, ಪೊಲೀಸ್ ಇಲಾಖೆಗೆ, ವಿದ್ಯಾರ್ಥಿಗಳಿಗೆ, ಎಸ್ ಎಸ್ ಕಾಲೇಜಿನ ಸಂಸ್ಥೆಗೆ, ಪುರಾತತ್ವ ಇಲಾಖೆಗೆ, ಜೆ ಸ್ ಸ್ ಸಂಸ್ಥೆಗೆ, ಟಂಟಂ ಚಾಲಕರಿಗೆ ಮಾಧ್ಯಮ ಮಿತ್ರರಿಗೆ ಹಾಗು ಚಿತ್ರೀಕರಣಕ್ಕೆ ಸಹಕರಿಸಿದ ಎಲ್ಲರಿಗೂ ಇಡೀ ಉಡಾಳ ತಂಡ ಧನ್ಯವಾದ ಸಲ್ಲಿಸಿದೆ.