ಜೈಲರ್ ಸಿದ್ದರಾಮಪ್ಪ ಸಾವಿನ ಪ್ರಕರಣ: ನ್ಯಾಯಸಮ್ಮತ ತನಿಖೆಗೆ ಸ್ವಾಮೀಜಿಗಳ ಆಗ್ರಹ
Jailer Siddaramappa's death case: Swamiji demands fair investigation
ಲೋಕದರ್ಶನ ವರದಿ
ರೊಣ 26: ಕರ್ತವ್ಯ ಲೋಪದ ಆರೋಪದ ಹಿನ್ನೆಲೆಯಲ್ಲಿ ಅಮಾನತುಗೊಂಡು, ಇತ್ತೀಚೆಗಷ್ಟೇ ಮೈಸೂರಿಗೆ ವರ್ಗಾವಣೆಯಾಗಿದ್ದ ಜೈಲರ್ ಸಿದ್ದರಾಮಪ್ಪ ಅವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಅವರ ಆಪ್ತ ವಲಯ ಹಾಗೂ ಸಾರ್ವಜನಿಕರಲ್ಲಿ ತೀವ್ರ ಆಘಾತವನ್ನುಂಟು ಮಾಡಿದೆ. ಸಿದ್ದರಾಮಪ್ಪ ಅವರ ನಿಧನದ ಸುದ್ದಿ ತಿಳಿದು ಭೋವಿ ಗುರುಪೀಠದ ಜಗದ್ಗುರುಗಳಾದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅವರು ಗದಗ ಜಿಲ್ಲೆ ರೋಣ ತಾಲ್ಲೂಕಿನ ಸೂಡಿ ಗ್ರಾಮದಲ್ಲಿರುವ ಮೃತರ ನಿವಾಸಕ್ಕೆ ಭೇಟಿ ನೀಡಿದರು. ದುಃಖತಪ್ತ ಕುಟುಂಬಸ್ಥರನ್ನು ಭೇಟಿಯಾಗಿ, ಅವರಿಗೆ ಆತ್ಮಸ್ಥೈರ್ಯ ತುಂಬಿ ಸಾಂತ್ವನ ಹೇಳಿದರು.
ಮೇಲಾಧಿಕಾರಿಗಳ ವರ್ತನೆಗೆ ಶ್ರೀಗಳ ತೀವ್ರ ಅಸಮಾಧಾನ ಘಟನೆಯ ಕುರಿತು ತನಿಖೆ ಹಾಗೂ ಇಲಾಖೆಯ ಮೇಲಾಧಿಕಾರಿಗಳ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಶ್ರೀಗಳು, ಇಲಾಖೆಯೊಳಗಿನ ಮಾನಸಿಕ ಕಿರುಕುಳದ ವಿರುದ್ಧ ಎಚ್ಚರಿಕೆ ನೀಡಿದರು."ಯಾವುದೇ ಅಧಿಕಾರಿಯ ಮೇಲೆ ಆರೋಪಗಳು ಕೇಳಿ ಬಂದಾಗ ಇಲಾಖೆಯು ಸೂಕ್ತವಾಗಿ ಸತ್ಯಶೋಧನೆ ನಡೆಸಬೇಕೇ ವಿನಃ ಮೇಲಾಧಿಕಾರಿಗಳು ಮಾನಸಿಕ ಕಿರುಕುಳ ನೀಡಬಾರದು. ಮೃದು ಮನಸ್ಸಿನವರು ಇಂತಹ ಆರೋಪಗಳನ್ನು ಸಹಿಸಲಾರದೆ ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರ ಕೈಗೊಳ್ಳುವಂತಾಗುತ್ತದೆ.
