ಆದರ್ಶ ಮೌಲ್ಯಗಳಿಗೆ ರೈತರೇ ಪ್ರತಿರೂಪ: ಅನಿಲ ಮೆಣಸಿನಕಾಯಿ

ಆದರ್ಶ ಮೌಲ್ಯಗಳಿಗೆ ರೈತರೇ ಪ್ರತಿರೂಪ: ಅನಿಲ ಮೆಣಸಿನಕಾಯಿ Farmers are the embodiment of ideal values: Anil Menasinakai

ಲೋಕದರ್ಶನ ವರದಿ 

ಆದರ್ಶ ಮೌಲ್ಯಗಳಿಗೆ ರೈತರೇ ಪ್ರತಿರೂಪ: ಅನಿಲ ಮೆಣಸಿನಕಾಯಿ 


ಗದಗ  12: ಧಾರ್ಮಿಕ ಕಾರ್ಯಕ್ರಮದಲ್ಲಿ ರಾಜಕಾರಣಿಗಳು ಭಾಗವಹಿಸಿದರೆ ರಾಜಕೀಯದಲ್ಲೂ ನ್ಯಾಯ, ನೀತಿ, ಧರ್ಮ ಅನುಸರಿಸಲು ಸಾಧ್ಯ ಎಂದು ಗದಗ ವಿಧಾನಸಭಾ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಅನಿಲ ಮೆಣಸಿನಕಾಯಿ ಹೇಳಿದರು. 


ತಾಲೂಕಿನ ಹಿರೇಹಂದಿಗೋಳ ಗ್ರಾಮದಲ್ಲಿ ಜರುಗಿದ ಶರಣ ಬಸವೇಶ್ವರ 41 ನೇ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿ, ಬರಗಾಲದಲ್ಲೂ ಪ್ರವಚನ ಕಾರ್ಯಕ್ರಮ ನಡೆಸಿಕೊಂಡು ಬಂದಿರುವುದು ಗಮನಾರ್ಹ. ಎಷ್ಟೇ ಬರಗಾಲ ಇದ್ದರೂ ಧಾರ್ಮಿಕ ಕಾರ್ಯಕ್ರಮಕ್ಕೆ ರೈತರು ಎಂದಿಗೂ ದಾನ ಧರ್ಮದಲ್ಲಿ ಹಿಂದೆ ಬಿಳುವುದಿಲ್ಲ. ಈ ಹಿಂದೆ ಕೋವಿಡ್ ಸಂದರ್ಭದಲ್ಲಿ ಜೋಳಿಗೆ ಕಾರ್ಯಕ್ರಮ ಹಮ್ಮಿಕೊಂಡಾಗ ಹಿರೇಹಂದಿಗೋಳ ಗ್ರಾಮಸ್ಥರು ದವಸ ಧಾನ್ಯಗಳನ್ನು ನೀಡಿ ಹಸಿದವರ ಹೊಟ್ಟೆ ತುಂಬಿಸಿದರು. ಆದರ್ಶ ಮೌಲ್ಯಗಳು ಇಂದಿಗೂ ಇವೆ ಎಂಬುದನ್ನೂ ರೈತರು ತಿಳಿಸಿಕೊಟ್ಟಿದ್ದಾರೆ ಎಂದು ಅನಿಲ ಮೆಣಸಿನಕಾಯಿ ಹೇಳಿದರು. 


ಅಭಿನವ ಭೂದೀಶ್ವರ ಶ್ರೀಗಳು ಮಾತನಾಡಿ, ಬದುಕಿಗೆ ಎಲ್ಲವೂ ಬೇಕು. ಎಲ್ಲವೂ ಬೇಕು ಅಂದಾಗ ಅನ್ಯಾಯ ಮಾರ್ಗದಲ್ಲಿ ಗಳಿಸದೇ ನ್ಯಾಯ ಮಾರ್ಗದಲ್ಲಿ ಸಂಪಾದಿಸಬೇಕು. ಇದರಿಂದ ಆನಂದದಿಂದ ಬದುಕಬಹುದು ಎಂದರು. 


ಸುಖ ಇದ್ದಾಗ ನಮ್ಮನ್ನೆ ನಾವು ಮರೆತು, ದುಃಖ ಬಂದಾಗ ದೇವರನ್ನು ಮಾತ್ರ ನೆನೆಯುತ್ತೇವೆ. ಕಷ್ಟ ಸುಖ ಎಲ್ಲವನ್ನೂ ದೇವರು ಕೊಟ್ಟಿದ್ದಾಗಿದೆ. ಎಲ್ಲ ಕಾಲದಲ್ಲೂ ದೇವರ ಕೃಪೆಗೆ ಪಾತ್ರ ಆಗಬೇಕು. ಅದಕ್ಕಾಗಿ ದೇವರನ್ನು ಅನುಕೂಲಕ್ಕಾಗಿ ಪ್ರೀತಿಸಬಾರದು. ಮನುಷ್ಯ ದೇವನಾಗುವುದಿಲ್ಲ. ಅದರೆ ದೇವರ ಪ್ರೀತಿಗೆ ಪಾತ್ರ ಆಗಬಹುದು. ಮನುಷ್ಯ ಭೂತನಾಗುವತ್ತ ಸಾಗುತ್ತಿದ್ದಾನೆ. ಇದಕ್ಕೆ ಕಲಿಗಾಲವೇ ಉದಾಹರಣೆ ಎಂದು ಶ್ರೀಗಳು ಹೇಳಿದರು. 


ಯುವ ಮುಖಂಡರಾದ ವಸಂತ ಪಡಗದ, ಸಿದ್ದು ಪಲ್ಲೇದ, ಹಿರೇಹಂದಿಗೋಳ ಗ್ರಾಮಸ್ಥರು ಇದ್ದರು.