ಅಯೋಧ್ಯೆ ರಾಮ ಮಂದಿರದಲ್ಲಿ ಭಕ್ತರ ನಂಬಿಕೆಯ ಲೂಟಿ: ಅಶೋಕ ಮಂದಾಲಿ

ಅಯೋಧ್ಯೆ ರಾಮ ಮಂದಿರದಲ್ಲಿ ಭಕ್ತರ ನಂಬಿಕೆಯ ಲೂಟಿ: ಅಶೋಕ ಮಂದಾಲಿ Looting of devotees' faith at the Ayodhya Ram Mandir: Ashok Mandali

ಗದಗ 15 : ಯೋಗಿ ಆದಿತ್ಯನಾಥ್ ಸರ್ಕಾರದ ಆಡಳಿತದ ಮೂಗಿನ ಕೆಳಗೆಯೇ ರಾಮನ ಭಕ್ತರ ದೇಣಿಗೆಗೆ ಕನ್ನ ಬಿದ್ದಿರುವುದು ಅವರ ಆಡಳಿತದ ಸಂಪೂರ್ಣ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ದೇವಸ್ಥಾನದ ಕಾಣಿಕೆಯನ್ನು ರಕ್ಷಿಸಲಾಗದ ಅವರು, ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯುವ ನೈತಿಕ ಹಕ್ಕನ್ನು ಕಳೆದುಕೊಂಡಿದ್ದು, ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಗದಗ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ ಆಗ್ರಹಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ದೇಣಿಗೆ ಹಣ ಕೇವಲ ಲಕ್ಷಗಳಲ್ಲಿ ಕಾಣೆಯಾಗಿಲ್ಲ, ಬದಲಾಗಿ 4,500 ಕೋಟಿ ರೂಪಾಯಿಗೂ ಹೆಚ್ಚು ಹಣ ಲೂಟಿಯಾಗಿದೆ. ರಾಮನ ಭಕ್ತರ ಕಷ್ಟಾರ್ಜಿತ ಹಣ ಸಾವಿರಾರು ಕೋಟಿಗಟ್ಟಲೆ ಲೂಟಿಯಾಗುತ್ತಿದ್ದರೆ, ಇದರ ಹೊಣೆ ಹೊರುವ ಕನಿಷ್ಠ ನೈತಿಕತೆಯಾದರೂ ನಿಮಗಿದೆಯೇ? ಎಂದು ಪ್ರಶ್ನಿಸಿದ್ದಾರೆ.

ತಿಂಗಳಿಗೆ 20,000 ರೂಪಾಯಿ ಸಂಬಳ ಪಡೆಯುವ ಸಿಬ್ಬಂದಿ ಇದ್ದಕ್ಕಿದ್ದಂತೆ 1.5 ಕೋಟಿ ಮೌಲ್ಯದ ಆಸ್ತಿ ಖರೀದಿಸುತ್ತಿದ್ದರೂ ಗಮನಿಸದ ಬಿಜೆಪಿ ನಾಯಕರ ನಡೆ, ಅವರೇ ದೇವಸ್ಥಾನದ ಕಾಣಿಕೆಯನ್ನು ಹಂಚಿ ತಿಂದಿದ್ದಾರೆ ಎಂಬ ಮಾತಿಗೆ ಸಾಕ್ಷಿಯಾಗಿದೆ. ಬಡ ನೌಕರನಿಗೆ ಇಷ್ಟೊಂದು ಆಸ್ತಿ ಎಲ್ಲಿಂದ ಬಂತು ಎಂದು ಕೇಳುವ ನೈತಿಕತೆಯೂ ಈ ನಾಯಕರಿಗೆ ಇಲ್ಲದಂತಾಗಿದೆ ಎಂದು ಟೀಕಿಸಿದ್ದಾರೆ. 40 ಸಿಬ್ಬಂದಿಯನ್ನು ವಜಾ ಮಾಡಿ ಪ್ರಕರಣ ಮುಚ್ಚಿಹಾಕಲು ಹೊರಟಿರುವ ಬಿಜೆಪಿ ನಾಯಕರು, ಲೂಟಿಯ ಹಿಂದಿರುವ ದೊಡ್ಡ ತಿಮಿಂಗಿಲಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ. ಸಿಬ್ಬಂದಿಗಳ ಮನೆಗಳಲ್ಲಿ ನಗದು ಪತ್ತೆಯಾಗಿದ್ದರೂ, ಇದರ ಮಾಸ್ಟರ್ ಮೈಂಡ್ ಯಾರು ಎಂಬ ಸತ್ಯವನ್ನು ಮರೆಮಾಚುವ ಇವರ ನಡವಳಿಕೆ ನಾಚಿಕೆಗೇಡಿನ ಸಂಗತಿಯಾಗಿದೆ.ಚಿನ್ನ, ಬೆಳ್ಳಿ ಮತ್ತು ವಜ್ರದ ಒಡವೆಗಳ ಅಧಿಕೃತ ಇನ್ವೆಂಟರಿ ಮತ್ತು ತೂಕದ ದಾಖಲೆಗಳಲ್ಲಿ ಭಾರಿ ವ್ಯತ್ಯಾಸವಿರುವುದನ್ನು ಎಸ್‌ಐಟಿ ಪತ್ತೆಹಚ್ಚಿದೆ.