ಗಣೇಶೋತ್ಸವ ಶಾಂತಿಯುತ ಆಚರಣೆಗೆ ಪೊಲೀಸರ ಮನವಿ

ಗಣೇಶೋತ್ಸವ ಶಾಂತಿಯುತ ಆಚರಣೆಗೆ ಪೊಲೀಸರ ಮನವಿ  Police appeal for peaceful Ganeshotsava celebrations


ಸವದತ್ತಿ  7: ಮುಂಬರುವ ಗೌರಿ-ಗಣೇಶ ಹಬ್ಬವನ್ನು ಶಾಂತಿ, ಸೌಹಾರ್ದತೆ ಹಾಗೂ ಕಾನೂನು ಸುವ್ಯವಸ್ಥೆಯೊಂದಿಗೆ ಆಚರಿಸುವ ಉದ್ದೇಶದಿಂದ ನಗರದ ಪೊಲೀಸ್ ಠಾಣೆ ಆವರಣದಲ್ಲಿ ಪೂರ್ವಭಾವಿ ಶಾಂತಿ ಸಭೆ ನಡೆಯಿತು.  

ಸಭೆಯ ಅಧ್ಯಕ್ಷತೆ ವಹಿಸಿದ್ದ ವೃತ್ತ ನೀರೀಕ್ಷಕ ಸುರೇಶ ಬೆಂಡೆಗುಂಭಳ ಅವರು, ಸಾರ್ವಜನಿಕರು ಹಾಗೂ ಗಣೇಶೋತ್ಸವ ಸಮಿತಿಗಳು ಪೊಲೀಸ್ ಇಲಾಖೆಯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ, ನಿಗದಿತ ಮಾರ್ಗಸೂಚಿಯಂತೆ ಮೆರವಣಿಗೆ ಹಾಗೂ ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ತಿಳಿಸಿದರು.  

ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಸ್ಥಳೀಯ ಆಡಳಿತ ಮತ್ತು ಪೊಲೀಸ್ ಇಲಾಖೆಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ರಾತ್ರಿ 10 ಗಂಟೆಯ ನಂತರ ಧ್ವನಿವರ್ಧಕ ಬಳಕೆಗೆ ಅವಕಾಶವಿಲ್ಲ. ಇತರರಿಗೆ ತೊಂದರೆಯಾಗುವ ಚಟುವಟಿಕೆಗಳು ಹಾಗೂ ಮೆರವಣಿಗೆ ಮಾರ್ಗ ಬದಲಾವಣೆ ಮಾಡಬಾರದು ಎಂದು ಸೂಚಿಸಿದರು.  

ಗಣೇಶ ಪೆಂಡಾಲ್ಗಳ ಸುತ್ತ ಸ್ವಯಂಸೇವಕರ ನಿಯೋಜನೆ ಹಾಗೂ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಕಡ್ಡಾಯವಾಗಿದ್ದು, ರಸ್ತೆ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು.  ಪಿಎಸ್‌ಐ ರಾಜು ಪೂಜಾರ ಮಾತನಾಡಿ, ಹಬ್ಬದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ ಪರಸ್ಪರ ಸಹಬಾಳ್ವೆ ಹಾಗೂ ಸಂಯಮದಿಂದ ಆಚರಣೆ ನಡೆಸಬೇಕು. ಯುವಕರು ಮತ್ತು ಸಾರ್ವಜನಿಕರು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.  

ರಸ್ತೆ ಸುರಕ್ಷತೆ ಕುರಿತು ಎಚ್ಚರಿಕೆ ನೀಡಿದ ಅವರು, ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಸಂಚರಿಸಬೇಕು ಹಾಗೂ ಹಬ್ಬದ ಸಂದರ್ಭದಲ್ಲಿ ರಸ್ತೆ ಅಪಘಾತಗಳು ಸಂಭವಿಸದಂತೆ ಪ್ರತಿಯೊಬ್ಬರೂ ಜಾಗೃತಿ ವಹಿಸಬೇಕು ಎಂದರು.  

ಸಭೆಯಲ್ಲಿ ಪ್ರೊಬೇಷನರಿ ಪಿಎಸ್‌ಐ ಶಿವಕುಮಾರ ಪಲ್ಲೇದ, ಎಸ್‌ಎಂ ಮಂಗಣವರ್, ನಾಗರಾಜ ಹೊಳಿ, ಮಂಜುನಾಥ ನಡುವಿನಮನಿ, ಲಕ್ಷ್ಮಣ ಕುಲಕರ್ಣಿ, ಭರಮಪ್ಪ ಅಣಿಗೇರಿ, ಅಬ್ದುಲ್ ಲತೀಫ್ ಸವದತ್ತಿ, ಮಂಜುನಾಥ ಪಾಚಂಗಿ ಸೇರಿದಂತೆ ವಿವಿಧ ಸಮುದಾಯಗಳ ಮುಖಂಡರು ಹಾಗೂ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.