ಉದ್ಯಮ ಸ್ಥಾಪಿಸಿ ಆರ್ಥಿಕ ಸ್ವಾವಲಂಬಿಯಾಗಿ: ಸೋಮಶೇಖರ ಬಿ. ಸಲಹೆ

ಉದ್ಯಮ ಸ್ಥಾಪಿಸಿ ಆರ್ಥಿಕ ಸ್ವಾವಲಂಬಿಯಾಗಿ: ಸೋಮಶೇಖರ ಬಿ. ಸಲಹೆ Set up a business and become financially self-reliant: Advice from Somashekhara B

ಬಳ್ಳಾರಿ 12: ಸ್ವಂತ ಉದ್ಯಮ ಆರಂಭಿಸುವುದರಿಂದ ಆರ್ಥಿಕ ಸ್ವಾವಲಂಬನೆ ಸಾಧಿಸುವುದರ ಜೊತೆಗೆ ಇತರರಿಗೂ ಉದ್ಯೋಗಾವಕಾಶ ನೀಡಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸೋಮಶೇಖರ ಬಿ. ಅವರು ಅಭಿಪ್ರಾಯಪಟ್ಟರು.ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಪ್ರಾಯೋಜಕತ್ವದಲ್ಲಿ, ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ (ಸಿಡಾಕ್) ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿರುವ 10 ದಿನಗಳ ‘ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ಕಾರ್ಯಕ್ರಮ'ವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.ಉದ್ಯಮದಿಂದ ಸ್ವಾವಲಂಬಿ ಜೀವನ ರೂಪಿಸಿಕೊಳ್ಳಬಹುದು.

ಸರ್ಕಾರದ ವಿವಿಧ ಯೋಜನೆಗಳು, ಲಭ್ಯವಿರುವ ಸೌಲಭ್ಯಗಳು, ಬ್ಯಾಂಕಿಂಗ್ ನೆರವು ಹಾಗೂ ಸೂಕ್ತ ಹಣಕಾಸು ನಿರ್ವಹಣೆಯ ಅರಿವು ಪ್ರತಿಯೊಬ್ಬ ಉದ್ಯಮಿಗೂ ಅಗತ್ಯ ಎಂದು ಅಭ್ಯರ್ಥಿಗಳಿಗೆ ಮಾರ್ಗದರ್ಶನ ನೀಡಿದರು.ಬೆಂಗಳೂರಿನ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಲೆಕ್ಕಾಧಿಕಾರಿ ಪ್ರಕಾಶ ಹಳ್ಳಿಕಟ್ಟಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಉದ್ಯಮ ರಂಗದಲ್ಲಿ ಯಶಸ್ಸು ಗಳಿಸಲು ಸೂಕ್ತ ತರಬೇತಿ ಮತ್ತು ಉದ್ಯಮಶೀಲತೆಯ ಗುಣಲಕ್ಷಣಗಳನ್ನು ಅಳವಡಿಸಿಕೊಳ್ಳುವುದು ಅತ್ಯಂತ ಅವಶ್ಯಕ ಎಂದರು.ಕಾರ್ಯಕ್ರಮದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ಬಿ.ಜಿ. ರಂಗನಾಥ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಲೆಕ್ಕಪರಿಶೋಧಕ ಟಿ.ಎಸ್‌. ಗೀರೀಶ್, ಎಫ್‌.ಡಿ.ಎ ಎನ್‌.ಎಮ್‌. ಕಾರ್ತಿಕ್, ಧಾರವಾಡದ ಸಂಪನ್ಮೂಲ ವ್ಯಕ್ತಿ ಜಗದೀಶ ಯಲಿಗಾರ, ಸಿಡಾಕ್ ತರಬೇತಿ ಅಧಿಕಾರಿ ವಿನೋದಕುಮಾರ ಕೆ., ಪುರುಷೋತ್ತಮ್ ಹಾಗೂ ತರಬೇತಿಯ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.