ಅನಂತಶಯನಗುಡಿ ರೈಲ್ವೆ ಮೇಲ್‌ಸೇತುವೆ ಕಾಮಗಾರಿ ಪೂರ್ಣಗೊಳಿಸಲು ಆಗ್ರಹ

ಹೊಸಪೇಟೆ 06: ಹೊರವಲಯದ ಅನಂತಶಯನಗುಡಿ ರೈಲ್ವೆ ಮೇಲ್‌ಸೇತುವೆ, ಎಲ್‌.ಸಿ.ಗೇಟ್ ನಂ: 85, ಅರ್ಧಕ್ಕೆ ನಿಂತಿರುವ ಕಾಮಗಾರಿ ಕೂಡಲೇ ಪೂರ್ಣಗೊಳಿಸಬೇಕೆಂದು ಆಗ್ರಹಿಸಿ ಇಂದು ವಿಜಯನಗರ ರೈಲ್ವೇ ಹೋರಾಟ ಕ್ರಿಯಾಸಮಿತಿ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.  

ಈ ಸಂದರ್ಭದಲ್ಲಿ ಕ್ರಿಯಾ ಸಮಿತಿ ಅಧ್ಯಕ್ಷ ವೈ.ಯಮುನೇಶ್ ಮಾತನಾಡಿ ಮೇಲ್‌ಸೇತುವೆ ನಿರ್ಮಾಣಕ್ಕೆ 27.02.2023ರಲ್ಲಿಯೇ ಶಂಕುಸ್ಥಾಪನೆ ಮಾಡಿದ್ದು, ಆರಂಭದಲ್ಲಿ 2-3 ತಿಂಗಳ ಕಾಮಗಾರಿಯ ನಂತರ, ಕಳೆದ 9 ತಿಂಗಳಿಂದ ನಿರ್ಮಾಣ ಕಾರ್ಯ ಸ್ಥಗಿತಗೊಂಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಯೋಜನೆಗೆ ಅಗತ್ಯವಾದ ಅನುದಾನವು ಕಳೆದ ವರ್ಷದಲ್ಲಿಯೇ ಬಿಡುಗಡೆಯಾಗಿದೆ. ಅಲ್ಲದೇ ದಿ. 01.02.2024 ರಂದು ಮಂಡಿಸಿದ ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್‌ನಲ್ಲಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಹೆಚ್ಚುವರಿಯಾಗಿ 7.5 ಕೋಟಿ ಹಂಚಿಕೆ ಮಾಡಲಾಗಿದೆ. ಮೇಲ್ ಸೇತುವೆ ನಿರ್ಮಾಣಕ್ಕೆ ಅಗತ್ಯವಾದ ಅನುದಾನ ಇದ್ದರೂ ಕಾಮಗಾರಿ ವಿಳಂಬಕ್ಕೆ ನಾಗರೀಕರು ತೀವ್ರ ಬೇಸರ ವ್ಯಕ್ತಪಡಿಸುತ್ತಿದ್ದಾರೆ. 

