ಅನ್ನದಾನೀಶ್ವರನ ನೆನೆಯುತ್ತಾ ಬದುಕು ನಡೆಸೋಣ: ಸಿದ್ದಣ್ಣ ಯರಾಶಿ

ತಳಕಲ್ ಅನ್ನದಾನೀಶ್ವರ ಶಾಖಾಮಠದಲ್ಲಿ ಕಾರ್ತಿಕೋತ್ಸವ 

ಕುಕನೂರ 15: ಕುಂಬಾರ ಮಾಡಿದ ಹಣತೆಗೆ ಗಾಣಿಗ ತಯಾರಿಸಿದ ಎಣ್ಣೆ ಹಾಕಿ ರೈತ ಬೆಳೆದ ಬತ್ತಿಗೆ ಜ್ಯೋತಿ ಮುಟ್ಟಿಸಲು ಕುಲವಿಲ್ಲದ ಬೆಳಕು ನೋಡ ಎಂದು ಶರಣರು ಹೇಳಿದ್ದಾರೆ ಎಂದು ಬನ್ನಿಕೊಪ್ಪ ಗ್ರಾಮದ ಪ್ರಗತಿಪರ ರೈತ ಸಿದ್ದಣ್ಣ ಯರಾಶಿ ಹೇಳಿದರು.  

ಅವರು ಕುಕನೂರ ತಾಲೂಕಿನ ತಳಕಲ್ ಗ್ರಾಮದ ಅನ್ನದಾನೀಶ್ವರ ಶಾಖಾಮಠದಲ್ಲಿ ಕಾರ್ತಿಕೋತ್ಸವ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ ದೀಪವನ್ನು ಹಚ್ಚಿ ದೈವವನ್ನು ನೆನೆಯೋಣ ಅನ್ನುವುದು ಸಹ ನಂಬಿಕೆ, ಕತ್ತಲು ಇರುವ ಕಡೆ ಬೆಳಕು ಇರುವುದಿಲ್ಲ ಬೆಳಕು ಇರುವ ಕಡೆ ಕತ್ತಲು ಇರುವುದಿಲ್ಲ ದೀಪಕ್ಕೆ ಬೆಳಗುವುದು ಹಾಗೂ ಉರಿಯುವುದು ಎರಡು ಸಹ ತಿಳಿದಿದೆ ಒಳ್ಳೆಯದನ್ನ ಬೆಳಗುತ್ತಾ ಕೆಟ್ಟದನ್ನು ಉರಿದು ಹೋಗಲಿ ಎಂದು ಆಶಿಸುತ್ತಾ ನಂಬಿಕೆಯಲ್ಲಿ ದೀಪ ಹಚ್ಚೋಣ, ಅನ್ನದಾನೀಶ್ವರನ ನೆನೆಯೋಣ ಅಜ್ಜನ ಕೃಪೆ ಇದ್ದರೆ ನಮ್ಮ ಬದುಕು ಪಾವನವಾಗಲು ಸಾದ್ಯ ಎಂದರು. 

ನಂತರ ಮಾತನಾಡಿದ ಜಂತ್ಲಿ ಗ್ರಾಮದ ಜಾನಪದ ಕಲಾವಿದ ಗವಿಸಿದ್ದಯ್ಯ ಹಳ್ಳಿಕೇರಿಮಠ ಜನಪದ ಮತ್ತು ಜಾನಪದ ಎಂಬ ಶಬ್ದಗಳು ಒಂದು ಸಾಮಾಜಿಕ ವ್ಯವಸ್ಥೆಯನ್ನು ಸೂಚಿಸುತ್ತವೆ. ಪ್ರತಿಯೊಂದು ಸಾಮಾಜವೂ ತನ್ನ ಪುರಾತನರ ಸಾರವನ್ನು ಹೀರಿ ತನ್ನ ಸದ್ಯದ ಬದುಕಿಗೊಂದು ಅರ್ಥವನ್ನೂ ತನ್ನ ಸದ್ಯದ ಸಮಸ್ಯೆಗಳಿಗೊಂದು ಪರಿಹಾರವನ್ನೂ ತನ್ನ ಭಕ್ತಿಗೊಂದು ರೂಪವನ್ನೂ ಕಲೆ ತಂತ್ರಜ್ಞಾನ ಇತ್ಯಾದಿಗಳ ಬೆಳವಣಿಗೆಯನ್ನೂ ಸಾಮುದಾಯಿಕವಾಗಿ ನಿರ್ವಹಿಸುತ್ತದೆ. ಇದು ಯಾವುದೇ ಅಧಿಕಾರದ, ಸಂಪ್ರದಾಯದ  ಪೋಷಣೆಯಿಲ್ಲದೇ ತನ್ನಿಂದ ತಾನೇ ಹರಿದು ಬಂದು ಮಣ್ಣಿನ ಸಂಸ್ಕೃತಿಯ ಸಾರವಾಗಿ ಜಾನಪದ ಎನ್ನಿಸಿಕೊಂಡಿದೆ ಎಂದರು. 

ಕಾರ್ತಿಕೊತ್ಸವ ನಿಮಿತ್ಯ ಅಭಿಷೇಕ, ಸಂಜೆ ಜಂತ್ಲಿ ಗ್ರಾಮದ ಜಾನಪದ ಕಲಾವಿದ ಗವಿಸಿದ್ದಯ್ಯ ಹಳ್ಳಿಕೇರಿಮಠ ಅವರಿಂದ ಜಾನಪದ ಕಾರ್ಯಕ್ರಮ ಜರುಗಿತು. ಪ್ರಸಾದ ಸೇವೆಯನ್ನ ಹನುಮಂತ ಮಲ್ಲಪ್ಪ ಗೋರಿ ಕುಟುಂಬದವರು ಮಾಡಿದರು  

ಕುಕನೂರ ತಳಕಲ್ ಶಾಖಾಮಠದ ಡಾ ಮಹಾದೇವ ಮಹಾಸ್ವಾಮಿಗಳು, ತಿಪ್ಪಣ ತಳಬಾಳ, ಮಲ್ಲಿಕಾಸಾಬ್ ಮಾಸ್ತರ, ಶರಣಪ್ಪ ಶಿವರೆಡ್ಡಿ, ಕವಳಕೇರಿ ಶರಣಪ್ಪ, ವೀರಭದ್ರಪ್ಪ ಬೆದವಟ್ಟಿ, ಮಲ್ಲಪ್ಪ ಬಂಗಾರಿ, ಮುದಿಯಪ್ಪ ಯಗ್ಗಮ್ಮನವರ, ಆನಂದ ಚಿಲವಾಡಿಗಿ, ಶೇಕಪ್ಪ, ಹನುಮಪ್ಪ, ಶರಣಪ್ಪ, ಬಸವ ಬ್ಯಾಳಿ ಮತ್ತು ಇತರರು ಇದ್ದರು.