ಅಧಿಕಾರಿಗಳು ಇಂತಹ ನಿರ್ಧಾರ ತಳೆದು, ಅವರನ್ನು ನಂಬಿದ ಕುಟುಂಬ ಬೀದಿಗೆ ಬೀಳಲು ಮೇಲಾಧಿಕಾರಿಗಳೇ ಕಾರಣವಾಗಬಾರದು." ಮುಂದುವರಿದು ಮಾತನಾಡಿದ ಶ್ರೀಗಳು, "ಪ್ರಾಮಾಣಿಕವಾಗಿ ಇರುವವರಿಗೆ ಸಮಾಜದಲ್ಲಿ ಆರೋಪ, ಅಪವಾದಗಳು ಎದುರಾದಾಗ ಅದನ್ನು ಧೈರ್ಯದಿಂದ ಎದುರಿಸುವ ಶಕ್ತಿ ಬೇಕಾಗುತ್ತದೆ. ಎಂತಹದ್ದೇ ಕಠಿಣ ಪರಿಸ್ಥಿತಿ ಬಂದರೂ ಆತ್ಮ ಸ್ಥೈರ್ಯದಿಂದ ಇರಬೇಕೇ ಹೊರತು, ಯಾರೂ ಇಂತಹ ದುಡುಕಿನ ನಿರ್ಧಾರಗಳನ್ನು ಕೈಗೊಳ್ಳಬಾರದು," ಎಂದು ಸಾರ್ವಜನಿಕರಲ್ಲಿ ಕಳಕಳಿಯ ಮನವಿ ಮಾಡಿಕೊಂಡರು. ಒಡನಾಡಿಗಳಲ್ಲಿ ಆಘಾತ, ಕಂಬನಿಸಿದ್ದರಾಮಪ್ಪ ಅವರ ಆಕಸ್ಮಿಕ ಸಾವು ಅವರ ಒಡನಾಡಿಗಳು ಮತ್ತು ಸಹೋದ್ಯೋಗಿಗಳಲ್ಲಿ ತೀವ್ರ ದಿಗ್ಭ್ರಮೆ ಮೂಡಿಸಿದೆ.
"ಸಿದ್ದರಾಮಪ್ಪ ಅವರು ಅತ್ಯಂತ ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿಯಾಗಿದ್ದರು. ಅವರು ಕರ್ತವ್ಯ ಲೋಪದ ಆರೋಪದಲ್ಲಿ ಸಿಲುಕಿದ್ದರು ಎಂಬುದನ್ನು ನಂಬಲು ಸಾಧ್ಯವೇ ಇಲ್ಲ" ಎಂದು ಅವರ ಆಪ್ತ ವಲಯದವರು ಕಣ್ಣೀರಿಟ್ಟಿದ್ದಾರೆ.ಎರಡು ತಿಂಗಳ ಹಿಂದೆ ನಡೆದಿದ್ದ ಅಮಾನತು ಹಾಗೂ ತದನಂತರದ ವರ್ಗಾವಣೆಯ ಘಟನೆಗಳೇ ಈ ದುರಂತಕ್ಕೆ ಕಾರಣ ಎನ್ನಲಾಗುತ್ತಿದ್ದು, ಪ್ರಕರಣದ ಕುರಿತು ತನಿಖೆಯಾಗಬೇಕೆಂದು ಒತ್ತಾಯಿಸಿದರು.
ಈ ವೇಳೆ ಭೋವಿ ವಡ್ಡರ ಸಮಾಜದ ಜಿಲ್ಲಾ ಅಧ್ಯಕ್ಷ ತುಳಸಪ್ಪ ಪೂಜಾರ್, ಕಲಘಟಗಿ ತಾಲೂಕು ಅಧ್ಯಕ್ಷ ನರೇಶ್ ಮಲೆನಾಡು, ಭೋವಿ ಸಮಾಜದ ರಾಜ್ಯಾ ಕಾರ್ಯಧ್ಯಕ್ಷ ರವಿ ಪೂಜಾರಿ, ಹು-ಧಾ ಮಹಾನಗರ ಪಾಲಿಕೆ ನಾಮ ನಿರ್ದೇಶನ ಸದಸ್ಯ ಮಂಜುನಾಥ ಭೋವಿ, ನಿವೃತ್ತ ಜೈಲರ್ ಸಿದ್ಧಪ್ಪ, ಸೋಮಣ್ಣ ಬಂಡಿವಡ್ಡರ್, ದುರ್ಗಪ್ಪ ವಡ್ಡರ್, ಮಾರುತಿ ವಡ್ಡರ ಸೇರಿದಂತೆ ಸಮಾಜದ ಹಿರಿಯರು, ಬಾಂಧವರು ಮತ್ತಿತರರಿದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 