ಹೊಸಪೇಟೆಯು ಜಿಲ್ಲಾಕೇಂದ್ರ ಹಾಗೂ ಅಂತರ್‌ರಾಷ್ಟ್ರೀಯಾ ಪ್ರವಾಸಿ ತಾಣವಾಗಿದ್ದು, ವಿಶ್ವ ಪಾರಂಪರಿಕ ತಾಣ ಹಂಪಿ ಹಾಗೂ ಆಂಜನೇಯನ ಜನ್ಮಸ್ಥಳ ಅಂಜನಾದ್ರಿ ನೋಡಲು ದೇಶವಿದೇಶಗಳಿಂದ ಪ್ರತಿನಿತ್ಯ ಆಗಮಿಸುವ ಅಸಂಖ್ಯಾತ ಪ್ರವಾಸಿಗರು ಈ ಮಾರ್ಗದ ರೈಲ್ವೆ ಗೇಟಿನ ಮೂಲಕ ಹಾದು ಹೋಗುತ್ತಾರೆ. ಆದರೆ ಪ್ಯಾಸೆಂಜರ್ ಹಾಗೂ ಗೂಡ್ಸ್‌ಗಾಡಿಗಳ ನಿರಂತರ ಸಂಚಾರದಿಂದ ದಿನದ ಬಹುಪಾಲು ಅವಧಿಯಲ್ಲಿ ರೈಲ್ವೆ ಗೇಟ್ ಮುಚ್ಚುವುದರಿಂದ ಸಕಾಲದಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಅಲ್ಲದೇ ಈ ರೈಲ್ವೆ ಮಾರ್ಗವು ಶಿವಮೊಗ್ಗ - ರಾಯಚೂರು ರಾಜ್ಯ ಹೆದ್ದಾರಿಯಲ್ಲಿದ್ದು, ಪ್ರತಿನಿತ್ಯ ಸಾವಿರಾರು ವಾಹನಗಳು ಈ ರೈಲ್ವೆಗೇಟ್ ಮೂಲಕ ಸಂಚರಿಸುತ್ತವೆ. ರೈಲ್ವೆ ಗೇಟಿನ ಪೂರ್ವದಿಕ್ಕಿನಲ್ಲಿರುವ ಮಲಪನಗುಡಿ, ಕಮಲಾಪುರ, ಗಾಳೆಮ್ಮನಗುಡಿ, ಕಡ್ಡಿರಾಂಪುರ, ಮುಂತಾದ ಗ್ರಾಮಗಳಿಂದ ತ್ವರಿತ ವೈಧ್ಯಕೀಯ ಚಿಕಿತ್ಸೆಗೆ ಹೊಸಪೇಟೆಗೆ ಆಗಮಿಸುವ ಗ್ರಾಮಸ್ಥರು ರೈಲ್ವೆ ಗೇಟ್ ಬಂದ್ ಸಂದರ್ಭದಲ್ಲಿ ಸಕಾಲದಲ್ಲಿ ಆಸ್ಪತ್ರೆಗೆ ತೆರಳದೆ ಚಿಕಿತ್ಸೆ ದೊರೆಯದೆ ಅನೇಕರು ಸಾವಿನಪ್ಪಿದ ನಿದರ್ಶನಗಳಿವೆ. ವಿದ್ಯಾರ್ಥಿಗಳು ಶಾಲಾ ಕಾಲೇಜ್‌ಗೆ ಸಕಾಲದಲ್ಲಿ ತೆರಳಲು, ರೈತರು, ಕೃಷಿ ಕಾರ್ಮಿಕರು, ಸಕಾಲದಲ್ಲಿ ಹೊಲಗದ್ದೆಗಳಿಗೆ ತೆರಳಲು ತೊಂದರೆ ಆಗುತ್ತದೆ. ಆದುದರಿಂದ ಜಿಲ್ಲಾಧಿಕಾರಿಗಳು ಕೂಡಲೇ ಮಧ್ಯಪ್ರವೇಶಿಸಿ, ಮೇಲ್ ಸೇತುವೆಗೆ ನಿರ್ಮಾಣಕ್ಕೆ ಎದುರಾಗಿರುವ ಅಡೆತಡೆಗಳನ್ನು ನಿವಾರಿಸಿ, ಕಾಮಗಾರಿಯನ್ನು ಪೂರ್ಣಗೊಳಿಸಿ ಸಾರ್ವಜನಿಕರು ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.  

ಈ ಸಂದರ್ಭದಲ್ಲಿ ಕ್ರಿಯಾ ಸಮಿತಿಯ ಅಧ್ಯಕ್ಷರಾದ ವೈ.ಯಮುನೇಶ್, ಕಾರ್ಯದರ್ಶಿ ಮಹೇಶ್‌ಕುಡತಿನಿ, ಪ್ರಭಾಕರ್‌.ಪಿ, ನಜೀರ್‌ಸಾಹೇಬ್, ಹೆಚ್‌.ಮಹೇಶ್, ಆರ್‌.ಟಿ.ಶರಣಗೌಡ, ಹೆಚ್‌.ತಿಪ್ಪೇಸ್ವಾಮಿ,ಎಸ್‌.ಎಸ್‌.ಸಣ್ಣಕಾಸಿ, ಟಿ.ಆರ್‌.ತಿಪ್ಪೇಸ್ವಾಮಿ, ಡಿ.ರಾಮಕೃಷ್ಣ, ಜಗದೀಶ್‌.ಎ.ಎಲ್, ಗೋಪಿನಾಥ, ಡಾಽಽ ಎಂ.ಕೆ.ಲಕ್ಷ್ಮಣ, ಎಲ್‌.ರಮೇಶ್, ಕಂ​‍್ಲಿಚಂದ್ರ​‍್ಪ, ಎಸ್‌.ಜಿ.ಶ್ರೀನಿವಾಸ್, ಎಂ.ಲೋಗನಾಥನ್, ಜೆ.ವರುಣ್, ಎಲ್‌.ರಮೇಶ್, ವೈ.ಶೇಖರ್, ಡಿ.ವಿಶ್ವನಾಥಕೌತಾಳ್, ಪೀರನ್‌ಸಾಬ್, ಇನ್ನು ಮುಂತಾದವರು ಭಾಗವಹಿಸಿದ್ದರು.