ನರೇಗಾದಲ್ಲಿ ಕಾರ್ಮಿಕ ಸ್ನೇಹಿ ವಾತಾವರಣ: ಪಿಡಿಓ ಗಣಿ

ನರಗುಂದ:(ಕೊಣ್ಣೂರು) ನರೇಗಾ ಯೋಜನೆಯಡಿ ಕೂಲಿಕಾರರಿಗೆ ಒದಗಿಸುವ ಕೆಲಸಗಳು ಕಾರ್ಮಿಕ ಸ್ನೇಹಿ ವಾತಾವರಣ ಹೊಂದಿವೆ. ಕೂಲಿಕಾರ್ಮಿಕರಿಗೆ ಅತ್ಯಂತ ಅಧಿಕ ಸೌಲಭ್ಯಗಳುಳ್ಳ ಸರ್ಕಾರದ ಯೋಜನೆಯೊಂದಿದ್ದರೆ ಅದು ನರೇಗಾ ಯೋಜನೆ ಅಂತ ಕೊಣ್ಣೂರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮಂಜುನಾಥ ಗಣಿ ಅಭಿಪ್ರಾಯಪಟ್ಟರು.

ತಾಲೂಕಿನ ಕೊಣ್ಣೂರು ಗ್ರಾಮದಲ್ಲಿ ಮೇ-1 ವಿಶ್ವ ಕಾರ್ಮಿಕ ದಿನಾಚರಣೆ ಅಂಗವಾಗಿ ನರೇಗಾ ಕೂಲಿಕಾರರ ಜೊತೆಗೆ ಮೇ-ಡೇ ದಿನಾಚರಣೆಯನ್ನು ಕೇಕ್ ಕತ್ತರಿಸಿ ಕೂಲಿಕಾರರಿಗೆ ಸಿಹಿ ತಿನಿಸುವ ಮೂಲಕ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕೊಣ್ಣೂರು ಗ್ರಾಮ ಪಂಚಾಯತ ಪಿಡಿಓ ಮಂಜುನಾಥ ಗಣಿ, ಬೇರೆಲ್ಲೂ ಇರದ ಕಾರ್ಮಿಕ ಸ್ನೇಹಿ ವಾತಾವರಣ ನರೇಗಾ ಯೋಜನೆಯಲ್ಲಿದೆ. 

ಯೋಜನೆಯಡಿ ಕೂಲಿಕಾರ್ಮಿಕರಿಗೆ ಅಧಿಕ ಸೌಲಭ್ಯಗಳಿವೆ. ಕೂಲಿಕಾರರ ಕೇಂದ್ರಿಕೃತ ಯೋಜನೆ ಇದಾಗಿದ್ದು, ಇಡೀ ದೇಶಾದ್ಯಂತ ಸಾಮಾನ್ಯ ಕೂಲಿಕಾರರ ಆರ್ಥಿಕ ಜೀವನಕ್ಕೆ ನರೇಗಾ ಯೋಜನೆ ಸಹಾಯಕವಾಗಿದೆ. ಯೋಜನೆಯಡಿ ಕೆಲಸ ಮಾಡುವ ಕೂಲಿಕಾರರಿಗೆ ಕಾಮಗಾರಿ ಸ್ಥಳದಲ್ಲಿ ಏನಾದರೂ ಆರೋಗ್ಯ ಸಮಸ್ಯೆಗಳು ಉದ್ಬವಿಸಿದರೆ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ಕೊಡಿಸಲಾಗುವುದು. ಆಕಸ್ಮಿಕವಾಗಿ ಯೋಜನೆಯಡಿ ಕೆಲಸ ಮಾಡುವ ಸಂದರ್ಭದಲ್ಲಿ ಕೂಲಿಕಾರರ ಮೃತರಾದರೆ 2 ಲಕ್ಷವರೆಗೆ ಪರಿಹಾರ ನೀಡುವ ವ್ಯವಸ್ಥೆ ನರೇಗಾದಲ್ಲಿದೆ. ಕೆಲಸ ಮಾಡುವ ಸಂದರ್ಭದಲ್ಲಿ ಕೂಲಿಕಾರರಿಗೆ ಕುಡಿಯುವ ನೀರಿನ ವ್ಯವಸ್ಥೆ ಮತ್ತು ದಣಿವಾರಿಸಿಕೊಳ್ಳಲು ನೆರಳಿನ ವ್ಯವಸ್ಥೆ ಮಾಡುವುದು ಯೋಜನೆ ಒಳಗಿದೆ. 

