ಬಿಷ್ಣೋಯ್ ಗ್ಯಾಂಗ್‌ನಿಂದ ಬೆದರಿಕೆ ಆರೋಪ: ಆಮಿರ್ ಖಾನ್ ನಿವಾಸದ ಭದ್ರತೆ ಬಿಗಿಗೊಳಿಸಿದ ಮುಂಬೈ ಪೊಲೀಸರು

ಬಿಷ್ಣೋಯ್ ಗ್ಯಾಂಗ್‌ನಿಂದ ಬೆದರಿಕೆ ಆರೋಪ: ಆಮಿರ್ ಖಾನ್ ನಿವಾಸದ ಭದ್ರತೆ ಬಿಗಿಗೊಳಿಸಿದ ಮುಂಬೈ ಪೊಲೀಸರು Security Tightened Outside Aamir Khan's Mumbai Residence After Alleged Bishnoi Gang Threat

ಮುಂಬೈ, ಜುಲೈ 18 : ಬಾಲಿವುಡ್ ನಟ ಆಮಿರ್ ಖಾನ್ ಅವರ ನಿವಾಸಕ್ಕೆ ಬಿಷ್ಣೋಯ್ ಗ್ಯಾಂಗ್ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆ ಸಂದೇಶ ಹರಿದಾಡಿದ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಅವರ ನಿವಾಸದ ಭದ್ರತೆಯನ್ನು ಬಿಗಿಗೊಳಿಸಿ, ಪ್ರಕರಣದ ಕುರಿತು ತನಿಖೆ ಆರಂಭಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಪೋಸ್ಟ್ ಹಾಗೂ ಅದಕ್ಕೆ ಸಂಬಂಧಿಸಿದ ಆಡಿಯೊ ಕ್ಲಿಪ್‌ನಲ್ಲಿ ತಮ್ಮನ್ನು "ಆರ್‌ಝೂ ಬಿಷ್ಣೋಯ್" ಮತ್ತು "ಟೈಸನ್ ಬಿಷ್ಣೋಯ್" ಎಂದು ಪರಿಚಯಿಸಿಕೊಂಡಿರುವ ವ್ಯಕ್ತಿಗಳು, ಲಾರೆನ್ಸ್ ಬಿಷ್ಣೋಯ್ ಗುಂಪಿನ ಹೆಸರಿನಲ್ಲಿ ಈ ಬೆದರಿಕೆಯನ್ನು ನೀಡಿರುವುದಾಗಿ ಹೇಳಿಕೊಂಡಿದ್ದಾರೆ.

ಆ ಪೋಸ್ಟ್‌ನಲ್ಲಿ, ಆಮಿರ್ ಖಾನ್ "ಲವ್ ಜಿಹಾದ್" ಅನ್ನು ಉತ್ತೇಜಿಸುತ್ತಿದ್ದಾರೆ ಎಂದು ಆರೋಪಿಸಿ, ಇಂತಹ ಚಟುವಟಿಕೆಗಳಲ್ಲಿ ತೊಡಗಿರುವವರು ಶೀಘ್ರದಲ್ಲೇ ಅದರ "ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ" ಎಂದು ಎಚ್ಚರಿಕೆ ನೀಡಲಾಗಿದೆ.

ಇಂತಹ ಚಟುವಟಿಕೆಗಳು "ನಮ್ಮ ಸಂಸ್ಕೃತಿ ಮತ್ತು ದೇಶಕ್ಕೆ ವಿರುದ್ಧವಾಗಿವೆ" ಎಂದು ಹೇಳಿರುವ ಪೋಸ್ಟ್, ತಮ್ಮ ಜನಪ್ರಿಯತೆಯನ್ನು ಬಳಸಿಕೊಂಡು ಇವುಗಳನ್ನು ಉತ್ತೇಜಿಸುವವರನ್ನು "ನಮ್ಮದೇ ರೀತಿಯಲ್ಲಿ ಎದುರಿಸುತ್ತೇವೆ" ಎಂದು ಎಚ್ಚರಿಸಿದೆ.

