ಡ್ರ್ಯಾಗನ್ ಬೇಸಾಯಕ್ಕೆ ನರೆಗಾ ಸಹಾಯ ರೈತನ ಆದಾಯ ದ್ವಿಗುಣ

ವಿಜಯನಗರ: ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಕಾಲ್ವಿ ಗ್ರಾಮದ ಬಣಕಾರ ಶಿವನಾಗಪ್ಪ ದೊಡ್ಡತೋಟಪ್ಪ(65) ಚಿಕ್ಕ ಬಡರೈತ. ದೊಡ್ಡ ಅವಿಭಕ್ತ ಕುಟುಂಬ. ಒಂದನೇ ತರಗತಿವರೆಗೆ ಓದಿದ್ದಾರೆ. ಬಡತನದಿಂದ ಕೃಷಿಕಾರ್ಯದಲ್ಲಿ ತೊಡಗಿಸಿಕೊಂಡರು. ಒಟ್ಟು 5 ಎಕರೆ ಭೂಮಿಯಲ್ಲಿ ಪಾರಂಪರಿಕ ಮೆಕ್ಕೆಜೋಳ ಮತ್ತಿತರೆ ಬೆಳೆ ಬೆಳೆಯುತ್ತಿದ್ದರಿಂದ ಅಷ್ಟಕ್ಕಷ್ಟೇ ಆದಾಯ ಬರುತ್ತಿತ್ತು. ಪದವಿ ಮುಗಿಸದ ಮಗ ಪ್ರಕಾಶ ಈಗ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಪ್ರೇರಣೆಯಿಂದ ಡ್ರ್ಯಾಗನ್ ಹಣ್ಣಿನ ಬೇಸಾಯ ಕೈಗೊಂಡಿದ್ದರಿಂದ ಕುಟುಂಬದ ಆದಾಯ ದ್ವಿಗುಣಗೊಳ್ಳುತ್ತಿದೆ.  

ತಮ್ಮ 2.5 ಎಕರೆ ಭೂಮಿಗೆ ಸಾವಯವ ಗೊಬ್ಬರ ಬೆರೆಸಿ ಭೂಮಿಯನ್ನು ಚೆನ್ನಾಗಿ ಹದಗೊಳಿಸಿದರು. ನಂತರ 2021ರ ಏಪ್ರಿಲಲ್ಲಿ ಹೈದ್ರಾಬಾದಿನಿಂದ ಪ್ರಕಾಶಮಾನವಾದ ಕೆಂಪು-ಗುಲಾಬಿ ಬಣ್ಣದ ಉತ್ತಮ ತುಂಡುಗಳನ್ನು ತಂದು ಕಂಬದಿಂದ ಕಂಬಕ್ಕೆ 8 ಅಡಿ ಮತ್ತು ಸಾಲಿನಿಂದ ಸಾಲಿಗೆ 12 ಅಡಿಯಂತೆ ಒಟ್ಟು 985 ಕಂಬಗಳಿಗೆ 4000 ಬಳ್ಳಿಗಳನ್ನು ಹರಡಿಸಿದ್ದಾರೆ. ಪ್ರತಿ 2-3 ತಿಂಗಳಿಗೊಮ್ಮೆ ಬಳ್ಳಿಗಳಿಗೆ ಗೊಬ್ಬರ ಹಾಕಿ ವಾರಕ್ಕೊಮ್ಮೆ ನೀರುಣಿಸುವರು. 

ಬಹುವಾರ್ಷಿಕ ಡ್ರ್ಯಾಗನ್ ಫ್ರೂಟ್ ಬೇಸಾಯಕ್ಕಾಗಿ ತೋಟಗಾರಿಕೆ ಇಲಾಖೆಯಿಂದ ಮಹಾತ್ಮಾಗಾಂಧಿ ನರೇಗಾ ಯೋಜನೆಯಡಿ ಗುಂಡಿ ತೋಡಲು ಮತ್ತು ಬಳ್ಳಿ ಹರಡುವಿಕೆೆಗಾಗಿ 1.28 ಲಕ್ಷ ರೂ. ಕಾರ್ಮಿಕರ ಖಾತೆಗೆ ನೇರವಾಗಿ ಮತ್ತು ಸಸಿಗಳ ಖರೀದಿ, ಸಾಗಣೆ, ಗೊಬ್ಬರ ಮತ್ತಿತರ ವೆಚ್ಚಗಳಿಗಾಗಿ 77581 ರೂ.ಗಳನ್ನು ಪಾವತಿಸಲಾಗಿದೆ. ಇದಲ್ಲದೆ ಕೊಳವೆ ಬಾವಿಗೆ ಹನಿ ನೀರಾವರಿ ಅಳವಡಿಸಿಕೊಳ್ಳಲೂ 33000 ರೂ. ಸಹಾಯಧನ ನೀಡಲಾಗಿದೆ.  

