ಎಲ್ಲರೂ ಒಟ್ಟಾಗಿ ಮತ ಚಲಾಯಿಸಿ, ಪ್ರಜಾಪ್ರಭುತ್ವ ಗೆಲ್ಲಿಸೋಣ: ಶಿವಪೂಜೆ

ಮುಧೋಳ ಏ.23: ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಒಟ್ಟಾಗಿ ಮತ ಚಲಾಯಿಸಿ ಪ್ರಜಾಪ್ರಭುತ್ವವನ್ನು ಗೆಲ್ಲಿಸೋಣ, ಯಾವುದೇ ಆಮಿಷಕ್ಕೂ ಒಳಗಾಗದೆ, ನಿರ್ಭಯವಾಗಿ ಮುಕ್ತ ಹಾಗೂ ಪಾರದರ್ಶಕ ವಾತಾವರಣದಲ್ಲಿ ತಮ್ಮ ಮತವನ್ನು ಚಲಾಯಿಸಿ, ತನ್ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಇನ್ನಷ್ಟು ಗಟ್ಟಿಗೊಳಿಸುವಂತೆ ಮಾಡಬೇಕೆಂದು ಬಾಗಲಕೋಟ ಜಿ.ಪಂ ಯೋಜನಾ ನಿರ್ದೇಶಕ ಶಶಿಕುಮಾರ ಶಿವಪೂಜೆ ಹೇಳಿದರು. 

 ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಬಾಗಲಕೋಟ, ಮುಧೋಳ ಎಸ್‌.ಆರ್ ಕಂಠಿ ಕಾಲೇಜಿನ ಐಕ್ಯೂಎಸಿ ಕ್ರೈಟೇರಿಯಾ - 7 ರ ಅಡಿಯಲ್ಲಿ ತಾಲೂಕಿನ ಮೆಟಗುಡ್ಡ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿಇತ್ತೀಚೆಗೆ ಹಮ್ಮಿ ಕೊಂಡಿದ್ದ ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿ ಮತ ಚಲಾಯಿಸುವುದು ಕೇವಲ ನಿಮ್ಮ ಹಕ್ಕು ಮಾತ್ರವಲ್ಲ, ಅದು ದೇಶಕಟ್ಟುವ ನಿಟ್ಟಿನಲ್ಲಿ ಕರ್ತವ್ಯಕೂಡ ಆಗಿದೆ, ಈ ಅಭಿಯಾನದಲ್ಲಿ ಎಲ್ಲ ಅರ್ಹ ಮತದಾರರು ಕೈ ಜೋಡಿಸಿ ಶೇ. 100 ರಷ್ಟು ಮತದಾನಕ್ಕೆ ಮುಂದಾಗಬೇಕು, ಜಗತ್ತಿನಲ್ಲೇ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಒಪ್ಪಿಕೊಂಡ ಅತಿ ದೊಡ್ಡ ದೇಶ ನಮ್ಮದು, ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ವ್ಯವಸ್ಥೆ ಯನ್ನು ಸುಧಾರಿಸುವ, ಅಭಿವೃದ್ಧಿಗೆ ಪೂರಕವಾಗಿ ಚುನಾವಣೆಗಳು ಅತಿ ಮಹತ್ತರ ಪಾತ್ರ ವಹಿಸುತ್ತದೆ, ಹಲವು ಹಂತದ ಈ ಚುನಾವಣೆಯಲ್ಲಿ ನಮ್ಮ ದೇಶದ ಆಡಳಿತವನ್ನು ನಡೆಸುವ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಚುನಾವಣೆಗಳಿಗೆ ಅತಿ ಮಹತ್ವ ನೀಡಬೇಕಾಗುತ್ತದೆ, ಈ ಚುನಾವಣೆಯ ಪ್ರಕ್ರಿಯೆಯಲ್ಲಿ ಎಲ್ಲರೂ ಸಕ್ರಿಯವಾಗಿ, ಮುಕ್ತವಾಗಿ ಭಾಗವಹಿಸುವಂತೆ ಮನವಿ ಮಾಡಿದರು. 