ಇದರ ಜೊತೆಗೆ, ರಾಜಸ್ಥಾನದ ಶ್ರೀಗಂಗಾನಗರ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣವನ್ನೂ ಪೋಸ್ಟ್‌ನಲ್ಲಿ ಉಲ್ಲೇಖಿಸಲಾಗಿದೆ. ಪ್ರಕರಣದಲ್ಲಿ ಪೊಲೀಸರು ಕೈಗೊಂಡ ಕ್ರಮವನ್ನು ಶ್ಲಾಘಿಸಿರುವ ಪೋಸ್ಟ್, ಆರೋಪಿಗಳನ್ನು ರಕ್ಷಿಸಲು ಕೆಲವು ರಾಜಕೀಯ ನಾಯಕರು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದೆ. ಅಲ್ಲದೆ, ಪರ್ವೇಶ್ ಮತ್ತು ಹಿಮಾಂಶು ಎಂಬ ಇಬ್ಬರಿಗೆ ಶ್ರದ್ಧಾಂಜಲಿಯನ್ನೂ ಸಲ್ಲಿಸಲಾಗಿದೆ.

ಈ ಪೋಸ್ಟ್ ವೈರಲ್ ಆದ ನಂತರ ಮುನ್ನೆಚ್ಚರಿಕಾ ಕ್ರಮವಾಗಿ ಆಮಿರ್ ಖಾನ್ ಅವರ ನಿವಾಸದ ಹೊರಗೆ ಹೆಚ್ಚುವರಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದೆ. ವೈರಲ್ ಆಗಿರುವ ಪೋಸ್ಟ್ ಮತ್ತು ಆಡಿಯೊ ಕ್ಲಿಪ್‌ನ ಸತ್ಯಾಸತ್ಯತೆಯನ್ನು ಪರಿಶೀಲಿಸಲಾಗುತ್ತಿದ್ದು, ಅವುಗಳ ಮೂಲವನ್ನು ಪತ್ತೆಹಚ್ಚಲು ಹಾಗೂ ಬೆದರಿಕೆಯ ವಿಶ್ವಾಸಾರ್ಹತೆಯನ್ನು ಅಂದಾಜಿಸಲು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈವರೆಗೆ ಆಮಿರ್ ಖಾನ್ ಅಥವಾ ಅವರ ಪ್ರತಿನಿಧಿಗಳು ಈ ವಿಷಯದ ಕುರಿತು ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.

ಇತ್ತೀಚೆಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ಗೆ ಸಂಬಂಧಿಸಿದಂತೆ ಹಲವು ಬೆದರಿಕೆಗಳು ಬಂದ ಹಿನ್ನೆಲೆಯಲ್ಲಿ ನಟ ಸಲ್ಮಾನ್ ಖಾನ್ ಅವರಿಗೆ ಈಗಾಗಲೇ ಕಠಿಣ ಭದ್ರತೆ ಒದಗಿಸಲಾಗಿದೆ. ಆ ಬೆಳವಣಿಗೆಯ ಕೆಲವೇ ದಿನಗಳ ನಂತರ ಈ ಘಟನೆ ನಡೆದಿದೆ.

ಪ್ರಕರಣದ ತನಿಖೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ದೃಢೀಕರಿಸದ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳದಂತೆ ಸಾರ್ವಜನಿಕರಿಗೆ ಪೊಲೀಸರು ಮನವಿ ಮಾಡಿದ್ದಾರೆ. ವೈರಲ್ ಆಗಿರುವ ಪೋಸ್ಟ್ ಹಾಗೂ ಆಡಿಯೊ ಕ್ಲಿಪ್‌ನ ಸತ್ಯಾಸತ್ಯತೆ ಇನ್ನೂ ಸ್ವತಂತ್ರವಾಗಿ ದೃಢಪಟ್ಟಿಲ್ಲ.