ಅಳವಡಿಕೆ ಕಾಮಗಾರಿಗೆ ಎನ್ಟಿಪಿಸಿ ಪವರ್ ಗ್ರಿಡ್ದೊಂದಿಗೆ ಒಡಂಬಡಿಕೆ
ವಿಜಯಪುರ ಜೂ.18: ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣಕ್ಕೆ 19.44 ಲಕ್ಷ ರೂ. ವೆಚ್ಚದಲ್ಲಿ ಸೌರ್ ವಿದ್ಯುತ್ ಅಳವಡಿಕೆ ಕಾಮಗಾರಿಗೆ ಎನ್ಟಿಪಿಸಿ ಪವರ್ ಗ್ರಿಡ್ದೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.
ಬುಧವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಎನ್ಟಿಪಿಸಿ ಪವರ್ ಗ್ರಿಡ್ನ ಮುಖ್ಯ ಪ್ರಧಾನ ವ್ಯವಸ್ಥಾಪಕರಾದ ಮುಕುಂದ ಎಸ್.ಹೆಜಿಬ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಸದರಿ ಕಾಮಗಾರಿಯ ಒಡಂಬಡಿಕೆಗೆ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಸಹಿ ಮಾಡಿ, ಒಡಂಬಡಿಕೆ ಮಾಡಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಪವರ್ ಗ್ರಿಡ್ನ ಜನರಲ್ ಮ್ಯಾನೇಜರ್ ಜಿ.ಚಂದ್ರನ್, ಡೆಪ್ಯೂಟಿ ಜನರಲ್ ಮ್ಯಾನೇಜರ್ ಕೆ.ಎನ್.ಪ್ರಸಾದ, ಮುಖ್ಯ ವ್ಯವಸ್ಥಾಪಕ ಕೆ.ಚಂದ್ರಕಾಂತ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
ಸೌರವಿದ್ಯುತ್ ಅಳವಡಿಕೆ ನಂತರ ಕ್ರೀಡಾಂಗಣದ ಪರಿಸರ ಬೆಳಕಿನಿಂದ ಕಂಗೊಳಿಸಲಿದ್ದು ಕ್ರೀಡಾಪಟುಗಳು ಹಾಗೂ ಸಾರ್ವಜನಿಕರಿಗೆ ಸಹಕಾರಿಯಾಗಲಿದೆ. ಇದಲ್ಲದೇ, ಕ್ರೀಡಾಂಗಣಕ್ಕೆ ಬರುತ್ತಿದ್ದ ವಿದ್ಯುತ್ ವೆಚ್ಚ ಕೂಡ ನಿಶುಲ್ಕವಾಗುವುದರಿಂದ ಆ ಹಣವನ್ನು ಇತರೆ ಅಭಿವೃದ್ಧಿ ಕಾರ್ಯಗಳಿಗೆ ಹಾಗೂ ಕ್ರೀಡಾ ಚಟುವಟಿಕೆಗಳಿಗೆ ಬಳಕೆ ಮಾಡಲು ಸಹಕಾರಿಯಾಗುತ್ತದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ತಿಳಿಸಿದ್ದಾರೆ.