ಪ್ರಧಾನಿ ಮೋದಿ ದೇಶದ ಘನತೆ ಪ್ರಜಾಪ್ರಭುತ್ವವನ್ನು ಹಾಳು ಮಾಡುತ್ತಿದ್ದಾರೆ: ಸೋನಿಯಾ ಗಾಂಧಿ

ಜೈಪುರ 06: ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಘನತೆ ಮತ್ತು ಪ್ರಜಾಪ್ರಭುತ್ವವನ್ನು ಹಾಳು ಮಾಡುತ್ತಿದ್ದಾರೆ ಎಂದು ಶನಿವಾರ ಆರೋಪಿಸಿರುವ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ, ವಿಪಕ್ಷಗಳ ನಾಯಕರನ್ನು ಬಿಜೆಪಿಗೆ ಸೇರುವಂತೆ ಒತ್ತಾಯಿಸಲು ವಿವಿಧ ತಂತ್ರಗಳನ್ನು ಬಳಸಲಾಗುತ್ತಿದೆ ಎಂದು ಹೇಳಿದ್ದಾರೆ.

ಪಕ್ಷದ ಚುನಾವಣಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ 10 ವರ್ಷಗಳಿಂದ ದೇಶವು ನಿರುದ್ಯೋಗ, ಹಣದುಬ್ಬರ, ಆರ್ಥಿಕ ಬಿಕ್ಕಟ್ಟು ಮತ್ತು ಅಸಮಾನತೆಯನ್ನೆ ಪ್ರೋತ್ಸಾಹಿಸುತ್ತಾ ಬಂದ ಸರ್ಕಾರ ಅಧಿಕಾರದಲ್ಲಿದೆ.

ಇಂದು ನಮ್ಮ ದೇಶದ ಪ್ರಜಾಪ್ರಭುತ್ವ ಅಪಾಯದಲ್ಲಿದೆ, ಪ್ರಜಾಪ್ರಭುತ್ವ ಸಂಸ್ಥೆಗಳನ್ನು ನಾಶಪಡಿಸಲಾಗುತ್ತಿದೆ ಮತ್ತು ನಮ್ಮ ಸಂವಿಧಾನವನ್ನು ಬದಲಾಯಿಸಲು ಪಿತೂರಿ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.

ಸರ್ವಾಧಿಕಾರದ ಆಡಳಿತ ದೇಶದಲ್ಲಿದ್ದು, ನಾವೆಲ್ಲರೂ ಸೂಕ್ತ ಉತ್ತರ ನೀಡುತ್ತೇವೆ. ತಮ್ಮನ್ನು ತಾವು ಶ್ರೇಷ್ಠ ಎಂದು ಪರಿಗಣಿಸಿರುವ ಮೋದಿ ಅವರು ದೇಶದ ಘನತೆ ಮತ್ತು ಪ್ರಜಾಪ್ರಭುತ್ವದ ಘನತೆಯನ್ನು ಹಾಳು ಮಾಡುತ್ತಿದ್ದಾರೆ ಎಂದು ಸೋನಿಯಾ ಗಾಂಧಿ ಆರೋಪಿಸಿದರು.

ಇದಕ್ಕೂ ಮುನ್ನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಜಾರ್ಖಂಡ್ ಮಾಜಿ ಸಿಎಂ ಹೇಮಂತ್ ಸೊರೆನ್ ಅವರನ್ನು ತನಿಖಾ ಸಂಸ್ಥೆಗಳನ್ನು ಬಂಧಿಸಿರುವುದನ್ನು ಉಲ್ಲೇಖಿಸಿ ಕೇಂದ್ರದ ಬಿಜೆಪಿ ಆಡಳಿತದಲ್ಲಿ ಪ್ರತಿಪಕ್ಷಗಳು ದಾಳಿಗೆ ಒಳಗಾಗುತ್ತಿವೆ ಎಂದು ಹೇಳಿದರು.

ನಿರುದ್ಯೋಗ ಮತ್ತು ಹಣದುಬ್ಬರ ಉತ್ತುಂಗದಲ್ಲಿದೆ ಮತ್ತು ಪೇಪರ್ ಲೀಕ್ ಪ್ರತಿ ರಾಜ್ಯದಲ್ಲೂ ನಡೆಯುತ್ತಿದೆ. ಬಡವರು ಮತ್ತು ರೈತರನ್ನು ಕೇಳಲು ಯಾರೂ ಇಲ್ಲ. ನಮ್ಮ ಪ್ರಣಾಳಿಕೆಗೆ ‘ನ್ಯಾಯ ಪತ್ರ’ ಎಂದು ಹೆಸರಿಟ್ಟಿದ್ದೇವೆ, ಈ ಪ್ರಣಾಳಿಕೆ ಚುನಾವಣೆಯ ನಂತರ ನಾವು ಮರೆತುಬಿಡುವ ಘೋಷಣೆಗಳ ಪಟ್ಟಿಯಲ್ಲ, ಇದು ನ್ಯಾಯವನ್ನು ಬಯಸುವ ರಾಷ್ಟ್ರದ ಧ್ವನಿಯಾಗಿದೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.