ಗದಗದಲ್ಲಿ ಮಹಿಳಾ ಸ್ವಸಹಾಯ ಸಂಘಗಳ ಬಲವರ್ಧನೆ ಕಾರ್ಯಕ್ರಮ ಹಿ ಉದ್ಯೋಗ, ಆರ್ಥಿಕ ಭದ್ರತೆಗೆ ಹೊಸ ಹೆಜ್ಜೆ

ಗದಗದಲ್ಲಿ ಮಹಿಳಾ ಸ್ವಸಹಾಯ ಸಂಘಗಳ ಬಲವರ್ಧನೆ ಕಾರ್ಯಕ್ರಮ ಹಿ ಉದ್ಯೋಗ, ಆರ್ಥಿಕ ಭದ್ರತೆಗೆ ಹೊಸ ಹೆಜ್ಜೆ  Program to strengthen women's self-help groups in Gadag: A new step towards employment and financial

ಗದಗ 24: ಮಹಿಳೆಯರು ಕೇವಲ ಕುಟುಂಬ ನಿರ್ವಹಣೆಗೆ ಸೀಮಿತರಲ್ಲ. ದೇಶದ ಆರ್ಥಿಕ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುವ ಶಕ್ತಿಯನ್ನು ಹೊಂದಿದ್ದಾರೆ ಎಂಬುದನ್ನು ಸಾಕಾರಗೊಳಿಸುವ ಉದ್ದೇಶದಿಂದ ಗದಗ ನಗರದ ಸಿದ್ದರಾಮೇಶ್ವರ ನಗರದಲ್ಲಿ ಮಹಿಳಾ ಸಬಲೀಕರಣ ಕಾರ್ಯಕ್ರಮ ನಡೆಯಿತು.  

‘ದಾರೀದೀಪ ಮಹಿಳಾ ವಿವಿಧ ಉದ್ದೇಶಗಳ ಸಂಸ್ಥೆ’ ಹಾಗೂ ‘ದಿ ಕಾರ​‍್ೊರೇಷನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ’ದ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೂರಾರು ಮಹಿಳೆಯರನ್ನು ಸ್ವಸಹಾಯ ಸಂಘಗಳ ಮೂಲಕ ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸುವ ನಿಟ್ಟಿನಲ್ಲಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಲಾಯಿತು.  

ಕಾರ್ಯಕ್ರಮದಲ್ಲಿ ಮಾತನಾಡಿದ ದಾರೀದೀಪ ಮಹಿಳಾ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಶಕುಂತಲಾ ಮುಳುಗುಂದ, ಮಹಿಳಾ ಸಬಲೀಕರಣ ಎಂದರೆ ಕೇವಲ ವೇದಿಕೆ ಭಾಷಣವಲ್ಲ; ಮಹಿಳೆಯ ಕೈಗೆ ಆರ್ಥಿಕ ಶಕ್ತಿ ನೀಡುವುದೇ ನಿಜವಾದ ಸಬಲೀಕರಣ ಎಂದು ಹೇಳಿದರು.  

"ಮಹಿಳೆಯರ ಕೈಯಲ್ಲಿ ಹಣದ ಹರಿವು ಹೆಚ್ಚಾದರೆ ಕುಟುಂಬದ ಆರ್ಥಿಕ ಸ್ಥಿತಿಯೂ ಸುಧಾರಿಸುತ್ತದೆ. ಸಿದ್ದರಾಮೇಶ್ವರ ನಗರದ ಪ್ರತಿಯೊಂದು ಮನೆಯಲ್ಲೂ ಕನಿಷ್ಠ ಒಬ್ಬ ಮಹಿಳೆ ಉದ್ಯಮಿಯಾಗಿ ಬೆಳೆಯುವಂತಾಗಬೇಕು ಎಂಬುದು ನಮ್ಮ ಸಂಸ್ಥೆಯ ಗುರಿಯಾಗಿದೆ. ಸ್ವಸಹಾಯ ಸಂಘಗಳು ಸಾಮಾಜಿಕ ಮತ್ತು ಆರ್ಥಿಕ ಪರಿವರ್ತನೆಗೆ ಪ್ರಮುಖ ಸಾಧನಗಳಾಗಿವೆ" ಎಂದು ತಿಳಿಸಿದರು.  

ಸಂಸ್ಥೆಯ ಉಪಾಧ್ಯಕ್ಷೆ ಜ್ಯೋತಿ ದೇಶಾಯಿಗೌಡರ್ ಮಾತನಾಡಿ, ಮಹಿಳೆಯರು ಆರ್ಥಿಕವಾಗಿ ಸದೃಢರಾಗಬೇಕಾದರೆ ಸ್ವಂತ ಉದ್ಯೋಗ ಆರಂಭಿಸಬೇಕು. ಅದಕ್ಕೆ ಅಗತ್ಯವಿರುವ ಬ್ಯಾಂಕಿಂಗ್ ಸೌಲಭ್ಯ, ತರಬೇತಿ ಹಾಗೂ ಮಾರ್ಗದರ್ಶನವನ್ನು ಸಂಸ್ಥೆ ನಿರಂತರವಾಗಿ ನೀಡಲಿದೆ ಎಂದು ಹೇಳಿದರು.  

ಕಾರ್ಯಕ್ರಮವನ್ನು ಉದ್ಘಾಟಿಸಿದ ವಿಜಯಲಕ್ಷ್ಮೀ ಅಸೂಟಿ, ಮಹಿಳೆಯರ ಸಂಘಟಿತ ಶಕ್ತಿ ಸಮಾಜದಲ್ಲಿ ದೊಡ್ಡ ಬದಲಾವಣೆ ತರಬಲ್ಲದು. ಈ ನಿಟ್ಟಿನಲ್ಲಿ ಸ್ವಸಹಾಯ ಸಂಘಗಳ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು.  

ಈ ಸಂದರ್ಭದಲ್ಲಿ ಲಕ್ಷ್ಮೀ ಕುಪ್ಪರ್, ಲಕ್ಷ್ಮೀ ದಾಸರ್, ದೇವಿ ದೇವಾಡಿಗ ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು, ವಿವಿಧ ಸಂಘಗಳ ಪ್ರತಿನಿಧಿಗಳು ಹಾಗೂ ನೂರಾರು ಮಹಿಳೆಯರು ಉಪಸ್ಥಿತರಿದ್ದರು.