ಸಿಲಿಂಡರ್ ಸೋರಿಕೆ ಎಂಟು ಜನರಿಗೆ ಗಾಯ

ಸಿಲಿಂಡರ್ ಸೋರಿಕೆ ಎಂಟು ಜನರಿಗೆ ಗಾಯ  Cylinder leak injures eight people

ತಾಳಿಕೋಟೆ 30 : ಪಟ್ಟಣದ ಬಜಾರದ ಹನುಮಾನ ಮಂದಿರದ ಬಳಿಯಲ್ಲಿರುವ ಭೂಮಿಕಾ ಹೋಟೆಲ್ ನಲ್ಲಿ ಶುಕ್ರವಾರ ಬೆಳಿಗ್ಗೆ 7.30ರ ಸಮಯದಲ್ಲಿ ಸಿಲಿಂಡರ್ ಅನಿಲ ಸೋರಿಕೆಯಾಗಿ ಎಂಟು ಜನರಿಗೆ ಸುಟ್ಟ ಗಾಯಗಳಾದ ಘಟನೆ ಜರುಗಿದೆ. ಹೋಟೆಲ್ ಮಾಲೀಕ ಬಸವರಾಜ ಕುಂಬಾರ ಎಂದಿನಂತೆ ಹೋಟೆಲ್ ಪ್ರಾರಂಭಿಸಿ ತಿಂಡಿ ತಯಾರಿಕೆಗೆ ಸಿದ್ಧತೆ ನಡೆಸಿದ್ದರು. ಈ ಸಂದರ್ಭದಲ್ಲಿ ಸ್ಟೋವ್ ಬಳಿ ಸೋರಿಕೆಯಾದ ಅನಿಲದಿಂದ ಬೆಂಕಿಯ ಕೆನ್ನಾಲಿಗೆ ಹೋಟೇಲ್ ನಲ್ಲಿ ಆವರಿಸಿದೆ. ಇದರಿಂದಾಗಿ ಹೋಟೇಲ್ ನಲ್ಲಿದ್ದ ಎಂಟು ಜನಕ್ಕೆ ಬೆಂಕಿ ತಗುಲಿ ಸುಟ್ಟ ಗಾಯಗಳಾಗಿವೆ. ತಕ್ಷಣವೇ ಅವರುಗಳನ್ನು ಸ್ಥಳೀಯ ಸಮುದಾಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಯಿತು.

ನಂತರ ಹೆಚ್ಚಿನ ಚಿಕಿತ್ಸೆಗೆ ವಿಜಯಪುರಕ್ಕೆ ಕಳುಹಿಸಲಾಯಿತು ಇವರಲ್ಲಿ ಶಕೀಲ ಅಹಮ್ಮದ ಕುಂಬಾರವಾಡ(35), ಬಸೀರ ಅಹಮ್ಮದ ಕಡದಾಳ(42) ರಾಜಕುಮಾರ ಗೊಟಗುಣಕಿ(71), ಅವರಿಗೆ ತೀವ್ರ ಸುಟ್ಟ ಗಾಯಗಳಾಗಿವೆ.  ಉಳಿದಂತೆ ಕಿರಣ್ ರಾಮಸಿಂಗ ಕೋಟಿಮನಿ(40), ಹೊಟೇಲ್ ಮಾಲೀಕ ಬಸವರಾಜ ಕುಂಬಾರ(45), ಗೂಡುಸಾಬ ಪಠಾಣ(68), ಭೀಮಪ್ಪ ನಾಲತ್ವಾಡ(47), ದವಲಸಾಬ ಮುದ್ನಾಳ(55), ಅವರಿಗೆ ಮೈಯ್ಯಲ್ಲಿ ಸುಟ್ಟ ಗಾಯಗಳಾಗಿವೆ ಎಂದು ಅವರಿಗೆ ಚಿಕಿತ್ಸೆ ನೀಡಿದ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಕಾಶಿನಾಥ ಬಿರಾದಾರ ತಿಳಿಸಿದರು. ಘಟನಾ ಸ್ಥಳಕ್ಕೆ ಪಿಎಸ್‌ಐ ಗಳಾದ ಜ್ಯೋತಿ ಖೋತ, ಎಸ್‌.ಎಂ.ಪಡಶೆಟ್ಟಿ, ಭೇಟಿ ನೀಡಿ ತನಿಖೆ ನಡೆಸಿದ್ದಾರೆ.