ಸೌಹಾರ್ದತೆ ಸಾರುವ ಹಜರತ್ ಬಾಬಾ ಬುಡನ್ ಶಾವಲಿ ಉರುಸು

Hazrat Baba Budan Shawali Urus, a symbol of harmony

ಈರಣ್ಣಾ ಹುಲ್ಲೂರ ಯರಗಟ್ಟಿ 

ಯರಗಟ್ಟಿ, 17 : ಮತೀಯ ಭಾವನೆ ಹೋಗಲಾಡಿಸಿ ಬ್ರಾತೃತ್ವದ ಮಧುರ ಬಾಂಧವ್ಯದ ಬೆಸುಗೆಯನ್ನು ಗಟ್ಟಿಗೊಳಿಸುವ ಅಪರೂಪದ ತಾಣಗಳಲ್ಲಿ ಒಂದಾದ ಪಟ್ಟಣದ ಮಧ್ಯದಲ್ಲಿ ಇರುವ ಹಜರತ್ ಬಾಬಾ ಬುಡನ್ ಶಾವಲಿ ಅವರ ಉರುಸು ಸೌಹಾರ್ದತೆಗೆ ಸಾಕ್ಷಿಯಾಗಿದೆ. 

ಯರಗಟ್ಟಿ ತಾಲೂಕಿನಾದ್ಯಂತ ಹತ್ತು ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಅಲ್ಲದೇ ಬ್ರಾತೃತ್ವದ ಕೇಂದ್ರ ಸ್ಥಳವಾಗಿದೆ. ಈ ಪುಣ್ಯ ಭೂಮಿಯಲ್ಲಿ ಆಡಳಿತ ನಡೆಸಿದ ಮರಾಠ ಸಾಮಂತರು ಸರ್ವ ಧರ್ಮಿಯರೂ, ಒಟ್ಟಾಗಿ ಬದುಕು ನಡೆಯಬೇಕೆನ್ನುವ ಉದ್ದೇಶದಿಂದ ಮಠ, ಮಂದಿರ ಮಸೀದಿ, ಬಾವಿಗಳನ್ನು ನಿರ್ಮಿಸಿದ್ದರು. 

ಅಂತೆಯೇ ಪಟ್ಟಣದ ಮಧ್ಯದಲ್ಲಿ ಹಿಂದು ಮತ್ತು ಮುಸ್ಲಿಮ್ ದೇವಾಲಯ ನಿರ್ಮಾಣ ಮಾಡುವ ಮೂಲಕ ಭಾವೈಕ್ಯಕ್ಕೆ ಮುನ್ನುಡಿ ಬರೆದಿದ್ದಾರೆ. ಉರುಸು ಎಂಬುದು ಸಾಧುಗಳ ಪುಣ್ಯತಿಥಿ, ಹೀಗಾಗಿ ಜಾತ್ರೆಯಂತೆ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಲಾಗುವುದು. ಪ್ರಸ್ತುತ ದಿನಗಳಲ್ಲಿ ಜಾತೀಯತೆಯ ವಾದ ಪ್ರತಿವಾದಗಳ ಮಧ್ಯೆಯೇ ಪಟ್ಟಣದಲ್ಲಿ ನಡೆಯುವ ಬಾಬಾ ಬುಡನ್ ಶಾವಲಿ ಉರುಸು ವಿಶೇಷತೆಗಳಿಗೆ ಕಾರಣವಾಗಿದೆ. ಇಲ್ಲಿ ಹಿಂದೂ-ಮುಸ್ಲಿಮರು ಭೇಟಿ ನೀಡಿ ಶರಣರ ಸಮಾಧಿ ಸ್ಥಳಕ್ಕೆ ಭಕ್ತಿ ಭಾವದಿಂದ ಪೂಜೆ ಸಲ್ಲಿಸುತ್ತಾರೆ. 

