ಕನ್ನಡ ರಾಜ್ಯೋತ್ಸವ ಪೂರ್ವಭಾವಿ ಸಭೆ: ಅರ್ಥಪೂರ್ಣ ಆಚರಣೆಗೆ ನಿರ್ಧಾರ

ಇಂಡಿ 25: ಕನ್ನಡ ರಾಜ್ಯೋತ್ಸವ ಕಾರ‌್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಅದಲ್ಲದೇ ಯಾವುದೇ ಲೋಪವಾಗದಂತೆ, ಅರ್ಥಪೂರ್ಣವಾದ ಕಾರ‌್ಯಕ್ರಮಕ್ಕೆ ಎಲ್ಲರ ಸಹಕಾರ ಮತ್ತು ತಾಲೂಕು ಅಧಿಕಾರಿಗಳಿಗೆ ಕೊಟ್ಟ ಜವಾಬ್ದಾರಿ ಹಾಗೂ ಸೂಚಿಸಿದ ಕಾರ‌್ಯ ಚಟುವಟಿಕೆಗಳು ವ್ಯವಸ್ಥಿತವಾಗಿ ಮಾಡಬೇಕು ಎಂದು ಕಂದಾಯ ಉಪವಿಭಾಗ ಅಧಿಕಾರಿ ಆಬೀದ್ ಗದ್ಯಾಳ ಬುಧವಾರ ಹೇಳಿದರು. 

ಬುಧವಾರ ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಏರಿ​‍್ಡಸಿದ್ದ ಕನ್ನಡ ರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ  ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. 

ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವ ನಿಗದಿಪಡಿಸಿದ ಕಾರ‌್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಲಾಗುವುದು. ಭುವನೇಶ್ವರಿ ಭಾವಚಿತ್ರದ ಮೆರವಣಿಗೆ ಎತ್ತಿನ ಬಂಡಿಯಲ್ಲಿ ಪಟ್ಟಣದ ಪ್ರವಾಸಿ ಮಂದಿರದಿಂದ ಬಾಬು ಜಗಜೀವನ ರಾಮ್ ವೃತ್ತ, ಬಸವೇಶ್ವರ ವೃತ್ತ, ಮಹಾವೀರ ವೃತ್ತ ಹಾಗೂ ಡಾ ಬಿ.ಅರ್‌. ಅಂಬೇಡ್ಕರ್ ವೃತ್ತದ ಮೂಲಕ ಹಾದು ತಾಲೂಕು ಪೋಲಿಸ್ ಮೈದಾನದಲ್ಲಿ ಕಾರ‌್ಯಕ್ರಮ ಜರುಗುತ್ತದೆ ಎಂದು ತಿಳಿಸಿದರು. 

ಶಾಲಾ ಕಾಲೇಜು ಹಾಗೂ ತಾಲೂಕು ಅಧಿಕಾರಿಗಳಿಂದ ಪ್ರಭಾತ್ ಪೇರಿ ನಡೆಸಲಿದ್ದು, ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ‌್ಯಕ್ರಮ ಏರ್ಪಡಿಸಲಾಗುವುದು,  

ಕಾರ‌್ಯಕ್ರಮ ನಡೆಯುವ ಪೋಲಿಸ್ ಮೈದಾನವನ್ನು ಸ್ವಚ್ಛಗೊಳಿಸಿ ತಳಿರು ತೋರಣ ಕಟ್ಟುವ ಜವಾಬ್ದಾರಿಯನ್ನು ಪುರಸಭೆಗೆ ವಹಿಸಲಾಗಿದೆ. ಶಾಮಿಯಾನ, ಧ್ವನಿವರ್ಧಕ, ಕುಡಿಯುವ ನೀರು, ಫೋಟೊ, ವಿಡಿಯೋ ಚಿತ್ರೀಕರಣ ಸೇರಿದಂತೆ ಕಾರ‌್ಯಕ್ರಮಕ್ಕೆ ಅಗತ್ಯವಿರುವ ಎಲ್ಲವನ್ನೂ ಒಂದೊಂದು ಇಲಾಖೆ ನಿರ್ವಹಿಸುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಉಪವಿಭಾಗ ಅಧಿಕಾರಿ ಸೂಚಿಸಿದರು. ಕಾರ‌್ಯಕ್ರಮದಲ್ಲಿ ಭಾಗವಹಿಸುವ ಮಕ್ಕಳಿಗೆ ಉತ್ತಮ ಗುಣಮಟ್ಟದ ಉಪಹಾರ, ಸಿಹಿಯನ್ನು ವಿತರಿಸಲಾಗುವುದು. ಕನ್ನಡ ಪರ ಹೋರಾಟಗಾರರು, ಸಾಹಿತಿಗಳು, ಕವಿಗಳನ್ನು ಸನ್ಮಾನಿಸಲಾಗುತ್ತಿದ್ದು, ಸನ್ಮಾನಿತರ ಆಯ್ಕೆಗೆ ಸಮಿತಿ ರಚಿಸಲಾಗುವುದು ಹಾಗೂ ಸ್ಥಳೀಯ ಜಾನಪದ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಬೇಕು, ಎಂದು ಅಧಿಕಾರಿಗಳಿಗೆ ಸೂಚಿಸಿದರು. 

