ಆಕಸ್ಮಿಕ ಬೆಂಕಿ: ಎರಡು ಮೇವಿನ ಬಣವಿಗಳು ಸಂಪೂರ್ಣ ಭಸ್ಮ

ಕಂಪ್ಲಿ 25: ತಾಲ್ಲೂಕಿನ ಮೆಟ್ರಿ ಗ್ರಾಮದ ಈಶ್ವರ ದೇವಸ್ಥಾನ ಹಿಂಭಾಗದಲ್ಲಿ ಶುಕ್ರವಾರ ರಾತ್ರಿ ಎರಡು ಮೇವಿನ ಬಣವಿ ಆಕಸ್ಮಿಕ ಬೆಂಕಿಗೆ ಸಂಪೂರ್ಣ ಭಸ್ಮವಾಗಿವೆ. 

ಕಬ್ಬೇರು ಈರಣ್ಣ, ಈಡಿಗರ ದೇವೇಂದ್ರ​‍್ಪ ಎನ್ನುವ ರೈತರಿಗೆ ಈ ಬಣವಿ ಸೇರಿವೆ. ಗಂಗಾವತಿ ಮತ್ತು ಕುಡುತಿನಿ ಬಿಟಿಪಿಎಸ್ ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಶುಕ್ರವಾರ ರಾತ್ರಿಯಿಂದ 

ಶನಿವಾರ ಬೆಳಗಿನ 11ರವರೆಗೆ ಬೆಂಕಿ ನಂದಿಸಿದರು.  

ರಾತ್ರಿ ಗಾಳಿ ಇಲ್ಲದ ಕಾರಣ ಅಕ್ಕಪಕ್ಕದ 40ಕ್ಕು ಹೆಚ್ಚು ಬಣವಿಗಳಿಗೆ ಬೆಂಕಿ ವ್ಯಾಪಿಸಲಿಲ್ಲ. ಎಕರೆ ಭತ್ತದ ಮೇವು ಇತರೆ ಖರ್ಚು ಸೇರಿ ರೂ. 3000ರಿಂದ ರೂ. 3500ಕ್ಕೆ ಖರೀದಿಸಿ ಇತ್ತೀಚೆಗೆ ಬಣವಿ ಹಾಕಿದ್ದೆವು. ಆದರೆ, ಯಾರೋ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಕಬ್ಬೇರು ಈರಣ್ಣ, ಈಡಿಗರ ದೇವೇಂದ್ರ​‍್ಪ ಸಂಶಯ ವ್ಯಕ್ತಪಡಿಸಿದರು. 

ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಕೆ.ಎಂ. ಶಿವರುದ್ರಯ್ಯ ಭೇಟಿ ನೀಡಿ ಪರೀಶೀಲಿಸಿ, ಎರಡು ಬಣವಿಗಳಿಂದ ಸುಮಾರು 20ಬಂಡಿಯಷ್ಟು ಮೇವು ಸುಟ್ಟಿದ್ದು, ಮೇಲಾಧಿಕಾರಿಗಳಿಗೆ ವರದಿ ನೀಡುವುದಾಗಿ ತಿಳಿಸಿದರು.