ಡಾ:ಬಿ.ಆರ್‌. ಅಂಬೇಡ್ಕರ್ ಸರ್ವ ಸಮುದಾಯದ ಹಿತರಕ್ಷಕ, ಅವರು ಅಮೂಲ್ಯ ಸಂವಿಧಾನ ನೀಡಿದ ಮಹನೀಯರು: ಸಚಿವ ಸಂತೋಷ ಲಾಡ್

 ಅವರು ಒಂದು ಜಾತಿಗೆ ಸೀಮಿತವಲ್ಲ ;  

ಧಾರವಾಡ.15: ಭಾರತೀಯ ಪ್ರಜಾಪ್ರಭುತ್ವದ ಜೀವಾಳ ನಮ್ಮ ಅಮೂಲ್ಯವಾದ ಸಂವಿಧಾನವಾಗಿದೆ. ಬಡವ, ಹಿಂದುಳಿದ, ಕಾರ್ಮಿಕ, ಮಹಿಳೆ, ಮಕ್ಕಳು ಸೇರಿದಂತೆ ಸರ್ವ ಸಮುದಾಯದ ಹಿತರಕ್ಷಣೆಗೆ ಸಂವಿಧಾನ ರೂಪಿಸಿದ ಡಾ.ಬಿ.ಆರ್‌. ಅಂಬೇಡ್ಕರ್ ಅವರು ಒಂದು ಜಾತಿಗೆ ಸೀಮಿತರಲ್ಲ ; ಅವರು ಸರ್ವ ಜನರ ಹಿತರಕ್ಷಕರು ಎಂದು ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಅವರು ಹೇಳಿದರು. 

ಅವರು ಇಂದು ಬೆಳಿಗ್ಗೆ ಕೆಸಿಡಿ ಆವರಣದ ಸೃಜನಾ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತವಾಗಿ ಆಯೋಜಿಸಿದ್ದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಭಾರತದ ಸಂವಿಧಾನ ಪೀಠಿಕೆಯನ್ನು ಸಾಮೂಹಿಕವಾಗಿ ಓದುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಮಾತನಾಡಿದರು. 

ಸಂವಿಧಾನದ ಅರಿವು ಎಲ್ಲರಿಗೂ ಅಗತ್ಯವಾಗಿದೆ. ಪ್ರತಿಯೊಬ್ಬರಿಗೂ ಸಮಾನತೆ, ಸೌಹಾರ್ದತೆ, ಭ್ರಾತೃತ್ವ, ಶಾಂತಿ, ನೆಮ್ಮದಿ ದೊರಕಲು ಸಂವಿಧಾನ ನೀಡಿರುವ ಅವಕಾಶಗಳು ಕಾರಣವಾಗಿವೆ ಎಂದು ಅವರು ಹೇಳಿದರು. 

ಕೆಲವು ಅನ್ಯ ಹಿತಾಸಕ್ತಿಗಳು ಸಂವಿಧಾನವನ್ನು ವಿರೋಧಿಸುತ್ತಿವೆ. ಸಂವಿಧಾನ ವಿರೋಧಿಗಳನ್ನು ಪ್ರತಿಯೊಬ್ಬರು ವಿರೋಧಿಸಬೇಕು. ಸಂವಿಧಾನದ ಪಾವಿತ್ರ್ಯತೆ, ಪ್ರಾಮುಖ್ಯತೆ ಕಾಪಾಡುವುದು ಪ್ರತಿಯೊಬ್ಬ ಭಾರತೀಯನ ಗುರುತರ ಜವಾಬ್ದಾರಿಯಾಗಿದೆ ಎಂದು ಸಚಿವರು ತಿಳಿಸಿದರು. 

