ಗ್ರಾಮೀಣ ಮಹಿಳೆಯರು ಸ್ವಉದ್ಯೋಗದತ್ತ ಹೆಜ್ಜೆ ಇಡಲಿ: ರಾಮಕೃಷ್ಣ ಕರೆ

ಗ್ರಾಮೀಣ ಮಹಿಳೆಯರು ಸ್ವಉದ್ಯೋಗದತ್ತ ಹೆಜ್ಜೆ ಇಡಲಿ: ರಾಮಕೃಷ್ಣ ಕರೆ  Rural women should take steps towards self-employment: Ramakrishna's call

ಲೋಕದರ್ಶನ ವರದಿ

ಬಳ್ಳಾರಿ 15: ಗ್ರಾಮೀಣ ಭಾಗದ ಮಹಿಳೆಯರು ಟೈಲರಿಂಗ್ ಹಾಗೂ ವಸ್ತ್ರ ವಿನ್ಯಾಸ ತರಬೇತಿ ಪಡೆದು ಸ್ವಉದ್ಯೋಗ ಆರಂಭಿಸುವ ಮೂಲಕ ಕುಟುಂಬದ ಆರ್ಥಿಕ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರ್ದೇಶಕ ರಾಮಕೃಷ್ಣ ಕರೆ ನೀಡಿದರು.  

ನಗರದ ಕೆನರಾ ಬ್ಯಾಂಕ್ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆ (ಆರ್ಸೆಟಿ) ಆವರಣದಲ್ಲಿ ಗ್ರಾಮೀಣ ಮಹಿಳೆಯರಿಗಾಗಿ ಆಯೋಜಿಸಿದ್ದ 31 ದಿನಗಳ ಉಚಿತ ಟೈಲರಿಂಗ್ ಮತ್ತು ವಸ್ತ್ರ ವಿನ್ಯಾಸ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.  

ಮಹಿಳೆಯರು ಸ್ವಾವಲಂಬಿ ಜೀವನ ರೂಪಿಸಿಕೊಳ್ಳಲು ಇಂತಹ ಕೌಶಲ್ಯಾಧಾರಿತ ತರಬೇತಿಗಳು ಸಹಕಾರಿಯಾಗಲಿವೆ. ತರಬೇತಿಯ ಮೂಲಕ ಉದ್ಯೋಗಾವಕಾಶಗಳನ್ನು ಸೃಷ್ಟಿಸಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದು ಅವರು ಸಲಹೆ ನೀಡಿದರು.  

ಕಾರ್ಯಕ್ರಮದಲ್ಲಿ ಹಗರಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ. ಪಾಲಯ್ಯ ಹಾಗೂ ಡಾ. ರವಿಕುಮಾರ್ ಭಾಗವಹಿಸಿ, ತರಬೇತಿ ಪಡೆಯುತ್ತಿರುವ ಮಹಿಳೆಯರಿಗೆ ಮಾರ್ಗದರ್ಶನ ನೀಡಿದರು.  

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆನರಾ ಬ್ಯಾಂಕ್ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕ ವಿನಯ್ ಕುಮಾರ್ ಬಿ. ಕೊಳ್ಳೂರು ಮಠ ಮಾತನಾಡಿ, ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕಾಗಿ ಸಂಸ್ಥೆ ಹಮ್ಮಿಕೊಂಡಿರುವ ವಿವಿಧ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.  

ಈ ಸಂದರ್ಭದಲ್ಲಿ ಜಿಲ್ಲಾ ವ್ಯವಸ್ಥಾಪಕ ವಿಜಯ್ ಕುಮಾರ್, ಜಿಲ್ಲಾ ಪಂಚಾಯತ್ನ ಎನ್‌ಆರ್‌ಎಲ್‌ಎಂ ಸಿಬ್ಬಂದಿ ರಘುವರ್ಮ, ಸಂಸ್ಥೆಯ ಉಪನ್ಯಾಸಕರಾದ ಜಡೇಪ್ಪ ಜಿ. ಮತ್ತು ದಿನೇಶ್ ಕುಮಾರ್ ಜಿ., ಸಿಬ್ಬಂದಿಗಳಾದ ಸಿದ್ದಲಿಂಗಮ್ಮ ಹಾಗೂ ಸಂತೋಷ್ ಕುಮಾರ್ ಸೇರಿದಂತೆ ಜಿಲ್ಲೆಯ ವಿವಿಧ ಗ್ರಾಮೀಣ ಭಾಗಗಳಿಂದ ಆಗಮಿಸಿದ್ದ 35 ಮಹಿಳಾ ತರಬೇತಿದಾರರು ಉಪಸ್ಥಿತರಿದ್ದರು.