ಎನ್ಪಿಎ ಖಾತೆ ನೆಪದಲ್ಲಿ ಬೆಳೆ ವಿಮೆ ನೋಂದಣಿ ನಿರಾಕರಣೆ: ರೈತರ ಆಕ್ರೋಶ

ಎನ್ಪಿಎ ಖಾತೆ ನೆಪದಲ್ಲಿ ಬೆಳೆ ವಿಮೆ ನೋಂದಣಿ ನಿರಾಕರಣೆ: ರೈತರ ಆಕ್ರೋಶ  Crop insurance registration denied citing NPA accounts: Farmers outraged

ಲಕ್ಷ್ಮೇಶ್ವರ 14: 2026-27ನೇ ಸಾಲಿನ ಬೆಳೆಗಳಿಗೆ ಫಸಲ್ ವಿಮಾ ಯೋಜನೆಯಡಿ ಬೆಳೆ ವಿಮೆ ನೋಂದಣಿ ಮಾಡಿಸಿಕೊಳ್ಳಲು ಬ್ಯಾಂಕ್ಗೆ ತೆರಳಿದ ರೈತರಿಗೆ, ಸಾಲದ ಖಾತೆ ಎನ್ಪಿಎ ಆಗಿರುವ ನೆಪದಲ್ಲಿ ಅರ್ಜಿಗಳನ್ನು ಸ್ವೀಕರಿಸಲು ಬ್ಯಾಂಕ್ ಅಧಿಕಾರಿಗಳು ನಿರಾಕರಿಸುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.  

ರೈತರ ಜಮೀನು ಮತ್ತು ಬೆಳೆಗೆ ಯಾವುದೇ ತೊಂದರೆ ಇಲ್ಲದಿದ್ದರೂ, ಬ್ಯಾಂಕ್ ಖಾತೆ ಎನ್ಪಿಎ ಆಗಿರುವ ಕಾರಣದಿಂದ ಅರ್ಜಿ ಸ್ವೀಕರಿಸದಿರುವುದರಿಂದ ಅವರು ಬೆಳೆ ವಿಮೆಯ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಇದರಿಂದ ಬೆಳೆ ಹಾನಿಯಾದರೆ ಪರಿಹಾರ ಪಡೆಯುವ ಅವಕಾಶ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರೈತರು ದೂರಿದ್ದಾರೆ.  

ಇದೇ ವೇಳೆ, ಬೆಳೆ ವಿಮೆ ನೋಂದಣಿ ಪ್ರಕ್ರಿಯೆಯಲ್ಲಿ ಸರ್ವರ್ ಸಮಸ್ಯೆ ಹಾಗೂ ತಾಂತ್ರಿಕ ದೋಷಗಳಿಂದಲೂ ವಿಳಂಬ ಉಂಟಾಗುತ್ತಿದ್ದು, ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಆದ್ದರಿಂದ ನೋಂದಣಿ ಅವಧಿಯನ್ನು ವಿಸ್ತರಿಸುವಂತೆ ಆಗ್ರಹಿಸಲಾಗಿದೆ.  

ಎನ್ಪಿಎ ಖಾತೆ ಹೊಂದಿರುವ ರೈತರ ಅರ್ಜಿಗಳನ್ನೂ ಸ್ವೀಕರಿಸಿ ಬೆಳೆ ವಿಮೆ ನೋಂದಣಿಗೆ ಅವಕಾಶ ಕಲ್ಪಿಸುವಂತೆ ಸಂಬಂಧಪಟ್ಟ ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ರೈತರು ಮನವಿ ಮಾಡಿದ್ದಾರೆ.  

ಈ ಕುರಿತು ಸಲ್ಲಿಸಿದ ಮನವಿಯಲ್ಲಿ, ರೈತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.  ಈ ಸಂದರ್ಭದಲ್ಲಿ ಸಂಘಟನೆಯ ತಾಲೂಕು ಅಧ್ಯಕ್ಷ ಲೋಕೇಶ್ ಸುತಾರ್ ಸೇರಿದಂತೆ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು.