ಚಿತ್ರಕಲೆ ಮಕ್ಕಳಲ್ಲಿ ಕಲಿಕೆಯ ಆಸಕ್ತಿಯನ್ನು ವೃದ್ಧಿಸುತ್ತದೆ: ಬಂದಿ

ಮೂಡಲಗಿ 29: ‘ಪ್ರತಿ ಶಾಲೆಯಲ್ಲಿ ಶೈಕ್ಷಣಿಕ ಬೆಳವಣಿಗೆಗೆ ಮತ್ತು ಮಕ್ಕಳಲ್ಲಿ ಸೃಜನಶೀಲತೆ ಬೆಳೆಸುವಲ್ಲಿ ಚಿತ್ರಕಲಾ ಶಿಕ್ಷಕರ ಪಾತ್ರ ಮಹತ್ವದಾಗಿದೆ’ ಎಂದು ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ ಹೇಳಿದರು. 

ಇಲ್ಲಿಯಕೆ.ಎಚ್‌.ಸೋನವಾಲಕರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮೂಡಲಗಿ ತಾಲೂಕಾ ಶಾಲಾ ಚಿತ್ರಕಲಾ ಶಿಕ್ಷಕರ ಸಂಘದ ಉದ್ಘಾಟನೆ ಮತ್ತು ಸಂಘದ ಫಲಕ ಅನಾವರಣಗೊಳಿಸಿ ಮಾತನಾಡಿದ ಅವರು ಚಿತ್ರಕಲೆಯಿಂದಾಗಿ ಮಕ್ಕಳಲ್ಲಿ ಕಲಿಕೆಯ ಆಸಕ್ತಿಯನ್ನು ವೃದ್ಧಿಸುತ್ತದೆ ಎಂದರು. 

ಮೂಡಲಗಿ ತಾಲೂಕಾ ಚಿತ್ರಕಲಾ ಶಿಕ್ಷಕರ ಸಂಘವನ್ನು ಸ್ಥಾಪಿಸುವ ಮೂಲಕ ಚಿತ್ರಕಲಾ ಶಿಕ್ಷಕರ ಭದ್ರತೆಯನ್ನು ಸೂಚಿಸುತ್ತದೆ. ಶಾಲೆಗೆ ಒಬ್ಬರು ಇರುವ ಚಿತ್ರಕಲಾ ಶಿಕ್ಷಕರ ಸಂಘಟನೆ ಅವಶ್ಯವಿದೆ. ಸಂಘದ ಸದಸ್ಯರು ತಮ್ಮ ಸಾಧನೆ, ಶ್ರೇಯಸ್ಸನ್ನು ಪರಸ್ಪರ ಗೌರವಿಸುವ ಮೂಲಕ ತಾವು ಬೆಳೆಯುವ ಜೊತೆಗೆ ಸಂಘವನ್ನು ಬೆಳೆಸಬೇಕು ಎಂದರು. 

ಮುಖ್ಯ ಅತಿಥಿಯಾಗಿ ಚಿಕ್ಕೋಡಿ ಡೈಟ್‌ನ ಭಾರತಿ ಸನದಿ ಮಾತನಾಡಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಚಿತ್ರಕಲಾ ಶಿಕ್ಷಕರ ಸಂಘವನ್ನು ಮೂಡಲಗಿಯಲ್ಲಿ ಮೊದಲ ಬಾರಿಗೆ ಸ್ಥಾಪಿಸಿದ್ದು ಇತರೆ ತಾಲೂಕುಗಳಿಗೆ ಮಾದರಿಯಾಗಿದೆ. ಮೂಡಲಗಿ ತಾಲೂಕಿನ ಚಿತ್ರಕಲಾ ಶಿಕ್ಷಕರ ಸಂಘದ ಸದಸ್ಯರ ಕಾರ್ಯವು ಶ್ಲಾಘನೀಯವಾಗಿದೆ ಎಂದರು. 

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಜು ದೇವರುಸಿ ಮಾತನಾಡಿ ಎಲ್ಲಿಯವರೆಗೆ ನಾವು ಸಂಘಟನೆಯಾಗುವುದಿಲ್ಲ ಅಲ್ಲಿಯವರೆಗೆ ನಮ್ಮ ಸಮಸ್ಯೆಗಳಿಗೆ ಪರಿಹಾರ ದೊರೆಯುವುದಿಲ್ಲ. ಮೂಡಲಗಿಯಲ್ಲಿ ಚಿತ್ರಕಲಾ ಶಿಕ್ಷಕರ ಸಂಘವು ಸ್ಥಾಪನೆಯಾಗಿದ್ದು ಉತ್ತಮ ಬೆಳೆವಣಿಗೆಯಾಗಿದೆ ಎಂದರು. 

ಮೂಡಲಗಿ ಚಿತ್ರಕಲಾ ಸಂಘದ ಅಧ್ಯಕ್ಷ ಎನ್‌.ಬಿ. ಕದಮ ಪ್ರಾಸ್ತಾವಿಕ ಮಾತನಾಡಿ ಧ್ಯೇಯೋದ್ಧೇಶಗಳನ್ನು ತಿಳಿಸಿದರು. ಅತಿಥಿಯಾಗಿ ಶಿಕ್ಷಕ ಶಿವಬಸು ಶೆಟ್ಟರ ಭಾಗವಹಿಸಿದ್ದರು.  

ನಿವೃತ್ತ ಚಿತ್ರಕಲಾ ಶಿಕ್ಷಕ ಐ.ಓ. ಕುಂಬಾರ, ಸೌದಿ ಅರೇಬಿಯಾದಲ್ಲಿ ಕಲಾ ಪ್ರದರ್ಶಿಸಿದ ಯಾದವಾಡದ ಎಚ್‌.ಎಸ್‌. ಮಾದರ, ಸಿದ್ರಾಮ್ ಚಿಪ್ಪಲಕಟ್ಟಿ ಹಾಗೂ ಚಿತ್ರಕಲಾ ಪರೀಕ್ಷೆಯಲ್ಲಿ ಸಾಧನೆ ಮಾಡಿರುವ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು. 

ತಾಲೂಕು ವ್ಯಾಪ್ತಿಯ ಎಲ್ಲ ಶಾಲೆಗಳ ಚಿತ್ರಕಲಾ ಶಿಕ್ಷಕರು ಭಾಗವಹಿಸಿದ್ದರು. ಬಿ.ಐ. ಬಡಿಗೇರ ಸ್ವಾಗತಿಸಿದರು, ಬಿ.ಎ. ಬಿರಾದಾರ ನಿರೂಪಿಸಿದರು, ಸುಭಾಷ ಕುರಣೆ ವಂದಿಸಿದರು.