ಕಂಪ್ಲಿ:17. ಪ್ರತಿ ವರ್ಷ ನೆರೆ ಹಾವಳಿ ಬಂದಾಗ ಸೇತುವೆ ಮುಳುಗಿ ಸಂಪರ್ಕ ಕಡಿತವಾಗುವ ಮೂಲಕ ತಿಂಗಳುಗಟ್ಟಲೆ ಸಂಪರ್ಕ ಕಡಿತಗೊಳ್ಳುವ ರಾಜ್ಯದ ಪ್ರಮುಖ ಜಿಲ್ಲೆಗಳು, ನೆರೆ ರಾಜ್ಯದ ಅನೇಕ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುವ ಕಂಪ್ಲಿ ಕೋಟೆಯಲ್ಲಿ ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕಂಪ್ಲಿ-ಗಂಗಾವತಿ ಸಂಪರ್ಕ ಸೇತುವೆ ತೀರಾ ಹಳೆಯದಾಗಿ ಶಿಥಿಲಗೊಂಡಿದ್ದು ನೂತನ ಸೇತುವೆ ನಿರ್ಮಾಣ ಅತ್ಯಂತ ಅಗತ್ಯವಾಗಿದೆಯೆಂದು ಲೋಕೋಪಯೋಗಿ ಇಲಾಖೆ ಸಚಿವರಾದ ಸತೀಶ್ ಜಾರಕಿಹೊಳಿ ತಿಳಿಸಿದರು.
ಪಟ್ಟಣದ ಕಂಪ್ಲಿ-ಕೋಟೆಯ ತುಂಗಭದ್ರಾ ನದಿ ಸೇತುವೆಗೆ ಸೋಮವಾರ ರಾತ್ರಿ ಭೇಟಿ ವೀಕ್ಷಿಸಿ ಪರೀಶೀಲಿಸಿದ ನಂತರ ಮಾತನಾಡಿ, ಕಂಪ್ಲಿ ಶಾಸಕರಾದ ಜೆ.ಎನ್.ಗಣೇಶ್ ಮತ್ತು ಪಕ್ಷದ ಜನಪ್ರತಿನಿಧಿಗಳ, ಮುಖಂಡರ, ಕಾರ್ಯಕರ್ತರ, ಸಾರ್ವಜನಿಕರ ಗೌರವ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿ ಕಂಪ್ಲಿ ಕೋಟೆಯಲ್ಲಿ ತುಂಗಭದ್ರಾ ನದಿಗೆ ಅಡ್ಡಲಾಗಿ ಸಂಪರ್ಕ ಸೇತುವೆಯನ್ನು ನಿರ್ಮಿಸಿ ಏಳು ದಶಕಗಳಾಗಿದ್ದು, ಶಿಥಿಲಗೊಂಡಿದೆ.ಜೊತೆಗೆ ಪ್ರತಿ ವರ್ಷ ಮಳೆಗಾಲದಲ್ಲಿ ತುಂಗಭದ್ರಾ ಜಲಾಶಯದಿಂದ ನದಿಯಿಂದ ಲಕ್ಷಾಂತರ ಕ್ಯೂಸೆಕ್ಸ್ ನೀರನ್ನು ಬಿಟ್ಟಾಗ ಸಂಪರ್ಕ ಸೇತುವೆ ಮುಳುಗಡೆಯಾಗಿ ಕಂಪ್ಲಿ ಗಂಗಾವತಿ ಹಾಗೂ ನೆರೆಯ ಜಿಲ್ಲೆ,ನೆರೆ ರಾಜ್ಯದ ನಗರಗಳಿಗೆ ಸಂಪರ್ಕ ಕಡಿತಗೊಂಡು ಸುತ್ತು ಬಳಸಿ ಸಂಚರಿಸಬೇಕಾಗುವುದರಿಂದ ರೈತರು,ನೌಕರರು, ವಿದ್ಯಾರ್ಥಿಗಳು.ಕೃಷಿ ಸೇರಿದಂತೆ ಕೂಲಿ ಕಾರ್ಮಿಕರು ತೊಂದರೆ ಅನುಭವಿಸಬೇಕಾಗಿದೆ. ಈ ಬಗ್ಗೆ ಕಂಪ್ಲಿ ಶಾಸಕರಾದ ಜೆ.ಎನ್.ಗಣೇಶ್ ತಮ್ಮ ಹಾಗೂ ಸರ್ಕಾದ ಗಮನಕ್ಕೆ ತರುವುದರ ಜೊತೆಗೆ ಅಧಿವೇಷನದಲ್ಲಿಯೂ ಸುಧೀರ್ಘವಾಗಿ ಚರ್ಚಿಸಿ ಗಮನ ಸೆಳೆದಿದ್ದು, ಇದೀಗ ತಾವು ಖುದ್ಧಾಗಿ ಸೇತುವೆಯನ್ನು ಪರೀಶೀಲಿಸಿದ್ದು, ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವುದರ ಜೊತೆಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳೊಂದಿಗೆ ತಾಂತ್ರಿಕ ಸಮಸ್ಯೆಗಳ ಬಗ್ಗೆ ಚರ್ಚಿಸಿ ನೂತನ ಸೇತುವೆ ನಿರ್ಮಾಣಕ್ಕೆ ಕ್ರಮಗಳನ್ನು ಕೈಗೊಳ್ಳಲಾಗುವುದು.ಇದರಿಂದ ಈಭಾಗದ ಬಹುದಿನಗಳ ಕನಸನ್ನು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಸರ್ಕಾರ ಈಡೇರಿಸಲಿದೆ ಎಂದು ಭರವಸೆಯನ್ನು ನೀಡಿದರು.
