ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯ ಕುರಿತು ವಿಶ್ವಸಂಸ್ಥೆಯಿಂದ ರಹಸ್ಯ ಸಮಾಲೋಚನಾ ಸಭೆ

UN holds secret meeting on tensions between India and Pakistan

ವಿಶ್ವಸಂಸ್ಥೆ 06: ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ನಡೆಸಿದ ರಹಸ್ಯ ಸಮಾಲೋಚನಾ ಸಭೆಯಲ್ಲಿ ರಾಯಭಾರಿಗಳು ಉದ್ವಿಗ್ನತೆಯನ್ನು ಕಡಿಮೆ ಮಾಡಲು ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಭದ್ರತಾ ಮಂಡಳಿ ಅಧಿಕಾರಿಗಳು ಪಾಕಿಸ್ತಾನಕ್ಕೆ  ಹಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಮೇ ತಿಂಗಳಿನ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಅಧ್ಯಕ್ಷರಾಗಿರುವ ಗ್ರೀಸ್, ಪ್ರಸ್ತುತ ಖಾಯಂ ಸದಸ್ಯ ರಾಷ್ಟ್ರವಲ್ಲದ ಪಾಕಿಸ್ತಾನದ ವಿನಂತಿಯ ಮೇರೆಗೆ ಸಭೆಯನ್ನು ನಿಗದಿಪಡಿಸಿದ್ದರು.

ರಾಜಕೀಯ ಮತ್ತು ಶಾಂತಿ ಕಾರ್ಯಾಚರಣೆಗಳ ಇಲಾಖೆಗಳಲ್ಲಿ ಮಧ್ಯಪ್ರಾಚ್ಯ, ಏಷ್ಯಾ ಮತ್ತು ಪೆಸಿಫಿಕ್‌ನ ಸಹಾಯಕ ಪ್ರಧಾನ ಕಾರ್ಯದರ್ಶಿ ಟುನೀಶಿಯಾದ ಖಲೀದ್ ಮೊಹಮ್ಮದ್ ಖಿಯಾರಿ ಎರಡೂ ಇಲಾಖೆಗಳ  ಪರವಾಗಿ ಮಂಡಳಿಗೆ ವಿವರಿಸಿದರು.

ಸಭೆಯಿಂದ ಹೊರಬಂದ ಖಿಯಾರಿ, ಸಂವಾದ ಮತ್ತು ಸಂಘರ್ಷದ ಶಾಂತಿಯುತ ಪರಿಹಾರಕ್ಕಾಗಿ ಕರೆ ನೀಡಲಾಗಿದೆ ಎಂದು ಹೇಳಿದರು.

15 ರಾಷ್ಟ್ರಗಳ ಭದ್ರತಾ ಮಂಡಳಿಯ ಸದಸ್ಯರು ಪಾಕಿಸ್ತಾನಕ್ಕೆ ಕಠಿಣ ಪ್ರಶ್ನೆಗಳನ್ನು ಎತ್ತಿದ್ದಾರೆ ಎಂದು ಇಲ್ಲಿನ ಮೂಲಗಳು  ತಿಳಿಸಿದೆ. ಭಾರತದೊಂದಿಗೆ ದ್ವಿಪಕ್ಷೀಯವಾಗಿ ಸಮಸ್ಯೆಗಳನ್ನು ಬಗೆಹರಿಸಲು ಸೂಚಿಸಲಾಗಿದೆ ಎಂದು ಹೇಳಿದರು.

ಭಯೋತ್ಪಾದಕ ದಾಳಿಗೆ ವ್ಯಾಪಕ ಖಂಡನೆ ಮತ್ತು ಹೊಣೆಗಾರಿಕೆಯ ಅಗತ್ಯವನ್ನು ಗುರುತಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸುಮಾರು ಒಂದೂವರೆ ಗಂಟೆಗಳ ಕಾಲ ನಡೆದ ಮುಚ್ಚಿದ ಬಾಗಿಲಿನ ಸಭೆಯು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕೊಠಡಿಯಲ್ಲಿ ನಡೆಯಲಿಲ್ಲ, ಬದಲಾಗಿ ಅದರ ಪಕ್ಕದ ಸಮಾಲೋಚನಾ ಕೊಠಡಿಯಲ್ಲಿ ನಡೆಯಿತು.

ಪಾಕಿಸ್ತಾನದ ಕ್ಷಿಪಣಿ ಪರೀಕ್ಷೆಗಳು ಮತ್ತು ಪರಮಾಣು ವಾಕ್ಚಾತುರ್ಯವು ಉದ್ವಿಗ್ನತೆಯನ್ನು ಹೆಚ್ಚಿಸುವ ಅಂಶಗಳಾಗಿವೆ ಎಂದು ಅನೇಕ ಸದಸ್ಯರು ಕಳವಳ ವ್ಯಕ್ತಪಡಿಸಿದರು. ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಖಾಯಂ ಪ್ರತಿನಿಧಿ ರಾಯಭಾರಿ ಅಸಿಮ್ ಇಫ್ತಿಕರ್ ಅಹ್ಮದ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಸಭೆಯಲ್ಲಿ ದೇಶದ ಉದ್ದೇಶಗಳನ್ನು ಹೆಚ್ಚಾಗಿ ಮುಂದಿಡಲಾಗಿದೆ ಎಂದರು.

1960ರ ಸಿಂಧೂ ಜಲ ಒಪ್ಪಂದವನ್ನು ಭಾರತ ಅಮಾನತುಗೊಳಿಸಿದ ವಿಷಯವನ್ನು ಪಾಕಿಸ್ತಾನವು ಎತ್ತಿತು. ನೀರು ಜೀವ, ಆಯುಧವಲ್ಲ. ಈ ನದಿಗಳು 240 ಮಿಲಿಯನ್‌ಗಿಂತಲೂ ಹೆಚ್ಚು ಪಾಕಿಸ್ತಾನಿಗಳನ್ನು ಪೋಷಿಸುತ್ತವೆ. ಸಭೆಯಲ್ಲಿ ಪಾಕಿಸ್ತಾನವು ಭಾರತ ಸೇರಿದಂತೆ ನಮ್ಮ ಎಲ್ಲಾ ನೆರೆಹೊರೆಯವರೊಂದಿಗೆ ಶಾಂತಿಯುತ, ಸಹಕಾರಿ ಸಂಬಂಧಗಳಿಗೆ ತನ್ನ ಬದ್ಧತೆಯನ್ನು ಪುನರುಚ್ಚರಿಸಿತು ಎಂದು ಅಹ್ಮದ್ ಹೇಳಿದರು.

ಪರಸ್ಪರ ಗೌರವ ಮತ್ತು ಸಾರ್ವಭೌಮ ಸಮಾನತೆಯ ಆಧಾರದ ಮೇಲೆ ನಾವು ಸಂವಾದಕ್ಕೆ ಮುಕ್ತರಾಗಿದ್ದೇವೆ ಎಂದು ಹೇಳಿದರು.