ನೇರ ಪ್ರಸಾರ ಫೋನ್-ಇನ್ ಕಾರ್ಯಕ್ರಮ
ಬೆಳಗಾವಿ, 4: ಕೆ.ಎಲ್.ಇ ವೇಣುಧ್ವನಿ 90.4 ಎಫ್. ಎಮ್. ಸಮುದಾಯ ಬಾನುಲಿ ಕೇಂದ್ರ ಬೆಳಗಾವಿ, ಕೆ.ಎಲ್.ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಬೆಳಗಾವಿ ಹಾಗೂ ಕೆ.ಎಲ್.ಇ ಜವಾಹರಲಾಲ್ ನೆಹರು ವೈದ್ಯಕೀಯ ಮಹಾವಿದ್ಯಾಲಯ ಬೆಳಗಾವಿ ಇವರ ಸಹಯೋಗದಲ್ಲಿ ನೇರ ಫೋನ್-ಇನ್ ಪ್ರಸಾರ ಕಾರ್ಯಕ್ರಮ ನಡೆಸಲಾಹಿತು.
ಶನಿವಾರ ಬೆಳಗ್ಗೆ 10 ರಿಂದ 11 ಗಂಟೆ ವರೆಗೆ ನಡೆದ ಕಾರ್ಯಕ್ರಮದಲ್ಲಿ ವಿಶ್ವ ಅಸ್ತಮಾ ದಿನ ದಿನದ ಅಂಗವಾಗಿ ಪ್ರಶ್ನೋತ್ತರ ಮೂಲಕ ಜನಜಾಗೃತಿ ಮೂಡಿಸಲಾಹಿತು. ಕಾರ್ಯಕ್ರಮದಲ್ಲಿ ಕೆ.ಎಲ್.ಇ ಜವಾಹರಲಾಲ ನೆಹರು ವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕರು ಮತ್ತು ಕೆ.ಎಲ್.ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ವೈದ್ಯರಾದ ಡಾ. ಜ್ಯೋತಿ ಹಟ್ಟಿಹೋಳಿ ಅವರು ಭಾಗವಹಿಸಿ ಅಸ್ತಮಾ ಕಾಯಿಲೆ ಕುರಿತು ಜಾಗೃತಿ ಮೂಡಿಸಿದರು.
ಇತ್ತೀಚಿನ ದಿನಗಳಲ್ಲಿ ಅಸ್ತಮಾ ಸಾಮಾನ್ಯ ಕಾಯಿಲೆಯಾಗಿದೆ, ದೀರ್ಘಕಾಲದ ಉಸಿರಾಟದ ಕಾಯಿಲೆಯಾಗಿರುವ ಅಸ್ತಮಾ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶ್ವ ಅಸ್ತಮಾ ದಿನವನ್ನು ಪ್ರತಿ ವರ್ಷ ಮೇ ತಿಂಗಳ ಒಂದನೇ ಮಂಗಳವಾರದಂದು ಆಚರಿಸಲಾಗುತ್ತದೆ. ವಿಶ್ವ ಅಸ್ತಮಾ ದಿನವನ್ನು ಮೊದಲ ಬಾರಿಗೆ 1998ರಲ್ಲಿ ಆಚರಿಸಲಾಯಿತು, ದಿನನಿತ್ಯ ನೂರಾರು ಜನರು ಅಸ್ತಮಾದಿಂದ ಬಳಲುತ್ತಿದ್ದಾರೆ, ಅಸ್ತಮಾ ಅಪಾಯಕಾರಿ ಕಾಯಿಲೆಯಾಗಿದ್ದು ಇದಕ್ಕೆ ಚಿಕಿತ್ಸೆ ಇದೆ ಎಂದು ತಿಳಿಸಿದರು.
ಮನುಷ್ಯನ ಎದೆಯಲ್ಲಿ ಬಿಗಿತ, ಉಸಿರಾಡಲು ಕಷ್ಟವಾಗುವುದು, ಪದೆ ಪದೆ ಕೆಮ್ಮು ಮತ್ತು ರೀತಿಯ ಉಸಿರುಗಟ್ಟಿದಂತೆ ಅನಿಸುವುದು ಇವೆಲ್ಲಾ ಅಸ್ತಮಾ ಕಾಯಿಲೆಯ ಲಕ್ಷಣಗಳು, ಪ್ರಾರಂಭದ ಹಂತದಲ್ಲಿ ಮಾರಣಾಂತಿಕವಲ್ಲದಿದ್ದರೂ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯದಿದ್ದರೆ ಇದು ಜೀವಕ್ಕೆ ಮಾರಕವಾಗುವುದು, ಅಸ್ತಮಾವನ್ನು ಪೂರ್ತಿಯಾಗಿ ಗುಣಪಡಿಸಲು ಸಾಧ್ಯವಿಲ್ಲ ಆದರೆ ಅದರ ಪರಿಣಾಮ ಮತ್ತು ಲಕ್ಷಣಗಳನ್ನು ಕಡಿಮೆಗೊಳಿಸಬಹುದು, ಕೆಲವೊಬ್ಬರಿಗೆ ಚಿಕ್ಕ ವಯಸ್ಸಿನಲ್ಲಿ ಕಾಡುವ ಅಸ್ತಮಾ ವಯಸ್ಸಾದ ಮೇಲೆ ಇಲ್ಲವಾಗುತ್ತದೆ ಅಥವಾ ಕೆಲವರಿಗೆ ಬಾಲ್ಯದಲ್ಲಿ ಇಲ್ಲದ್ದು ವಯಸ್ಕರರಾದ ಮೇಲೆ ಈ ಕಾಯಿಲೆಯ ಲಕ್ಷಣಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಆದ್ದರಿಂದ ಅಸ್ತಮಾ ಬಗ್ಗೆ ನಿರ್ಲಕ್ಷಿಸಬೇಡಿ ಚಿಕಿತ್ಸೆ ಪಡೆಯುವುದು ಮುಖ್ಯ ಎಂದು ಕಾರ್ಯಕ್ರಮದಲ್ಲಿ ಜಾಗೃತಿ ಮೂಡಿಸಿದರು ಮತ್ತು ಕೇಳುಗರ ಅಸ್ತಮಾ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದರು. ವೇಣುಧ್ವನಿಯ ಕಾರ್ಯಕ್ರಮ ನಿರ್ವಾಹಕಿ ಮನಿಷಾ ಪಿ. ಎಸ್ ಮತ್ತು ಮಂಜುನಾಥ ಪೈ ಕಾರ್ಯಕ್ರಮ ನಡೆಸಿಕೊಟ್ಟರು.