ಪ್ರತಿಭಾ ಪುರಸ್ಕಾರ, ಸಾಧಕರ ಹಾಗೂ ನಿವೃತ್ತ ನೌಕರರ ಸನ್ಮಾನ ಸಮಾರಂಭ

Talent Awards, felicitation ceremony for achievers and retired employees

ಹಾವೇರಿ 18 : ಶಿಸ್ತು ಇಲ್ಲದ ಶಾಲೆ, ಕೆಲಸವಿಲ್ಲದ ಬಾಳ್ವೆ, ಮೌಲ್ಯವಿಲ್ಲದ ಶಿಕ್ಷಣ, ವಿನಯವಿಲ್ಲದ ವಿದ್ಯೆ, ಅರ್ಥವಿಲ್ಲದ ಶಾಸ್ತ್ರ, ದುಡಿಮೆ ಇಲ್ಲದ ಸಂಪತ್ತು, ಪಾಲನೆ ಇಲ್ಲದ ಬೋಧನೆ, ಚಾಲನೆ ಇಲ್ಲದ ಯೋಜನೆ ಹಾಗೂ ಅನುಕಂಪವಿಲ್ಲದ ಅಂತಕರಣ, ತತ್ವವಿಲ್ಲದ ರಾಜಕೀಯಗಳು ಹೆಚ್ಚುತ್ತಿರುವ ಈ ದಿನಗಳಲ್ಲಿ ಮೌಲ್ಯಗಳ ಬಗ್ಗೆ ಚಿಂತನೆ ಅಗತ್ಯ ಎಂದು ಹಿರಿಯ ಸಾಹಿತಿ ಹನುಮಂತಗೌಡ ಗೊಲ್ಲರ ಹೇಳಿದರು. 

ತಾಲೂಕಿನ ಕನಕಪುರ ಗ್ರಾಮದಲ್ಲಿ ಗ್ರಾಮದ ನೌಕರರ ಬಳಗ ಏರಿ​‍್ಡಸಿದ್ದ ಪ್ರತಿಭಾ ಪುರಸ್ಕಾರ, ಸಾಧಕರ ಹಾಗೂ ನಿವೃತ್ತ ನೌಕರರ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.  

ನಮ್ಮ ಯುವಕರು ಸಾಮಾಜಿಕ ಜಾಲತಾಣಗಳ ಹೀರೋಗಳು ಆಗುವ ಬದಲು ನಿಜ ಜೀವನದಲ್ಲಿ ಹೀರೋಗಳಾಗಬೇಕು. ಎಷ್ಟೇ ಸಿನಿಮ ನೋಡಿದರು ತಂದೆಗಿಂತ ದೊಡ್ಡ ಹೀರೋ ಸಿಗೋದಿಲ್ಲ,ಎಷ್ಟೇ ದೇವಸ್ಥಾನ ಸುತ್ತಾಡಿದರು ತಾಯಿಗಿಂತ ದೊಡ್ಡ ದೇವರು ಸಿಗೋದಿಲ್ಲ. ನೌಕರರ ಬಳಗದ ಈ ವಿದಾಯಕ ಕಾರ್ಯ ಅನುಕರಣೆಯ, ಶ್ಲಾಘನೀಯ ಎಂದು ಹನುಮಂತಗೌಡ ತಿಳಿಸಿದರು. 

 ಜಿಲ್ಲಾ ಪಂಚಾಯತ್ ಮಾಜಿಸದಸ್ಯ ಮಹದೇವಗೌಡ ಗಾಜೀಗೌಡ್ರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಯಾವ ಧರ್ಮ ಅಥವಾ ದೇವರು ನಮ್ಮನ್ನು ಉದ್ದಾರ ಮಾಡುವುದಿಲ್ಲ. ನಮ್ಮನ್ನು ಉದ್ಧಾರ ಮಾಡುವುದು ಶಿಕ್ಷಣ ಮಾತ್ರ. ನಮ್ಮ ಉದ್ಧಾರಕ್ಕೆ ನಾವೇ ಜವಾಬ್ದಾರರು,ವಿಶ್ವವನ್ನು ಬದಲಾಯಿಸಬಹುದಾದ ಅತ್ಯಂತ ಪ್ರಬಲ ಸಾಧನ ಶಿಕ್ಷಣ ಎಂದರು. 