ತಾಲೂಕಾ ಆರೋಗ್ಯಾಧಿಕಾರಿ ಡಾ.ವೆಂಕಟೇಶ ಮಲಘಾಣ ಮಾತನಾಡಿ ಬೇಸಿಗೆ ಬಿಸಲು ಬಹಳ ಇರುವದರಿಂದ ನಾವೇಲ್ಲರು ನಮ್ಮೆಲ್ಲರ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹುಮುಖ್ಯ ಈ ನಿಟ್ಟಿನಲ್ಲಿ ತಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದರು. 

ಮುಧೋಳ ಎಸ್‌.ಆರ್‌.ಕಂಠಿ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಮಲ್ಲಣ್ಣ ಜಿಗಬಡ್ಡಿ ಅಧ್ಯಕ್ಷತೆವಹಿಸಿ ಮಾತನಾಡಿ ಮತದಾನ ಮಾಡುವುದು ನಮ್ಮೆಲ್ಲರ ಹಕ್ಕು ಮತ್ತು ಕರ್ತವ್ಯ ವಾಗಿರುತ್ತದೆ ಇದನ್ನು ತಾವೆಲ್ಲರೂ ಗಮನದಲ್ಲಿಟ್ಟುಕೊಂಡು ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಹೇಳಿ ಆರೋಗ್ಯದ ಬಗ್ಗೆ ಯಾವತ್ತೂ ನಿರ್ಲಕ್ಷ ಮಾಡಬಾರದೆಂದು ಹೇಳಿದರು. 

ಮೆಟಗುಡ್ಡ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾದಿಕಾರಿ ಡಾ.ಸಚಿನ ಶ್ಯಾಮಸುಂದರ ಪ್ರಾಸ್ತಾವಿಕವಾಗಿ ಮಾತನಾಡಿ ನರೇಗಾ ಯೋಜನೆಯ ಅಡಿಯಲ್ಲಿ ಕೆಲಸ ಮಾಡುತ್ತಿರುವ ಎಲ್ಲ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ ಮಾಡಲಾಗುತ್ತದೆ ಇದರ ಪ್ರಯೋಜನ ಪ್ರತಿಯೊಬ್ಬರು ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು. 

ಐಕ್ಯೂಎಸಿ ಕ್ರೈಟೇರಿಯಾ-7ರ ಅಧ್ಯಕ್ಷ ಡಾ.ಸುರೇಶ ಮೋದಿ, ಸದಸ್ಯರಾದ ಪ್ರೊ.ಕೆ.ಎಸ್‌. ಮಾಲಾಪೂರ, ರವಿ ಗೌಡರ, ಎಸ್‌.ಪಿ.ಸಂಗಳಿ, ವಿ.ಎಸ್‌.ಮುನವಳ್ಳಿ, ಕೆ.ಕೆ.ಕಿತ್ತೂರ, ಪ್ರೀತಿ ಕರಡಿ, ಲಕ್ಷಿ-್ಮ ಬಿರಾದಾರ, ಪಿಡಿಓ ಹೆಚ್‌.ಆರ್‌.ಬಿರಾದಾರ, ವ್ಹಿ.ಎಮ್‌.ಮಳಲಿ, ಗ್ರಾಮ ಲೆಕ್ಕಿಗ ರೇಣುಕಾ, ಎಂ.ಜಿ. ಮಂಗೊಳಿ ವೇದಿಕೆ ಮೇಲೆ ಇದ್ದರು. 

ಪ್ರೊ.ವೀರಣ್ಣ ಕಿತ್ತೂರ ಸ್ವಾಗತಿಸಿ, ನಿರೂಪಿಸಿದರು, ಪ್ರೊ.ಎಸ್‌.ಪಿ.ಸಂಗಳಿ ವಂದಿಸಿದರು. 

ನರೇಗಾ ಯೋಜನಾ ಕಾರ್ಮಿಕರು, ಆರೋಗ್ಯ ಕೇಂದ್ರದ ಸಿಬ್ಬಂದಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆ ಯರು ಹಾಗೂ ಆಸ್ಪತ್ರೆಯ ರೋಗಿಗಳು, ಎಸ್‌.ಆರ್‌.ಕಂಠಿ ಕಾಲೇಜಿನ ವಿದ್ಯಾರ್ಥಿಗಳು ಇದ್ದರು.