ವಾಣಿಜ್ಯ ಮಳಿಗೆಗಳ ಹರಾಜಿಗೆ ಕ್ರಮ ಕೈಗೊಳ್ಳಲು ಸೂಚನೆ

ಹಾನಗಲ್ 12:  ಸ್ಥಳೀಯ ಪುರಸಭೆ ವ್ಯಾಪ್ತಿಯಲ್ಲಿ ವಾಣಿಜ್ಯ ಮಳಿಗೆಗಳ ಹರಾಜಿಗೆ ಕ್ರಮ ಕೈಗೊಳ್ಳಬೇಕು. ಆ ಮೂಲಕ ಆದಾಯ ಹೆಚ್ಚಳಕ್ಕೆ ಮುಂದಾಗಿ ಶಾಸಕ ಶ್ರೀನಿವಾಸ ಮಾನೆ ಅವರು ಮುಖ್ಯಾಧಿಕಾರಿ ಜಗದೀಶ ವೈ.ಕೆ. ಅವರಿಗೆ ಸೂಚನೆ ನೀಡಿದರು. 

ಇಲ್ಲಿನ ಪುರಸಭೆ ಮುಖ್ಯಾಧಿಕಾರಿ  ಸೇರಿದಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಪುರಸಭೆಯ ಆದಾಯ ವೃದ್ಧಿಯಾದರೆ ಮೂಲಸೌಕರ್ಯ ಕಲ್ಪಿಸಲು ಅನುಕೂಲವಾಗಲಿದೆ. ಅಲ್ಲಲ್ಲಿ ಆದಾಯ ಸೋರಿಕೆಯಾಗುತ್ತಿದ್ದು, ಅದಕ್ಕೆ ಬ್ರೇಕ್ ಹಾಕಲು ಮುತುವರ್ಜಿ ವಹಿಸುವಂತೆ ಶಾಸಕ ಮಾನೆ ಸೂಚಿಸಿದರು. 

ನಗರೋತ್ಥಾನ ಯೋಜನೆಯಡಿಯ ಅನುದಾನದಲ್ಲಿ ಕೈಗೊಳ್ಳಲಾಗುತ್ತಿರುವ ರಸ್ತೆ ಹಾಗೂ ಸಿಸಿ ಚರಂಡಿ ಕಾಮಗಾರಿಗಳ ಪ್ರಗತಿ ವಿವರದ ಕುರಿತು ಮಾಹಿತಿ ಪಡೆದರು. ಗುಣಮಟ್ಟದ ಕಾಮಗಾರಿಗೆ ನಿಗಾ ವಹಿಸುವಂತೆ ಸೂಚಿಸಿದರು. ಲೋಕೋಪಯೋಗಿ ಇಲಾಖೆಯಿಂದ ನಡೆದಿರುವ ಮುಖ್ಯರಸ್ತೆ ಕಾಮಗಾರಿ ವಿಷಯದಲ್ಲಿ ಸಮನ್ವಯ ಸಾಧಿಸಿ ಎಂದರು. 

ನಗರದ ಜನತೆಗೆ ಮುಂದಿನ ಎರಡು-ಮೂರು ದಶಕಗಳ ದೃಷ್ಟಿಯಲ್ಲಿಕೊಂಡು ಕುಡಿಯುವ ನೀರು ಪೂರೈಸಲು ಶಾಶ್ವತದ ಕ್ರಮದ ಬಗೆಗೂ ಮಾಹಿತಿ ಸಂಗ್ರಹಿಸಿದರು. ಸ್ಲಂ ಬೋರ್ಡ್‌ ಮನೆಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ, ಆಶ್ರಯ ವಸತಿ ಯೋಜನೆಯಡಿ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಬೇಗ ಪೂರ್ಣಗೊಳಿಸುವಂತೆಯೂ ಶ್ರೀನಿವಾಸ ಮಾನೆ ಅವರು ಸಭೆಯಲ್ಲಿ ಸೂಚನೆ ನೀಡಿದರು.ಅಭಿಯಂತರ ನಾಗರಾಜ ಮಿರ್ಜಿ ಇದ್ದರು.