ಬಳ್ಳಾರಿಯಲ್ಲಿ ಆದಾಯ ತೆರಿಗೆ ತನಿಖಾ ವಿಭಾಗದ ನೂತನ ಕಚೇರಿ ಉದ್ಘಾಟನೆ

ಬಳ್ಳಾರಿಯಲ್ಲಿ ಆದಾಯ ತೆರಿಗೆ ತನಿಖಾ ವಿಭಾಗದ ನೂತನ ಕಚೇರಿ ಉದ್ಘಾಟನೆ New Income Tax Investigation Wing office inaugurated in Ballari

  

ಬಳ್ಳಾರಿ, ಆ.19: ತೆರಿಗೆದಾರರಿಗೆ ಗೌರವ, ಸೂಕ್ತ ಸೌಲಭ್ಯ ಹಾಗೂ ಉತ್ತಮ ಸೇವೆ ಒದಗಿಸುವುದು ಇಲಾಖೆಯ ಪ್ರಮುಖ ಕರ್ತವ್ಯ ಎಂದು ಹುಬ್ಬಳ್ಳಿ ವಿಭಾಗದ ಆದಾಯ ತೆರಿಗೆ (ತನಿಖಾ) ಇಲಾಖೆಯ ಜಂಟಿ ನಿರ್ದೇಶಕ ಭಾರತ್‌.ಆರ್‌. ಹೇಳಿದರು.  

ನಗರದ ಇನ್ಫೆಂಟ್ರಿ ರಸ್ತೆಯ ನೇತಾಜಿ ನಗರದ ಕೆಎಚ್‌ಬಿ ಕಾಲೋನಿಯ (ವಾರ್ಡ್‌ ನಂ.25) ಎ.ಬಿ.ಆರ್‌. ಕಾಂಪ್ಲೆಕ್ಸ್‌ನ ಮೂರನೇ ಮಹಡಿಯಲ್ಲಿ ನೂತನವಾಗಿ ಆರಂಭಗೊಂಡ ಆದಾಯ ತೆರಿಗೆ ತನಿಖಾ ವಿಭಾಗದ ಕಚೇರಿಯನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.  

ಚಿತ್ರದುರ್ಗದಿಂದ ಬೀದರ್‌ವರೆಗಿನ 12-13 ಜಿಲ್ಲೆಗಳ ಪೈಕಿ ಬಳ್ಳಾರಿ ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದು, ಹೆಚ್ಚಿನ ಜಿಎಸ್‌ಟಿ ನೋಂದಣಿ ಹಾಗೂ ಬ್ಯಾಂಕಿಂಗ್ ವಹಿವಾಟು ಹೊಂದಿದೆ. ತೆರಿಗೆ ವ್ಯಾಪ್ತಿ ವಿಸ್ತರಿಸುವ ‘ಆಪರೇಷನ್ ನಡ್ಸ್‌’ ಕಾರ್ಯಾಚರಣೆಯಡಿ ಬಳ್ಳಾರಿಯಲ್ಲಿ ಸುಮಾರು 40 ರಿಯಲ್ ಎಸ್ಟೇಟ್ ಯೋಜನೆಗಳನ್ನು ಗುರುತಿಸಲಾಗಿದೆ ಎಂದು ಅವರು ತಿಳಿಸಿದರು.  

ತೆರಿಗೆ ವಂಚನೆಗೆ ಸಂಬಂಧಿಸಿದಂತೆ ಬಳ್ಳಾರಿ ವ್ಯಾಪ್ತಿಯಲ್ಲಿ 200ಕ್ಕೂ ಹೆಚ್ಚು ಅರ್ಜಿಗಳು ಹಾಗೂ ದೂರುಗಳು ಬಂದಿದ್ದು, ಇತ್ತೀಚೆಗೆ 40 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಬ್ಯಾಂಕ್ ವಹಿವಾಟುಗಳ ಆಳವಾದ ತನಿಖೆ ಹಾಗೂ ಅಗತ್ಯವಿದ್ದಲ್ಲಿ ಸರ್ವೆ ಮತ್ತು ದಾಳಿ ಕಾರ್ಯಾಚರಣೆಗಳನ್ನು ಮುಂದುವರಿಸಲಾಗುವುದು ಎಂದರು.  

ಸ್ಥಳೀಯ ಆರ್ಥಿಕ ಸ್ಥಿತಿಗತಿ ಹಾಗೂ ತೆರಿಗೆ ಸಂಗ್ರಹ ಹೆಚ್ಚಿಸಲು ಸಿಎ ಮತ್ತು ವೃತ್ತಿಪರರೊಂದಿಗೆ ನಿಯಮಿತವಾಗಿ ಸಂವಾದ ನಡೆಸಲು ಇಲಾಖೆ ನಿರ್ಧರಿಸಿದೆ ಎಂದು ಭಾರತ್‌.ಆರ್‌. ಹೇಳಿದರು.  

ನೂತನ ಕಚೇರಿ ಆರಂಭದಿಂದ ಸಿಬ್ಬಂದಿಯಲ್ಲಿ ಹೊಸ ಉತ್ಸಾಹ ಮೂಡಿದ್ದು, ಸಾರ್ವಜನಿಕರಿಗೆ ಇನ್ನಷ್ಟು ಉತ್ತಮ ಸೇವೆ ನೀಡಲು ಬದ್ಧರಾಗಿರುವುದಾಗಿ ಬಳ್ಳಾರಿ ಆದಾಯ ತೆರಿಗೆ ಇಲಾಖೆಯ ಸಹಾಯಕ ನಿರ್ದೇಶಕ ಎ.ಪಿ. ವಿಜಯ್ ಚಂದ್ರ ಹೇಳಿದರು.  

ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ವಿಭಾಗದ ಸಹಾಯಕ ನಿರ್ದೇಶಕ ಕೆ.ಗೋಪಾಲ್ ಕೃಷ್ಣಮೂರ್ತಿ, ಬಳ್ಳಾರಿ ವಿಭಾಗದ ಸಹಾಯಕ ಆಯುಕ್ತರಾದ ಡಿ.ಪಾಂಡುರಂಗ ಮತ್ತು ಬಿ.ಜೆ.ರವಿ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಿಎ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.