ಧರ್ಮವಂತರಾಗಿ ಬಾಳಿದರೆ ಧರ್ಮ ನಮ್ಮನ್ನು ಕಾಪಾಡುತ್ತದೆ: ಬೂದೀಶ್ವರ ಶ್ರೀ

ಧರ್ಮವಂತರಾಗಿ ಬಾಳಿದರೆ ಧರ್ಮ ನಮ್ಮನ್ನು ಕಾಪಾಡುತ್ತದೆ: ಬೂದೀಶ್ವರ ಶ್ರೀ  If we live righteously, righteousness protects us: Budheeshwara Sri


ಗದಗ, ಆ.19: ಹುಟ್ಟು ಮತ್ತು ಸಾವು ಪ್ರಕೃತಿಯ ನಿಯಮವಾಗಿದ್ದು, ಇವೆರಡರ ನಡುವಿನ ಬದುಕನ್ನು ಸಾರ್ಥಕಪಡಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಹೊಸಳ್ಳಿ ಬೂದೀಶ್ವರ ಶ್ರೀಮಠದ ಪೂಜ್ಯ ಅಭಿನವ ಜಗದ್ಗುರು ಬೂದೀಶ್ವರ ಮಹಾಸ್ವಾಮಿಗಳು ಹೇಳಿದರು.  

ನಗರದ ಒಕ್ಕಲಗೇರಿ ಓಣಿಯ ಗ್ರಾಮ ದೇವತೆಗಳಾದ ಶ್ರೀ ದ್ಯಾಮವ್ವ ಹಾಗೂ ಶ್ರೀ ದುರ್ಗಮ್ಮ ದೇವಿಯರ ಹರಿಜಾತ್ರಾ ಮಹೋತ್ಸವದ ಮೊದಲ ದಿನದ ಸಭಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.  

ಭೂಮಿಯಲ್ಲಿ 84 ಲಕ್ಷ ಜೀವ ರಾಶಿಗಳಿದ್ದು, ಅವುಗಳಿಗೆ ದೊರೆಯದ ಅರಿವಿನ ಶಕ್ತಿಯನ್ನು ಮನುಷ್ಯನಿಗೆ ನೀಡಲಾಗಿದೆ. ಈ ಮಾನವ ಜನ್ಮವನ್ನು ಸಾರ್ಥಕಪಡಿಸಿಕೊಳ್ಳಲು ಹಸಿದವರಿಗೆ ಅನ್ನ, ಬಾಯಾರಿದವರಿಗೆ ನೀರು, ಮಾನ ಮುಚ್ಚಿಕೊಳ್ಳಲು ಬಟ್ಟೆ ನೀಡಿ, ಸಂಕಷ್ಟದಲ್ಲಿರುವವರಿಗೆ ನೆರವಾಗಬೇಕು. ನಾವು ನಮ್ಮನ್ನು ಪ್ರೀತಿಸುವಂತೆ ಇತರರನ್ನೂ ಪ್ರೀತಿಸಬೇಕು ಎಂದರು.  

ನಾವು ಸಂಕಷ್ಟದಲ್ಲಿದ್ದಾಗ ನೆರವಾಗುವುದು ಧರ್ಮ. ನಾವು ಮಾಡುವ ಪೂಜೆಯನ್ನು ದೇವರು ನೋಡುತ್ತಾನೆಯೋ ಇಲ್ಲವೋ ಗೊತ್ತಿಲ್ಲ; ಆದರೆ ನಾವು ಮಾಡುವ ಉತ್ತಮ ಕಾರ್ಯಗಳನ್ನು ಖಂಡಿತ ನೋಡುತ್ತಾನೆ. ಆದ್ದರಿಂದ ದುಷ್ಟ ಆಲೋಚನೆಗಳನ್ನು ದೂರವಿಟ್ಟು ಧರ್ಮದ ಹಾದಿಯಲ್ಲಿ ಬದುಕಬೇಕು. ಪ್ರವಚನ ಆಲಿಸಿ, ಉತ್ತಮ ಕಾರ್ಯಗಳಲ್ಲಿ ತೊಡಗಿಸಿಕೊಂಡಾಗ ಹರಿಜಾತ್ರೆಯ ಉದ್ದೇಶ ಸಾರ್ಥಕವಾಗುತ್ತದೆ ಎಂದು ಹೇಳಿದರು.  