ತೋಟಗಾರಿಕೆ ಅಧಿಕಾರಿಗಳ ತಾಂತ್ರಿಕ ಸಲಹೆ, ಮಾರ್ಗದರ್ಶನದೊಂದಿಗೆ ಡ್ರ್ಯಾಗನ್ ಬೇಸಾಯ ಕ್ರಮಗಳನ್ನು ಅನುಸರಿಸಿದ್ದರಿಂದ 12 ತಿಂಗಳಿಂದಲೇ ಇಳುವರಿ ಪ್ರಾರಂಭವಾಗಿದೆ. ಈವರೆಗೆ 15 ಟನ್ ಡ್ರ್ಯಾಗನ್ ಹಣ್ಣಿನ ಇಳುವರಿ ಪಡೆದು 6 ಲಕ್ಷ ರೂ. ಲಾಭ ಗಳಿಸಿದ್ದಾರೆ. ಪ್ರತಿ ಹಣ್ಣು 250-800 ಗ್ರಾಂ ಮತ್ತು ಒಂದು ಕೆ.ಜಿ.ಗೆ 130-150ರೂ.ದಂತೆ ಮಾರಾಟವಾಗುತ್ತದೆ. ಹಣ್ಣು ಮಾರಾಟಗಾರರೇ ಇವರ ತೋಟದಿಂದ ನೇರವಾಗಿ ಡ್ರ್ಯಾಗನ್ ಹಣ್ಣು ಖರೀದಿಸುತ್ತಿದ್ದಾರೆ. ಸದರಿ ಬೇಸಾಯಕ್ಕೆ ಒಟ್ಟು 8 ಲಕ್ಷ ರೂ. ಖರ್ಚಾಗಿದೆ.  

ಕ್ಯಾಕ್ಟಸ್ ಜಾತಿಗೆ ಸೇರಿದ ಡ್ರ್ಯಾಗನ್ ಫ್ರೂಟ್ ಹೊಸ ತಳಿಯ ವಾಣಿಜ್ಯ ಮತ್ತು ವಿದೇಶಿ ಬೆಳೆಯಾಗಿದೆ. ತೋಟಗಾರಿಕೆ ಇಲಾಖೆಯ ಪ್ರೋತ್ಸಾಹದಿಂದ ಹಡಗಲಿ ತಾಲೂಕಿನ ಕಾಲ್ವಿ, ಇಟಿಗಿ, ಕೋಮಾರನಹಳ್ಳಿ ತಾಂಡಾ, ಮೀರಾಕೊರ‌್ನಹಳ್ಳಿ, ಮಹಾಜನದಹಳ್ಳಿ, ಹೊಳಲು ಮತ್ತು ಲಿಂಗನಾಯಕನಹಳ್ಳಿಯ ರೈತರೂ ಈ ಬೆಳೆಯತ್ತ ಆಕರ್ಷಿತರಾಗಿ ತಮ್ಮ ಆರ್ಥಿಕ ಸ್ಥಿತಿ ಉತ್ತಮಗೊಳಿಸಿಕೊಳ್ಳುತ್ತಿದ್ದಾರೆ. ಒಟ್ಟು ಮೂರು ಬಣ್ಣಗಳಿಂದ ಕೂಡಿರುವ ಮತ್ತು ರುಚಿಕರವಾಗಿರುವ ಈ ಹಣ್ಣು ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುವುದಲ್ಲದೆ ಡಯಾಬೀಟೀಸ್, ಡೆಂಗ್ಯೂ ಜ್ವರ, ಕ್ಯಾನ್ಸರ್ ಮತ್ತು ಹೃದ್ರೋಗ ಮುಂತಾದ ರೋಗಗಳಿಗೂ ಓಷಧಿ ರೂಪದಲ್ಲಿ ಕಾರ್ಯನಿರ್ವಹಿಸಲಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳ ಅಭಿಪ್ರಾಯವಾಗಿದೆ..  

“ಈ ಬೇಸಾಯ ಪ್ರಾರಂಭಿಸಿದಾಗ ಹಲವು ರೈತರು ಅಪಹಾಸ್ಯ ಮಾಡಿದ್ದರೂ ಎದೆಗುಂದದೆ ಬೇಸಾಯದಲ್ಲಿ ಯಶಸ್ಸು ಕಂಡು ಮೊದಲ ಬೆಳೆ ಪಡೆದಾಗ ನನ್ನ ಇಡೀ ಕುಟುಂಬ ಖುಷಿಪಟ್ಟಿತು ಮತ್ತು ಕುಟುಂಬದಲ್ಲಿ ನೆಮ್ಮದಿ ಕಾಣುವಂತಾಗಿದೆ. ಕಡಿಮೆ ನೀರು ಮತ್ತು ಅಲ್ಪಾವಧಿಯಲ್ಲೇ ಉತ್ತಮ ಇಳುವರಿ, 20-25 ವರ್ಷಗಳವರೆಗೆ ನಿರಂತರವಾಗಿ ಲಾಭ ನೀಡುವ ಬೆಳೆಯಾಗಿದೆ. ಇದರ ಬೇಸಾಯಕ್ಕೆ ತೋಟಗಾರಿಕೆ ಇಲಾಖೆಯ ಸಹಾಯ ಸಹಕಾರ ಸಂಪೂರ್ಣ ಸಿಕ್ಕಿದೆ. ವರ್ಷಕ್ಕೆ 10ಲಕ್ಷ ರೂ. ಆದಾಯದ ನೀರೀಕ್ಷೆಯಿದೆ”  ಎನ್ನುತ್ತಾರೆ ಪ್ರಕಾಶ ಬಣಕಾರ. ಇವರ ಸಂಪರ್ಕಕ್ಕಾಗಿ ಮೊಬೈಲ್ ಸಂಖ್ಯೆ 8150875058.