ಡಾ.ಬಿ.ಆರ್‌. ಅಂಬೇಡ್ಕರ್ ಅವರು ವಿವಿಧ ಸಮುದಾಯ, ವೃತ್ತಿಗುಂಪು, ಹಿಂದುಳಿದವರು, ಮಹಿಳೆಯರು, ಮಕ್ಕಳು, ಕಾರ್ಮಿಕರು ಸೇರಿದಂತೆ ಎಲ್ಲರಿಗೂ ಘನತೆಯ ಬದುಕು ಬದುಕಲು ಅವಶ್ಯವಿರುವ ಅವಕಾಶಗಳನ್ನು ಮೂಲಭೂತ ಹಕ್ಕುಗಳ ಸ್ವರೂಪದಲ್ಲಿ ಸಂವಿಧಾನದಲ್ಲಿ ಅಳವಡಿಸಿದ್ದಾರೆ. ಎಲ್ಲ ಧರ್ಮಿಯರು ಒಂದಾಗಿ ಬಾಳಬೇಕು ಎಂಬುದು ಡಾ.ಬಿ.ಆರ್‌. ಅಂಬೇಡ್ಕರ ಅವರ ಆಶಯ ಮತ್ತು ಗುರಿ ಆಗಿತ್ತು ಎಂದು ಸಚಿವ ಸಂತೋಷ ಲಾಡ್ ಹೇಳಿದರು. 

ಸಂವಿಧಾನದ ಪೀಠಿಕೆಯು ಸಂವಿಧಾನದ ತಿರುಳಾಗಿದೆ. ಸಮಗ್ರ ಅಭಿವೃದ್ಧಿಯ ಎಲ್ಲ ಆಶಯಗಳನ್ನು ಅದು ಒಳಗೊಂಡಿದೆ. ಇಂದಿನ ಯುವಜನತೆ ಸಂವಿಧಾನವನ್ನು ಓದಬೇಕು. ಡಾ. ಬಿ.ಆರ್‌. ಅಂಬೇಡ್ಕರ್ ಅವರಂತಹ ವಿವಿಧ ಮಹನೀಯರ ಸಾಮಾಜಿಕ ಚಿಂತನೆ, ಕೊಡುಗೆಗಳನ್ನು ತಿಳಿದು, ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅಂದಾಗ ಸಂವಿಧಾನದ ಸಾರ್ಥಕತೆ ಮೂಡುತ್ತದೆ ಎಂದು ಸಚಿವರು ತಿಳಿಸಿದರು. 

ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ವಿಧಾನಸೌಧ ಮುಂಭಾಗದಲ್ಲಿನ ವೇದಿಕೆಯಿಂದ ರಾಜ್ಯದ ಜನತೆಗೆ ಭಾರತೀಯ ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು. 

ಇದರ ನೇರ ವೀಕ್ಷಣೆ ಮೂಲಕ ಸಚಿವರು ಆದಿಯಾಗಿ ಎಲ್ಲರೂ ಭಾಗವಹಿಸಿ ಸಂವಿಧಾನ ಪೀಠಿಕೆಯ ಪ್ರತಿಜ್ಞೆ ಸ್ವೀಕರಿಸಿದರು. ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಂಸದ ಐ.ಜಿ. ಸನದಿ, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಕೆ., ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರು ಸೇರಿದಂತೆ ವಿವಿಧ ಮುಖಂಡರು ವೇದಿಕೆಯಲ್ಲಿದ್ದರು.  

ಸಮಾಜ ಕಲ್ಯಾಣ ಇಲಾಖೆಯ ಅಪರ ನಿರ್ದೇಶಕ ಅಲ್ಲಾ ಬಕಾಷ್ ನದಾಫ್ ಅವರು ಕಾರ್ಯಕ್ರಮದಲ್ಲಿ ಸ್ವಾಗತಿಸಿ, ವಂದಿಸಿದರು. 

ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್‌.ಎಸ್‌. ಕೆಳದಿಮಠ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಕಿರಣಕುಮಾರ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಕೆ.ಸಿ. ಬದ್ರಣ್ಣವರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸರೋಜಾ ಹಳಕಟ್ಟಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು, ದಲಿತ ಸಂಘಟನೆಗಳ ಮುಖಂಡರು, ಪ್ರಾಧ್ಯಾಪಕರು, ಸಾರ್ವಜನಿಕರು ಭಾಗವಹಿಸಿದ್ದರು.