ಹೀಗಾಗಿ ಕೂಲಿಕಾರ್ಮಿಕರ ಸ್ನೇಹಿ ವಾತಾವರಣ ನರೇಗಾ ಯೋಜನೆಯಡಿ ಕೆಲಸ ಮಾಡುವ ಕೂಲಿಕಾರನ ಅನುಭವಕ್ಕೆ ಬರುತ್ತದೆ ಅಂತ ತಿಳಿಸಿದರು.ಕಾರ್ಮಿಕ ಆಂದೋಲನದ ಸಾಮಾಜಿಕ ಮತ್ತು ಆರ್ಥಿಕ ಸಾಧನೆಗಳನ್ನು ಆಚರಿಸುವ ದಿನ ಇದಾಗಿದೆ. ಕಾರ್ಮಿಕಪರ ಹೋರಾಟಗಾರರ ಶ್ರಮದ ಫಲದಿಂದ ಇಂದಿನ ದಿನಗಳಲ್ಲಿ ಸರ್ಕಾರದ ಯೋಜನೆಗಳಲ್ಲಿ ಕಾಮರ್ಿಕರಿಗೆ ಅಧಿಕ ಸೌಲಭ್ಯಗಳು ಸಿಗುವಂತ್ತಾಗಿವೆ. ಈ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿ ಕೂಲಿಕಾರರು ಸಂಭ್ರಮಿಸಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನರೇಗಾ ಕೂಲಿಕಾರರು ಕಾರ್ಮಿಕ ದಿನಾಚರಣೆಗೆ ಸಿದ್ಧಪಡಿಸಿದ ವಿಶೇಷ ಕೇಕ್ ನ್ನು ಕಾರ್ಮಿಕರೇ ಕತ್ತರಿಸುವ ಮೂಲಕ ಇನ್ನಿತರೆ ಕೂಲಿಕಾರರಿಗೆ ಕೇಕ್ ತಿನಿಸಿ ಮೇ-ಡೇ ಶುಭಾಶಯ ಕೋರಿದರು.ಸ್ಥಳೀಯ ಕಲಾವಿದ ಪ್ರಕಾಶ ಚಂದನ್ನವರ ನೇತೃತ್ವದ ಜೈ ಕಿಸಾನ ತಂಡ ಕಾರ್ಮಿಕರ ಕುರಿತಾದ ಗೀತೆಗಳನ್ನು ಹಾಡುವುದರ ಮೂಲಕ ನರೇಗಾ ಕಾಮಗಾರಿ ಸ್ಥಳದಲ್ಲಿನ ಕಾರ್ಮಿಕ ದಿನಾಚರಣೆಗೆ ಮೆರಗು ತಂದರು. ಕಾರ್ಯಕ್ರಮದಲ್ಲಿ ಕೊಣ್ಣೂರು ಗ್ರಾಮ ಪಂಚಾಯತ ಸಿಬ್ಬಂದಿ ವರ್ಗ, ನರೇಗಾ ಸಿಬ್ಬಂದಿ ವರ್ಗ ಮತ್ತು ಕೂಲಿಕಾರರು ಭಾಗವಹಿಸಿದ್ದರು. ಕೊಣ್ಣೂರು ಗ್ರಾಮ ಪಂಚಾಯತ ಕಂಪ್ಯೂಟರ್ ಆಪರೇಟರ್ ರಮೇಶ ವಾಸನ ವಂದಿಸಿದರು