ಇದೇ ಸಂದರ್ಭ ದಲ್ಲಿ ನೂತನ ಸೇತುವೆ ನಿರ್ಮಾಣ ಆಗ್ರಹಿಸಿ ರೈತ ಸಂಘ,ಕನ್ನಡ ಹಿತರಕ್ಷಕ ಸಂಘ, ಕರವೇಯ ವಿವಿಧ ಸಂಘಟನೆಗಳು, ಪ್ರೊ.ಕೃಷ್ಣಪ್ಪ ಸ್ಥಾಪಿತ ದಲಿತ ಸಂಘರ್ಷ ಸಮಿತಿ, ವಿವಿಧ ದಲಿತ ಸಂಘಟನೆಗಳು, ಪ್ರಗತಿಪರ ಸಂಘಟನೆಗಳ ಒಕ್ಕೂಟ,ಪಟ್ಟಣದ ವಿವಿಧ ಸಂಘಟನೆಗಳ ಪದಾಧಿಕಾರಿಗಳು,ತಾಲ್ಕೂಕಿನ ವಿವಿಧ ಗ್ರಾಮಗಳ ಸಂಘಟನೆಗಳು ಸೇರಿದಂತೆ ನೂರಾರು ಮನವಿ ಪತ್ರಗಳನ್ನು ಸಲ್ಲಿಸಿದರು. ಪುರಸಭೆ ಅಧ್ಯಕ್ಷ ಬಟ್ಟ ಪ್ರಸಾದ್.ಸ್ಥಾಯಿಸಮಿತಿ ಚೇರಮನ್ ಎಂ.ಉಸ್ಮಾನ್ , ಸದಸ್ಯರಾದ ಸಿ.ಆರ್.ಹನುಮಂತ,ಕೆ.ಎಸ್.ಚಾಂದ್ ಬಾಷಾ ಸೇರಿದಂತೆ ಇತರೆ ಸದಸ್ಯರು, ಎಪಿಎಂಸಿ ಅಧ್ಯಕ್ಷ ಹಬೀಬ್ ರೆಹಮಾನ್ ಮತ್ತು ಸದಸ್ಯರು, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕೆ.ಶ್ರೀನಿವಾಸರಾವ್ ಮತ್ತು ಪದಾಧಿಕಾರಿಗಳು, ಲೋಕೋಪಯೋಗಿ ಇಲಾಖೆ ಇಇ ಗವಿಯಪ್ಪ, ಎಇಇ ಹೇಮರಾಜ್, ಜೆಇ ಆನಂದ ಪೆಮ್ಮಾರ್, ಮುಖಂಡರಾದ ಕೆ.ಎಂ.ಹೇಮಯ್ಯಸ್ವಾಮಿ, ಅರವಿ ಬಸವನಗೌಡ, ಬಿ.ನಾರಾಯಣಪ್ಪ, ಕೆ.ಷಣ್ಮುಖಪ್ಪ, ಕೆ.ಚಂದ್ರಶೇಖರ್, ಬಿ.ಸಿದ್ದಪ್ಪ, ಮನೋಹರ್, ಜಾಫರ್ ಸೇರಿದಂತೆ ಹಾಲಿ.ಮಾಜಿ ಜನಪ್ರತಿನಿಧಿಗಳು, ರೈತರು, ಕಾರ್ಯಕರ್ತರು, ಸಾರ್ವಜನಿಕರು ಪಾಲ್ಗೊಂಡಿದ್ದರು.