ಹಾವೇರಿ 01: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಭಾನುವಾರ ಹಾವೇರಿ ಶಹರದ ಹೆಗ್ಗೇರಿ ರಸ್ತೆಯಲ್ಲಿರುವ ರುದ್ರಭೂಮಿಯಲ್ಲಿ ಲಯನ್ಸ್ ಕ್ಲಬ್ ನ ವತಿಯಿಂದ 50ಕ್ಕೂ ಹೆಚ್ಚು ಗಿಡಗಳನ್ನು ನೆಡುವ ಮೂಲಕ ವಿಶಿಷ್ಟವಾಗಿ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಈ ವೇಳೆ ಲಯನ್ಸ್ ಕ್ಲಬ್ನ ಅಧ್ಯಕ್ಷರಾದ ಸುಭಾಸ್ ಹುಲ್ಯಾಳದ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹಲವು ಕಾರಣಕ್ಕೆ ಮರಗಳನ್ನು ಕಡಿಯಲಾಗುತ್ತಿದೆ. ಇದರಲ್ಲಿ ಕೈಗಾರಿಕೆಗಳಿಗೆ ಅಗತ್ಯವಾದ ಮರಗಳು, ರಸ್ತೆ ಅಗಲೀಕರಣ, ಮನೆ ನಿರ್ಮಾಣ, ಭೂಮಿ ಸಮತಟ್ಟು ಹೀಗೆ ಹಲವು ಕಾರಣಗಳಿವೆ. ಆದರೆ ಮರಗಳನ್ನು ನೆಡುವಲ್ಲಿ ಇಂಥ ಕಾಳಜಿ ತೋರುತ್ತಿಲ್ಲ. ಇದರಿಂದ ಇಡೀ ವಿಶ್ವಕ್ಕೆ ಶಾಖದ ಆಘಾತ (ಗ್ಲೋಬಲ್ ವಾರ್ಮಿಂಗ್) ಸಮಸ್ಯೆ ಎದುರಾಗಿದೆ. ಇದರ ನೇರ ಪರಿಣಾಮವನ್ನು ದೆಹಲಿ ಮತ್ತು ನಮ್ಮ ಬೆಂಗಳೂರಿನಲ್ಲಿ ಕಾಣಬಹುದಾಗಿದೆ ಎಂದರು.
ಇನ್ನು ಹಾವೇರಿ ನಗರದಲ್ಲಿ ರುದ್ರಭೂಮಿಗೆ ಬರುವ ನಾಗರೀಕರು ಪ್ರತಿ ವ್ಯಕ್ತಿಯ ಅಂತಿಮ ನಮನ ಮತ್ತು ವಿಧಿವಿಧಾನಗಳನ್ನು ಪೂರ್ಣಗೊಳಿಸುವವರೆಗೆ ಅಂದರೆ ಸುಮಾರು 1-2 ಗಂಟೆಗಳ ಕಾಲ ಬಿಸಿಲಲ್ಲಿ ಕಾಯುವಂತಾಗಿದೆ. ಇದಕ್ಕೆ ಪರಿಹಾರ ಕಂಡು ಕೊಳ್ಳುವ ಜತೆಗೆ ಪರಿಸರದ ಕಾಳಜಿ ತೋರುವ ಈ ಕಾರ್ಯಕ್ರಮವನ್ನು ಇಲ್ಲಿ ಹಮ್ಮಿಕೊಂಡಿದ್ದು ಇದು ಹೆಚ್ಚು ಅರ್ಥಪೂರ್ಣ ಮತ್ತು ಸಾಮಾಜಿಕ ಕಳಕಳಿಯ ಕಾರ್ಯ ಎಂಬ ನೆಮ್ಮದಿ ನೀಡಿದ ಎಂದರು.
ಹೊಸಮಠದ ಶ್ರೀ ಬಸವಶಾಂತಲಿಂಗ ಸ್ವಾಮೀಜಿಗಳು ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಂಜಾನೆ 6 ಗಂಟೆಯಿಂದ 10 ಗಂಟೆಯವರೆಗೆ ಲಯನ್ಸ್ ಸಂಸ್ಥೆಯ ಪದಾಧಿಕಾರಿಗಳ ಜತೆಗೆ ಹತ್ತಾರು ಸಾರ್ವಜನಿಕರು ಈ ಪರಿಸರ ದಿನದ ವಿಶೇಷ ಕಾರ್ಯಕ್ಕೆ ಸಾಥ್ ನೀಡಿ ಶ್ರಮದಾನ ಮಾಡಿದರು.
ಈ ವೇಳೆ ವಿರುಪಾಕ್ಷಪ್ಪ ಹಾವನೂರ, ಗೀರೀಶ ಬಣಕಾರ, ವಿ.ಜಿ. ಬಣಕಾರ, ಎಸ್.ಎಚ್. ಕಬ್ಬಿಣಕಂತಿಮಠ, ಎ.ಎಚ್. ಕಬ್ಬಿಣಕಂತಿಮಠ, ನಿರಂಜನ ಹೇರೂರ, ಎಂ.ಎಸ್. ಹಿರೇಮಠ, ನಗರಸಭೆಯ ಉಪಾಧ್ಯಕ್ಷ ಮಲ್ಲಣ್ಣ ಸಾತೇನಹಳ್ಳಿ, ಡಾ.ವಿಜಯಕುಮಾರ ಬಳಿಗಾರ, ಎಂ.ಸಿ. ಮಳೀಮಠ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.