ಉಪನ್ಯಾಸಕರಾಗಿ ಆಗಮಿಸಿದ್ದ ಡಾ. ಸಿದ್ಧವೀರ ಮಹಾಸ್ವಾಮಿಗಳು ಗುರುಸಿದ್ದಯ್ಯ ಹಿರೇಮಠ ಮಾತನಾಡಿ, ಶ್ರೀ ದ್ಯಾಮವ್ವ ಹಾಗೂ ಶ್ರೀ ದುರ್ಗಮ್ಮ ದೇವಿಯರ ಹರಿಜಾತ್ರಾ ಮಹೋತ್ಸವ ಭಕ್ತರು ಹರಕೆ ತೀರಿಸುವ ಪವಿತ್ರ ದಿನವಾಗಿದೆ. ರಕ್ತಬೀಜಾಸುರನ ಸಂಹಾರ ಮಾಡಿ ಶ್ರೀದೇವಿ ಜಗಜ್ಜನನಿಯಾಗಿ ಹೊರಹೊಮ್ಮಿದ ಕಥೆಯನ್ನು ವಿವರಿಸಿದರು.  

ಮನುಷ್ಯನ ಬದುಕಿನಲ್ಲಿ ಮೂರು ರೀತಿಯ ಸುಖಗಳನ್ನು ಕಾಣಬಹುದು. ದೇವಸ್ಥಾನದಲ್ಲಿ ದರ್ಶನದ ಬಳಿಕ ನೀಡುವ ಬಾಳೆಹಣ್ಣಿನ ಸಿಪ್ಪೆ ತೆಗೆದು ತಿನ್ನುವುದರಿಂದ ಒಳಗಿನ ಸುಖ, ಜಾತ್ರೆಯಲ್ಲಿ ಪ್ರಸಾದ ಪಡೆದು ಸೇವಿಸುವುದರಿಂದ ಹೊರಗಿನ ಸುಖ ಹಾಗೂ ಮಠಗಳಲ್ಲಿ ಮಠಾಧೀಶರಿಂದ ಆಶೀರ್ವಾದ ಪಡೆದು ಕಲ್ಲುಸಕ್ಕರೆ ಸ್ವೀಕರಿಸುವುದರಿಂದ ಪರಿಪೂರ್ಣ ಸುಖ ದೊರೆಯುತ್ತದೆ ಎಂದು ಅವರು ಹೇಳಿದರು.  

ಕಾರ್ಯಕ್ರಮದಲ್ಲಿ ಗದುಗಿನ ಆಧ್ಯಾತ್ಮಿಕ ವಿದ್ಯಾಶ್ರಮದ ಪೂಜ್ಯ ಶಿವಶರಣೆ ನೀಲಮ್ಮತಾಯಿ ಅಸುಂಡಿ, ಟ್ರಸ್ಟ್‌ ಕಮಿಟಿ ಅಧ್ಯಕ್ಷ ಕೊಟ್ರ​‍್ಪ ಕಮತರ, ಜಾತ್ರಾ ಕಮಿಟಿ ಕಾರ್ಯಾಧ್ಯಕ್ಷ ಫಕೀರ​‍್ಪ ಹೆಬಸೂರ, ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನೀಲಮ್ಮ ಬೋಳನವರ, ‘ಕಿತ್ತೂರು ಕರ್ನಾಟಕ’ ದಿನಪತ್ರಿಕೆ ಸಂಪಾದಕ ಮಂಜುನಾಥ ಅಬ್ಬಿಗೇರಿ, ಎಸ್‌ಎಸ್ಕೆ ಸಮಾಜದ ಮುಖಂಡ ಕಿಶನ ಮೆಹರವಾಡೆ, ನಗರಸಭೆ ಸದಸ್ಯೆ ಲಕ್ಷ್ಮಿ ಸಿದ್ದಮ್ಮನಹಳ್ಳಿ, ಮಾಧೂಸಾ ಮೆಹರವಾಡೆ, ಶಕುಂತಲಾ ಅಕ್ಕಿ, ಲಕ್ಷ್ಮಿ ಕಾಕಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.  

ಗೀತಾಂಜಲಿ ಗೌಡರ ಪ್ರಾರ್ಥಿಸಿದರು. ಬಾಹುಬಲಿ ಜೈನರ ಕಾರ್ಯಕ್ರಮ ನಿರೂಪಿಸಿದರು. ಪಂಚಾಕ್ಷರಿ ಅಂಗಡಿ ವಂದಿಸಿದರು. ಬಳಿಕ ಮಂಡ್ಯ ಹಾಗೂ ಮೈಸೂರಿನ ಸವಿತಾ ಪೂಜಾ ಕುಣಿತ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.