 ಸಹ ಶಿಕ್ಷಕ ಎಂ.ಎನ್‌. ಚಳಗೇರಿ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಗುರುತರ ಜವಾಬ್ದಾರಿ ಶಿಕ್ಷಕರದ್ದು, ಸ್ವಯಂ ಸೇವಾ ಸಂಘಟನೆಗಳದ್ದಾಗಿದೆ. ಗ್ರಾಮದಲ್ಲಿ ಕೊಡುವ ಕೈಗಳಿಗೆ ಕೊರತೆ ಇಲ್ಲ, ಕೇಳುವ ಬಾಯಿಗಳಿಗೆ ಕೊರತೆ ಇದೆ. ಸಾಧನೆ ಯಾರೊಬ್ಬರ ಸ್ವತ್ತಲ್ಲ, ಅದು ಸಾಧಕನ ಸ್ವತ್ತು. ಎಲ್ಲರಲ್ಲಿ  ಎಲ್ಲರಲ್ಲಿ ಕೆಲವರಾಗಬೇಕು, ಕೇವಲ ವಾಗಬಾರದು ಎಂದರು. 

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌..ಎಫ್‌.ಎನ್‌. ಗಾಜೀಗೌಡ್ರ ಅಧ್ಯಕ್ಷತೆ ವಹಿಸಿ ಮಾತನಾಡಿ ಗ್ರಾಮದ ನೌಕರರು, ಯುವಕರು ಒಗ್ಗಟ್ಟಾಗಿ ಗ್ರಾಮದ ಅಭಿವೃದ್ಧಿಗೆ ಶ್ರಮಿಸಬೇಕು. ಕುಡಿತದಿಂದ ಅನೇಕ ಕುಟುಂಬಗಳು ಹಾಳಾಗಿವೆ, ಮೊಬೈಲ್ ನಿಂದ ಮಕ್ಕಳು ತಾಯ್ತಂದೆಯರು  ವ್ಯಾಪ್ತಿ ಪ್ರದೇಶದಿಂದ ಹೊರ ಹೋಗುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳು ಸಮಾಜವನ್ನು ಹಾಳು ಮಾಡಿವೆ. ದೇವರ ಹೆಸರಿನಲ್ಲಿ ಬಲಿ ಕೊಡುವುದನ್ನು ನಿಲ್ಲಿಸಬೇಕು, ಗ್ರಾಮದಲ್ಲಿ ಗ್ರಂಥಾಲಯ ಸ್ಥಾಪನೆಗೆ ನೌಕರರು ಮುಂದಾಗಬೇಕು,ಗ್ರಾಮ ಸುಧಾರಣೆ ಶಾಲೆಯನ್ನು ಅವಲಂಭಿಸಿದೆ ಎಂದು ಹೇಳಿದರು. 

ಗ್ರಾಮದಲ್ಲಿ ಅತಿ ಹೆಚ್ಚು ಅಂಕ ಪಡೆದು ತೇರ್ಗಡೆಯಾದ ಎಸ್‌.ಎಸ್‌.ಎಲ್‌.ಸಿ, ಪಿಯುಸಿ ವಿದ್ಯಾರ್ಥಿಗಳನ್ನು, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಹಾಗೂ ನಿವೃತ್ತ ನೌಕರರನ್ನು ಗೌರವಿಸಲಾಯಿತು. 

ಭರಮಗೌಡ ಗಾಜಿಗೌಡ್ರ,  ಅಶೋಕ್ ಬಣಕಾರ,  ನಿವೃತ್ತ ಶಿಕ್ಷಕ ಎಲ್‌.ಡಿ. ಹಾವನೂರ, ನಿಂಗನಗೌಡ ಗಾಜಿಗೌಡ್ರು, ಸುಮಾ ಗಾಜಿಗೌಡ್ರ, ಚಂದ್ರ​‍್ಪ ದೊಡ್ಡತಳವಾರ, ಶೇಖರಗೌಡ, ಕಾಂತೇಶ್ ಮೊದಲಾದ ಗಣ್ಯರು ವೇದಿಕೆಯಲ್ಲಿದ್ದರು. 

ಭವಾನಿ, ಮೇಘಾ, ಅರುಣ್ ಪ್ರಾರ್ಥಿಸಿದರು. ಹನುಮಂತಗೌಡ ಗಾಜಿಗೌಡ್ರು ಪ್ರಾಸ್ತಾವಿಕ ಮಾತನಾಡಿದರು. ಎನ್‌.ಹೆಚ್‌. ಬಣಕಾರ ನಿರೂಪಿಸಿದರು. ಸಂಜೀವಗೌಡ ವಂದಿಸಿದರು.