ದರ್ಗಾಕ್ಕೆ ಪ್ರತಿ ಗುರುವಾರ ಮತ್ತು ಅಮವಾಸೆ ದಿನದಂದು ಭಕ್ತರು ಇಷ್ಟಾರ್ಥ ಸಿದ್ದಿಗಾಗಿ ಹರಕೆ, ಪೂಜೆ ಸಲ್ಲಿಸುತ್ತಾರೆ. ಸೂಫಿ ಪಂಥದವರಾದ ಹಜರತ್ ಬಾಬಾ ಬುಡನ್ ಶಾವಲಿ ಅವರು ಹಲವು ದಶಕಗಳ ಹಿಂದೆ ಪಟ್ಟಣಕ್ಕೆ ಭೇಟಿ ನೀಡಿದ್ದರು. ಧರ್ಮ ಪ್ರಚಾರಕ್ಕಿಂತ ಸೌಹಾರ್ದತೆ, ಸಹಬಾಳ್ವೆಗೆ ಒತ್ತು ನೀಡಿ, ಸತ್ಯ ನಿಷ್ಠೆಗೆ ಹೆಸರಾಗಿ ಸಮಾನತೆಯ ಸಂದೇಶ ಸಾರಿದ್ದಾರೆ ಎಂಬುದು ಇತಿಹಾಸ ಪ್ರತೀತ. 

ಹಜರತ್ ಬಾಬಾ ಬುಡನ್ ಶಾವಲಿ ಅವರು, ಈ ಭಾಗದ ಹಳ್ಳಿಗಳಲ್ಲಿ ಭಾವೈಕ್ಯತೆಯ ಸಂದೇಶ ಪಸರಿಸಿದ ಕೀರ್ತಿ ಅವರದ್ದಾಗಿದೆ. ನಂತರ ಅವರು ಯರಗಟ್ಟಿ ಪಟ್ಟಣದ ಮಧ್ಯದಲ್ಲಿ ನೆಲೆ ನಿಂತರು. ಅವರ ಕಾಲಾ ನಂತರ ಅಲ್ಲಿಯೇ ಅವರ ಗದ್ದುಗೆ ಸ್ಥಾಪಿಸಲಾಯಿತು. ಅಂದಿನಿಂದ ಇಲ್ಲಿಯವರೆಗೂ ಸರ್ವ ಸಮುದಾಯ ಜನರು ಉರುಸು ದಿನದಂದು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. 

ಉರುಸು ಆಚರಣೆ : ಐತಿಹಾಸಿಕ ಹಿನ್ನೆಲೆ ಹೊಂದಿರುವ ಬೆಟ್ಟದ ಮೇಲಿನ ಮೆಹಬೂಬ್ ಸುಬ್ಬಾನಿ ಅವರ ಭಾವೈಕ್ಯತಾ ಉರುಸು ಕಾರ್ಯಕ್ರಮ ಈಗಾಲೇ ಪ್ರಾರಂಭವಾಗಿದೆ. ಜೂ 18 ರಂದು ಭಾವೈಕ್ಯತಾ ಉರುಸು, ಜೂ. 19 ರಂದು ಜಿಯಾರತ್ ನಡೆಯಲಿದೆ. ಇಲ್ಲಿ ಯಾವುದೇ ಜಾತಿ ಮತ್ತು ಧರ್ಮಕ್ಕೆ ಸೀಮಿತವಾಗದೆ ಎಲ್ಲ ಜನಾಂಗ ಮತ್ತು ಧರ್ಮಿಯರು ಒಟ್ಟುಗೂಡಿ ಹತ್ತಾರು ದಶಕದಿಂದ ಉರುಸು ಆಚರಿಸುತ್ತಿದ್ದಾರೆ. ಸರ್ವ ಜನಾಂಗದ ಶಾಂತಿಯ ತೋಟದಂತಿರುವ ಯರಗಟ್ಟಿಯಲ್ಲಿ ಎಲ್ಲ ಧರ್ಮಿಯರು ಭಾವ್ಯಕ್ಯತೆಯಿಂದ ಜಾತ್ರೆಗಳು, ಉರುಸುಗಳನ್ನು ಆಚರಿಸುತ್ತಾ ಬರಲಾಗಿದೆ. ಅಂತೆಯೇ ಯರಗಟ್ಟಿಯ ಮಧ್ಯಭಾಗದಲ್ಲಿ ರುವ ಹಜರತ್ ಬಾಬಾ ಬುಡನ್ ಶಾವಲಿ ಅವರ ಉರುಸು ಸೌಹಾರ್ದತೆ ಪ್ರತೀಕವಾಗಿದೆ.