ಗೇಮ್ಸ್‌ - ಗ್ರೌಂಡ್ ನಾಲೆಡ್ಜ್‌ ಮಕ್ಕಳಿಗೆ ಕೊಡಿ: ಎಂ.ವಿ.ಹಿರೇಮಠ

ಬಸವನ ಬಾಗೇವಾಡಿ 22: ಇಂದಿನ ಸ್ಪರ್ಧಾತ್ಮಕ ಯುಗದ ಆಟೋಟಗಳ್ಲಿ ಶಾಲಾ ಮಕ್ಕಳನ್ನು ಸಕ್ರಿಯವಾಗಿ ಭಾಗವಹಿಸುವಂತೆ ದೈಹಿಕ ಶಿಕ್ಷಕರು ನೋಡಿಕೊಳ್ಳಬೇಕು. ಹಾಗೆಯೇ ಗೇಮ್ಸ್‌ ಹಾಗು ಗ್ರೌಂಡ್ ನಾಲೆಡ್ಜ್‌   ತಿಳಿಸಿಕೊಟ್ಟು ಮಕ್ಕಳಲ್ಲಿ ಕ್ರೀಡಾ ಮೋಹ ಬೆಳೆಸಿ ಎಂದು  ಡೈಯಟ್ ಉಪನ್ಯಾಸ ಎಂ.ವಿ.ಹಿರೇಮಠ ಹೇಳಿದರು. 

        ತಾಲೂಕಿನ ಬೈರವಾಡಗಿ ಜಿ.ಎಚ್‌.ಪಾಟೀಲ ಸರಕಾರಿ ಪ್ರೌಢಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಸಮನ್ವಯಾಧಿಕಾರಿಗಳ ಕಾರ್ಯಾಲಯ ಬಸವನ ಬಾಗೇವಾಡಿ ಇವರ ಸಂಯುಕ್ತಾಶ್ರಯದಲ್ಲಿ  ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ದೈಹಿಕ ಶಿಕ್ಷಣ ಶಿಕ್ಷಕರ ಒಂದು ದಿನದ ವಿಷಯ ವೇದಿಕೆ ಕಾರ್ಯಾಗಾರ ಉದ್ಘಾಟಿಸಿ  ಮಾತನಾಡಿದರು. 

    ವಿವಿಧ ಆಟಗಳ ಬಗ್ಗೆ ಹಾಗು ಮೈದಾನದ ಕುರಿತು ಶಾಲಾ ಮಕ್ಕಳಲ್ಲಿ ಮೊದಲು ಸಮಗ್ರ ಪರಿಕಲ್ಪನೆ ಮೂಡಿಸಬೇಕು. ಸುಮ್ಮನೇ ಆಟೋಟಗಳಲ್ಲಿ ಮಕ್ಕಳನ್ನು ತೊಡಗಿಸದಿರಿ. ಎಲ್ಲ ಹೊಸ ಹೊಸ ಗೇಮ್ಸ್‌ ಗಳ ಆಟವಾಡುವ ವಿಧಾನ,ಸ್ಪಷ್ಟ ಚಿತ್ರಣ ಮಕ್ಕಳಿಗೆ ಮನವರಿಕೆ ಮಾಡಿಕೊಟ್ಟರೆ ಪರಿಣಾಮಕಾರಿಯಾಗಿ ಅವರು ಆಟ ಆಡಬಲ್ಲರು ಎಂದರು. 

           ದೈಹಿಕ ಶ್ರಮದ ಕ್ರೀಡೆಗಳಿಂದ ಮಾನಸಿಕ ಆರೋಗ್ಯ ಬಲ ಹೆಚ್ಚಾಗುವುದು. ಸದೃಢ ದೇಹದಿಂದ ಬಲಿಷ್ಠ ಆಟ   ಕಾಣಲು ಸಾಧ್ಯ. ಆ ನಿಟ್ಟಿನಲ್ಲಿ ಮಕ್ಕಳಿಗೆ ಪ್ರೇರೇಪಿಸಿ. ಸಣ್ಣ ದೇಹದಲ್ಲಿ ಸಣ್ಣ ಮನಸ್ಸು ಇರದ ಹಾಗೆ ನೋಡಿಕೊಳ್ಳಬೇಕು ಎಂದರು. 

      ಜೀವನದಲ್ಲಿ ಪರಿವರ್ತನೆಗೆ ಶಿಕ್ಷಣ ಹಾಗು ಆಟಗಳು ಮಹತ್ವದ ಪಾತ್ರ ವಹಿಸುತ್ತವೆ. ಒಳ್ಳೆಯ ವಿದ್ಯೆಗೆ ಶಿಕ್ಷಕರ ಮಾರ್ಗದರ್ಶನ ಬಲು ಮುಖ್ಯ. ಮಕ್ಕಳನ್ನು ಕ್ರೀಡಾ ರಂಗದಲ್ಲಿ ಉನ್ನತಿ ಕಾಣುವಂತೆ ಬೆಳೆಸಬೇಕು. ತಮ್ಮ ಕೈಯಲ್ಲಿ ಮಕ್ಕಳು ಕ್ರೀಡಾ ಸಾಧನೆ ಮೆರೆಯುವಂತೆ ಹುರಿದುಂಬಿಸಿ  ಆತ್ಮಗೌರವದ ಹೆಮ್ಮೆ ಪಡೆದುಕೊಳ್ಳಬೇಕು. ಕ್ರೀಡೆಗೆ ಬೆಲೆ ಹಾಗು ಗೌರವ ಬಹಳಷ್ಟು ವಿಶೇಷವಾಗಿದೆ. ಈ ರಂಗದಲ್ಲಿ ಮಿಂಚಿದರೆ ಎಲ್ಲ ದೃಷ್ಟಿಯಿಂದ ಕ್ರೀಡಾಪಟುಗಳು ಧನ್ಯರು. ವೈಯುಕ್ತಿಕ ಆಟಗಳಲ್ಲಿ ಸಾಧನೆ ಗೈದರೆ ಜಗವೇ ತಮ್ಮತ್ತ ನೋಡುತ್ತದೆ. ನಿಜಕ್ಕೂ ಕ್ರೀಡೆಗಳಿಗೆ ದೊರೆಯುವ ಗೌರವ ಬೇರಲ್ಲೂ ಸಿಗದು ಎಂದರು. ಶಾಲಾ ಶಿಸ್ತಿಗೆ ದೈಹಿಕ ಶಿಕ್ಷಕರ ಕೊಡುಗೆ ಬಹುಪಾಲ. ಮಕ್ಕಳ ಪ್ರೀತಿಪಾತ್ರ ಈ ಶಿಕ್ಷಕರು ವೃತ್ತಿ ಕಾಯಕ ಬದ್ದತೆಯಿಂದ ನಿರ್ವಹಿಸಬೇಕು ಎಂದರು. 

