ಚಿಕ್ಕೋಡಿ 18: ಆರೋಗ್ಯವನ್ನು ಉತ್ತೇಜಿಸುವುದು ಮತ್ತು ನಿರ್ವಹಿಸುವುದು ಆಯುರ್ವೇದದ ಗುರಿಯಾಗಿದೆ. ಅದೇ ರೀತಿ ದೈಹಿಕ ಸದೃಢತೆಯನ್ನು ಸುಧಾರಿಸಲು ಕ್ರೀಡೆ ಮುಖ್ಯವಾಗಿದೆ. ಇದು ಏಕಾಗ್ರತೆ, ಸಕಾರಾತ್ಮಕ ಮನೋಭಾವ ಮತ್ತು ಉತ್ತಮ ಕ್ರೀಡಾ ಮನೋಭಾವವನ್ನು ಸುಧಾರಿಸುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಕ್ರೀಡೆ ಮತ್ತು ದೈಹಿಕ ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಬೇಕೆಂದು ಎಂದು ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಅಥಣಿಯ ಕೆ ಎಲ್ ಇ ಸಂಸ್ಥೆಯ ಕಲಾ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ದೈಹಿಕ ಶಿಕ್ಷಕರಾದ ಡಾ. ಮಂಜುನಾಥ ಎನ್ ವಿ ಇವರು ಹೇಳಿದರು.
ಅವರು ಇಂದು ಚಿಕ್ಕೋಡಿಯ ಕೆ ಎಲ್ ಇ ಆಯುರ್ವೇದ ವೈದ್ಯಕೀಯ ಕಾಲೇಜಿನ ವಾರ್ಷಿಕ ಕೀಡಾಕೂಟದ ಬಹುಮಾನ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ವಿದ್ಯಾರ್ಥಿಗಳು ರಚನಾತ್ಮಕ ಚಟುವಟಿಕೆಗಳಲ್ಲಿ ಭಾಗಿಯಾಗುವ ಮೂಲಕ ಕಾಲೇಜಿನ ಸವಾಂರ್ಗೀಣ ಬೆಳವಣಿಗೆಯಲ್ಲಿ ಸಹಕರಿಸಬೇಕು. ಪಠ್ಯದೊಂದಿಗೆ ಪಠ್ಯೆತರ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕೆ ಎಲ್ ಇ ಯ ಆಯುರ್ವೇದ ಕಾಲೇಜಿನ ಪ್ರಾಚಾರ್ಯರಾದ ಡಾ. ಕಿರಣ ಮುತ್ನಾಳಿ ಮಾತನಾಡುತ್ತಾ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಪ್ರತಿಭೆ ಅಡಕವಾಗಿರುತ್ತದೆ. ಸತತ ಪರಿಶ್ರಮದೊಂದಿಗೆ ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಬೇಕು. ಬಹುಮಾನಗಳನ್ನು ಗೆಲ್ಲುವುದಕ್ಕಿಂತ ಭಾಗವಹಿಸುವುದು ಮುಖ್ಯ. ಪ್ರಯತ್ನ ನಿರಂತರವಾಗಿರಬೇಕು. ಧನಾತ್ಮಕ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು. ಸಾಮಾಜಿಕ ಮೌಲ್ಯಗಳನ್ನು ಪಾಲಿಸಬೇಕು. ಬದುಕಿನಲ್ಲಿ ಸೋಲು ಬಂದಾಗ ಅದನ್ನು ಸವಾಲಾಗಿ ಸ್ವೀಕರಿಸಿ ಆತ್ಮವಿಶ್ವಾಸದೊಂದಿಗೆ ಮುನ್ನುಗ್ಗಬೇಕು ಎಂದು ಅಭಿಪ್ರಾಯಪಟ್ಟರು.
ಇದೇ ಸಮಯದಲ್ಲಿ ವಾರ್ಷಿಕ ಕ್ರೀಡಾ ಕೂಟದಲ್ಲಿ ವಿದ್ಯಾರ್ಥಿಗಳಿಗಾಗಿ ಕ್ರಿಕೆಟ್, ಕಬಡ್ಡಿ, ಚೆಸ್, ಕ್ಯಾರಮ್, ಅಥ್ಲೆಟಿಕ್ಸ್, ವ್ಯಾಲಿ ಬಾಲ್ (ಪುರುಷರ) ಮತ್ತು ಥೋ ಬಾಲ್ (ಮಹಿಳೆಯರ) ಹಾಗೂ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳ ಪಟ್ಟಿಯನ್ನು ಡಾ. ರವಿರಾಜ ಕುರಬೇಟ ಹಾಗೂ ಡಾ. ಸತೀಶ ಕರಜಗಿ ವಾಚಿಸಿದರು. ಡಾ.ಸುಜಾತ ಭರಮೋಜಿ ಸ್ವಾಗತಿಸಿದ್ದರು, ವಿದ್ಯಾರ್ಥಿನಿ ಅನಪೂರ್ಣ ನಿರೂಪಿಸಿದರು. ಡಾ. ರವಿ ಮಡಿವಾಳರ ವಂದಿಸಿದರು. ಇತರೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು