ಮಳೆ ಕೊರತೆ: ರೈತರ ಸಮಸ್ಯೆ ಆಲಿಸಲು ತುರ್ತು ಸಭೆ

ಮಳೆ ಕೊರತೆ: ರೈತರ ಸಮಸ್ಯೆ ಆಲಿಸಲು ತುರ್ತು ಸಭೆ Rainfall deficit: Urgent meeting to hear farmers' grievances

ಬಳ್ಳಾರಿ, ಜು.21: ಜಿಲ್ಲೆಯಲ್ಲಿ ಮುಂಗಾರು ಮಳೆ ತೀವ್ರವಾಗಿ ಕೊರತೆಯಾಗಿರುವ ಹಿನ್ನೆಲೆಯಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ತುರ್ತು ಸಭೆ ನಡೆಯಿತು.  

ನಗರದ ನೂತನ ಜಿಲ್ಲಾಡಳಿತ ಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ಮಳೆ ಕೊರತೆಯಿಂದ ರೈತರು ಸಂಕಷ್ಟ ಎದುರಿಸುತ್ತಿದ್ದು, ಅವರ ಸಮಸ್ಯೆಗಳಿಗೆ ಜಿಲ್ಲಾಡಳಿತ ಸದಾ ಸ್ಪಂದಿಸಲು ಸಿದ್ಧವಾಗಿದೆ ಎಂದು ಭರವಸೆ ನೀಡಿದರು.  

ಅವರು ಮಾತನಾಡಿ, ಸೂಪರ್ ಎಲ್‌-ನಿನೋ ಪರಿಣಾಮದಿಂದ ರಾಜ್ಯಾದ್ಯಂತ ಮಳೆ ಅಭಾವ ಉಂಟಾಗಿದ್ದು, ಅದರ ನೇರ ಪರಿಣಾಮ ಜಲಾಶಯಗಳ ಮೇಲೂ ಕಂಡುಬಂದಿದೆ ಎಂದರು. ಕಳೆದ ವರ್ಷ ಇದೇ ಅವಧಿಯಲ್ಲಿ ತುಂಗಭದ್ರಾ ಜಲಾಶಯದಲ್ಲಿ 72 ಟಿಎಂಸಿ ನೀರು ಸಂಗ್ರಹವಿದ್ದರೆ, ಪ್ರಸ್ತುತ ಕೇವಲ 26 ಟಿಎಂಸಿ ನೀರು ಮಾತ್ರ ಲಭ್ಯವಿದೆ ಎಂದು ತಿಳಿಸಿದರು.  

ಮಲೆನಾಡು ಪ್ರದೇಶದಲ್ಲಿ ಅಲ್ಪ ಪ್ರಮಾಣದ ಮಳೆಯಾಗುತ್ತಿರುವುದರಿಂದ ದಿನಕ್ಕೆ ಸುಮಾರು 3,500 ಕ್ಯೂಸೆಕ್ ಒಳಹರಿವು ದಾಖಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇದು 15ರಿಂದ 20 ಸಾವಿರ ಕ್ಯೂಸೆಕ್ಗೆ ಏರಿಕೆಯಾದರೆ ಮಾತ್ರ ಪರಿಸ್ಥಿತಿ ಸುಧಾರಿಸುವ ಸಾಧ್ಯತೆ ಇದೆ ಎಂದು ಹೇಳಿದರು.