ಅಧಿಕಾರಿಗಳ ಗೈರು:  

ತಾಲೂಕು ಅಧಿಕಾರಿಗಳು ಪೂರ್ವಭಾವಿ ಸಭೆಗೆ ಮತ್ತು ಕಾರ‌್ಯಕ್ರಮಕ್ಕೆ ಗೈರು ಹಾಜರಾಗುತ್ತಿದ್ದಾರೆ. ಈ ಬಗ್ಗೆ ಗಮನಕ್ಕೆ ತಂದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಕರವೇ ಅಧ್ಯಕ್ಷ ಬಾಳು ಮುಳಜಿ, ಅಯೂಬ್ ನಾಟೀಕಾರ, ಶಿವು ಮಲಕಗೊಂಡ, ರಾಜು ಪಡಗಾನೂರ, ಚಂದ್ರಶೇಖರ ಹೊಸಮನಿ ಸೇರಿದಂತೆ ಕನ್ನಡ ಪರ ಸಂಘಟನೆಗಳು ಮತ್ತು ಮುಖಂಡರು ಪದೆ ಪದೇ ಗೈರಾಗುತ್ತಿದ್ದಾರೆ ಎಂದು ದೂರಿದರು. ಈ ಸಂದರ್ಭದಲ್ಲಿ ಸೇರಿದಂತೆ ಕೆಲವು ಇಲಾಖೆಗಳ ಅಧಿಕಾರಿಗಳ ಗೈರು ಹಾಜರಾಗಿದ್ದು ಇನ್ನು ಕೆಲವು ಇಲಾಖೆಯ ನೌಕರರು ಸಭೆ ಮುಗಿಯುವ ವೇಳೆಗೆ ಸಭೆಗೆ ಹಾಜರಾಗಿದ್ದು, ಸಮಯಕ್ಕೆ ಸರಿಯಾಗಿ ಸಭೆಗೆ ಹಾಜರಾಗದ ಅಧಿಕಾರಿಗಳಿಗೆ ನೋಟಿಸ್ ನೀಡಿ, ಜಿಲ್ಲಾಧಿಕಾರಿಗಳ ಹಾಗೂ ಸರಕಾರದ ಗಮನಕ್ಕೆ ತರಲಾಗುವುದು ಎಂದು ಕಂದಾಯ ಉಪವಿಭಾಗಾಧಿಕಾರಿಗಳು ತಿಳಿಸಿದರು. 

ಈ ಸಂದರ್ಭದಲ್ಲಿ ಕಸಾಪ ಅಧ್ಯಕ್ಷ ರಾಘವೇಂದ್ರ ಕುಲಕರ್ಣಿ, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ, ಇಒ ರಾಠೋಡ, ಸಮಾಜ ಕಲ್ಯಾಣ ಬಿ.ಜೆ.ಇಂಡಿ, ಕೃಷಿ ಇಲಾಖೆ ಮಹಾದೇವ ಏವೂರ,  ತೋಟಗಾರಿಕೆ ಎಚ್‌.ಎಸ್‌. ಪಾಟೀಲ್, ಡಾ. ಜಗದೀಶ್ ಬಿರಾದಾರ, ಕ್ಷೇತ್ರ ಸಮಯನ್ವಯ ಅಧಿಕಾರಿ ಎಸ್‌.ಆರ್‌. ನಡಗಡ್ಡಿ, ಕ್ರೀಡಾ ಅಧಿಕಾರಿ ಎ.ಎಸ್‌. ಲಾಳಸೇರಿ, ಎಸ್‌.ಆರ್‌. ರುದ್ರವಾಡಿ ಹಾಗೂ ಮುಖಂಡರಾದ ಮುತ್ತಪ್ಪ ಪೊತೆ, ಸುರೇಶ ಎವೂರ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶಿರಸ್ತೆದಾರ ಬಸವರಾಜ ರಾವೂರ ಸ್ವಾಗತಿಸಿ ನಿರೂಪಿಸಿದರು.