ಕೊಪ್ಪಳ 18: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಜೂನ್ 16 ರಂದು ಕೊಪ್ಪಳ ನಗರ ಪ್ರದೇಶದ ಹಮಾಲರ ಕಾಲೋನಿಯಲ್ಲಿರುವ ನಮ್ಮ ಕ್ಲಿನಿಕ್ನಲ್ಲಿ ಅತಿಸಾರಭೇದಿ ನಿಯಂತ್ರಣ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳಾದ ಡಾಽಽ ಪ್ರಕಾಶ ವಿ. ಅವರು ಮಾತನಾಡಿ, ಪ್ರಪಂಚದಲ್ಲಿ ಅತಿಸಾರ ಭೇದಿಯಿಂದ 5 ವರ್ಷದೊಳಗಿನ ಮಕ್ಕಳ ಮರಣವನ್ನು ಸೊನ್ನೆಗೆ(0) ತರುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಚರಿಸಲಾಗುತ್ತದೆ. ಕಲುಷಿತ ನೀರು/ಆಹಾರ ಸೇವನೆಯಿಂದ, ಕೈತೊಳೆಯದೇ ಊಟ ಮಾಡುವುದರಿಂದ ಅತಿಸಾರ ಭೇದಿ ಉಂಟಾಗುತ್ತದೆ. ಅತಿಸಾರ ಭೇದಿಯಿಂದ ಮಕ್ಕಳನ್ನು ರಕ್ಷಿಸಲು ಸಾಬೂನು ಮತ್ತು ನೀರಿನಿಂದ ಕೈಗಳನ್ನು ಚೆನ್ನಾಗಿ ತೊಳೆಯಬೇಕು. ಕುಡಿಯಲು ಶುದ್ಧವಾದ ಮತ್ತು ಸುರಕ್ಷಿತ ನೀರನ್ನೇ ಬಳಸಬೇಕು. ನಿಮ್ಮ ಮನೆಯ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳಬೇಕು, ಕಡ್ಡಾಯವಾಗಿ ಎಲ್ಲರೂ ಶೌಚಾಲಯ ಬಳಸಬೇಕು. ಮಕ್ಕಳಿಗೂ ಸಹ ಶೌಚಾಲಯ ಬಳಸುವ ರೂಢಿ ಮಾಡಬೇಕು ಎಂದು ಹೇಳಿದರು.
ನವಜಾತ ಶಿಶುಗಳಿಗೆ 06 ತಿಂಗಳವರೆಗೆ ಕೇವಲ ತಾಯಿಯ ಎದೆ ಹಾಲು ನೀಡಬೇಕು. 06 ತಿಂಗಳ ನಂತರ ಪೂರಕ ಪೌಷ್ಠಿಕ ಆಹಾರ ನೀಡಬೇಕು. ಮಕ್ಕಳಿಗೆ ಪೋಷಕಾಂಶಗಳನ್ನು ಒಳಗೊಂಡ ಪೂರಕ ಆಹಾರ ನೀಡಬೇಕು, ಲಸಿಕೆ ಹಾಕಿಸಬೇಕು ಮತ್ತು ವಿಟಮಿನ್-ಎ ಪೂರಕ ದ್ರಾವಣ ಕೊಡಬೇಕು. ಮಕ್ಕಳಿಗೆ ಅತಿಸಾರ ಭೇದಿ ಉಂಟಾದಾಗ ಒಆರ್ಎಸ್ ದ್ರಾವಣ ಮತ್ತು ಝಿಂಕ್ ಮಾತ್ರೆಯನ್ನು ವಯಸ್ಸಿಗನುಗುಣವಾಗಿ ಕೊಡಬೇಕು ಒಆರ್ಎಸ್ ದ್ರಾವಣ ಜೀವಜಲವಾಗಿದ್ದು ತಪ್ಪದೇ ನೀಡುವಂತೆ ಕರೆ ನೀಡಿದರು. ಅತಿಸಾರ ಭೇದಿ ಉಂಟಾದರೆ ಯಾವುದೇ ಕಾರಣಕ್ಕೂ ನಿರ್ಲಕ್ಷ ಮಾಡಬಾರದು. ಹತ್ತಿರದ ಸರಕಾರಿ ಆಸ್ಪತ್ರೆ ಹಾಗೂ ಆಶಾ ಕಾರ್ಯಕರ್ತೆ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳನ್ನಾಗಲಿ, ಆರೋಗ್ಯ ಸಿಬ್ಬಂದಿಗಳನ್ನು ಭೇಟಿ ಮಾಡಲು ತಿಳಿಸಿದರು.
ನಮ್ಮ ಕ್ಲಿನಿಕ್ ವೈದ್ಯಾಧಿಕಾರಿಗಳಾದ ಡಾ.ಅಕ್ಷತಾ ಇವರು ತಾಯಿಯ ಎದೆ ಹಾಲಿನ ಮಹತ್ವದ ಬಗ್ಗೆ ಹಾಗೂ ಮಕ್ಕಳ ಆರೈಕೆ ಕುರಿತು ವಿವರವಾಗಿ ಮಾತನಾಡಿದರು. ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಾಥಮಿಕ ಆರೋಗ್ಯ ಸುಕರಾ್ಷಧಿಕಾರಿ ಸವಿತಾ ಇವರು ಒಆರ್ಎಸ್ ದ್ರಾವಣ ತಯಾರಿಸುವ ಮತ್ತು ಉಪಯೋಗಿಸುವ ಬಗ್ಗೆ ಪ್ರಾತ್ಯಕ್ಷಿಕೆ ತೋರಿಸಿದರು.
ಕಾರ್ಯಕ್ರಮದಲ್ಲಿ ತಾಲೂಕಾ ಆರೋಗ್ಯಾಧಿಕಾರಿಗಳಾದ ಡಾಽಽ ರಾಮಾಂಜನೇಯ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿಗಳಾದ ಡಾಽಽ ಮಹೇಶ ಉಮಚಗಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಶಿವಾನಂದ ವ್ಹಿ.ಪಿ, ಜಿಲ್ಲಾ ಕಾರ್ಯಕ್ರಮ ಸಲಹೆಗಾರರಾದ ಜೈಹಿಂದ್, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು, ಶುಶ್ರೂಷಣಾಧಿಕಾರಿಗಳು, ಆಶಾ/ಅಂಗನವಾಡಿ ಕಾರ್ಯಕರ್ತೆಯರು, ಗರ್ಭಿಣಿಯರು, ಬಾಣಂತಿಯರು, ತಾಯಂದಿರು ಮತ್ತು ನಮ್ಮ ಕ್ಲಿನಿಕ್/ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು, ನಾಗರೀಕರು ಭಾಗವಹಿಸಿದ್ದರು.