ಕಂಪಿ 17: ಶಿಥಿಲಗೊಂಡ ಕಂಪ್ಲಿ-ಗಂಗಾವತಿ, ತುಂಗಭದ್ರ ನದಿ ಸೇತುವೆ ಹೊಸದಾಗಿ ನಿರ್ಮಿಸುವಂತೆ ಆಗ್ರಹಿಸಿ, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕಂಪ್ಲಿ ತಾಲೂಕು ಘಟಕದಿಂದ ಪಟ್ಟಣದ ಕಂಪ್ಲಿ-ಗಂಗಾವತಿ ಸಂಪರ್ಕ ಸೇತುವೆಗೆ ಭೇಟಿ ನೀಡಿದ ವೇಳೆ ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೋಳಿ ಇವರಿಗೆ ಮನವಿ ಪತ್ರ ಸಲ್ಲಿಸಿದರು.
ತಾಲೂಕು ಸಂಚಾಲಕ ಹೆಚ್.ಗುಂಡಪ್ಪ ಮಾತನಾಡಿ, ಕಂಪ್ಲಿ-ಗಂಗಾವತಿ, ತುಂಗಭದ್ರ ನದಿ ಸೇತುವೆಯು ಸುಮಾರು 65 ವರ್ಷದ ಹಳೆ ಸೇತುವೆಯಾಗಿದೆ. ಈಗಾಗಲೇ ಶಿಥಿಲಗೊಂಡಿದೆ. ಪ್ರತಿ ವರ್ಷದ ನೆರೆ ಹಾವಳಿಗೆ ನಿಲುಕಿ ಸೇತುವೆ ಶಿಥಿಲದೊಂದಿಗೆ ಬೀಳುವ ಪರಿಸ್ಥಿತಿಗೆ ಬಂದಿದೆ. ಪ್ರತಿ ವರ್ಷ ಮಳೆಗಾಲದಲ್ಲಿ ಪ್ರವಾಹ ಪರಿಸ್ಥಿತಿ ಬರುತ್ತದೆ. ಮತ್ತು ತುಂಗಭದ್ರ ಡ್ಯಾಂನಿಂದ ಹೆಚ್ಚುವರಿಯಾಗಿ ಒಂದು ಲಕ್ಷಕ್ಕೂ ಕ್ಯೂಸೆಕ್ಸ್ ನೀರು ಬಿಟ್ಟರೆ, ಸೇತುವೆ ಮುಳುಗಿ, ಸಂಚಾರ ಕಡಿತವಾಗಿ ತಿಂಗಳುಗಟ್ಟಲೇ ಜನತೆಗೆ ತೊಂದರೆಯಾಗುತ್ತದೆ. ಇದರಿಂದ ಸುಮಾರು 30 ಕಿ.ಮಿ. ಸುತ್ತಿಬಳಸಿ ಸಂಚಾರ ಮಾಡಬೇಕಾಗಿದೆ. ಇಲ್ಲಿನ ರೈತರಿಗೆ, ವಿದ್ಯಾರ್ಥಿಗಳಿಗೆ ಮತ್ತು ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿದೆ. ಹಲವು ವರ್ಷಗಳಿಂದ ಹೊಸ ಸೇತುವೆ ಸೇವೆಗೆ ಆಗ್ರಹಿಸುತ್ತಾ ಬರಲಾಗಿದೆ. ಆದರೆ, ಈಗ ಖುದ್ದಾಗಿ ಸಚಿವರು ಬಂದಿದ್ದು, ಸಾರ್ವಜನಿಕ ಹಿತದೃಷ್ಟಿಯಿಂದ, ಅಗತ್ಯಕ್ರಮ ಕೈಗೊಂಡು, ಕಂಪ್ಲಿ-ಗಂಗಾವತಿ ತುಂಗಭದ್ರ ಸೇತುವೆಯನ್ನು ಹೊಸದಾಗಿ ನಿರ್ಮಿಸಲು ಕಾಮಗಾರಿಯನ್ನು ಆರಂಬಿಸುವ ನಿಟ್ಟಿನಲ್ಲಿ ಶೀಘ್ರವಾದ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘಟನಾ ಸಂಚಾಲಕ ಹೆಚ್.ಮರಿಯಪ್ಪ, ಮುಖಂಡ ಎ.ಲಕ್ಷ್ಮೀಪತಿ, ಹೆಚ್.ಬಸವರಾಜ, ತಿಪ್ಪೇಸ್ವಾಮಿ, ಟಿ.ಹೊನ್ನೂರ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.