      ಸಂಪನ್ಮೂಲ ವ್ಯಕ್ತಿ ಆರ್‌.ಆರ್‌.ಕುಲಕರ್ಣಿ ಮಾತನಾಡಿ, ಕ್ರೀಡಾ ಚಟುವಟಿಕೆಯಲ್ಲಿ ತೊಡಗುವ ದೈಹಿಕ ಶಿಕ್ಷಕರು ಕಡ್ಡಾಯ ಬಿಳಿ ಸಮವಸ್ತ್ರ ಧರಿಸಬೇಕು. ಕ್ರೀಡಾಕೂಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಮುಂದಾಗಬೇಕು. ದೂರುಳಿದರೆ  ಜೀವನದಲ್ಲೂ ದೂರ ಉಳಿಯುವಿರಿ. ಮೇಲ್ಮಟ್ಟಕ್ಕೆ  ಹೋಗುವ ಭಾವ ಹೊಂದಬೇಕು ಎಂದರು. 

      ಕ್ರೀಡಾ ನಿಯಮಗಳನ್ನು  ಅರಿತು ಮಕ್ಕಳನ್ನು ಆಡಿಸಿ. ಕೂಟಗಳಲ್ಲಿ ಭಾಗವಹಿಸುವುದರಿಂದ ಆಟೋಟಗಳ ಆಡಿಸುವ ವಿಶೇಷ ಜ್ಞಾನ ವೃದ್ಧಿಯಾಗುತ್ತದೆ. ಮಕ್ಕಳಿಗೆ ಆಡಿಸುವದರ ಜೊತೆಗೆ ಮೈದಾನ ಮಾರ್ಕಿಂಗ್ ಹೇಗೆ ಮಾಡಲಾಗುತ್ತದೆ ಎಂಬುದನ್ನು ತಿಳಿಸಿಕೊಡಬೇಕು ಎಂದರು. 

    ಗ್ರಾಮೀಣ ಪ್ರದೇಶಗಳಲ್ಲಿ ಕ್ರೀಡಾಪಟುಗಳನ್ನು ತಯಾರಿಸುವುದು ಅಷ್ಟೊಂದು ಸುಲಭವಲ್ಲ. ಆದರೂ ಕ್ರೀಡಾಸಕ್ತಿ ಮೂಡಿಸಿ ಮಕ್ಕಳು ಮಿನುಗುವಂತೆ ಮಾಡುವುದೇ ದೈಹಿಕ ಶಿಕ್ಷಕರ ವೃತ್ತಿ ಸಾಧನೆ ಎಂದರು.  

ಮುಖ್ಯ ಅತಿಥಿಗಳಾಗಿ ಸಾತಿಹಾಳ ಗ್ರಾಪಂ ಅಧ್ಯಕ್ಷ ಅಬ್ದುಲ್ ಬಳಗಾನೂರ, ಎಸ್‌.ಡಿ.ಎಂ.ಸಿ.ಅಧ್ಯಕ್ಷ ಪ್ರಕಾಶ ಅವರಾದಿ, ದೈಹಿಕ ಶಿಕ್ಷಣಾಧಿಕಾರಿ ಎಸ್‌.ಎಸ್‌.ಅವಟಿ, ಪ್ರಾ.ಪಿ.ಬಿ.ಪಾಟೀಲ, ದೈಹಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಿ.ಎಂ.ಪಾಟೀಲ, ರಾಜ್ಯ ಕಾರ್ಯದರ್ಶಿ ಬಿ.ಎಸ್‌.ಶೀಲವಂತ, ಕೆ.ಇ.ಚವ್ಹಾಣ ಇತರರಿದ್ದರು. ದೈಹಿಕ ಶಿಕ್ಷಕ ಶಿವಕುಮಾರ ಕಲ್ಲೂರ,ಸ್ವಾಗತಿಸಿದರು,ಕೆ.ವಿ.ಬಡಿಗೇರ ನಿರೂಪಿಸಿದರು, ಎಸ್‌.ಎಲ್‌. ಕೊಡೆಕಲ್ ವಂದಿಸಿದರು. 

   ಇದೇ ಸಂದರ್ಭದಲ್ಲಿ  ವಾಲಿಬಾಲ್, ಥ್ರೋ ಬಾಲ ಸೇರಿದಂತೆ ಹಲ ಆಟಗಳ ಡೇಮೋ ಮಕ್ಕಳೇ ನಡೆಸಿಕೊಟ್ಡಿದ್ದು ವಿಶೇಷವಾಗಿತ್ತು.