ವಿಜ್ಞಾನ ಕ್ಷೇತ್ರದಲ್ಲಿ ಭಾರತದ ಸಾಧನೆ ಅನನ್ಯ: ಪ್ರೊ. ನಿರಂಜನ್

India's achievements in the field of science are unique: Prof. Niranjan

ಬೆಳಗಾವಿ 14: ಸ್ವಾತಂತ್ರ್ಯೋತ್ತರ ನಂತರ ಭಾರತವು ವೈದ್ಯಕೀಯ, ಬಾಹ್ಯಾಕಾಶ, ಮಾಹಿತಿ ಮತ್ತು ತಂತ್ರಜ್ಞಾನ, ಕೃಷಿ, ಅಣು ವಿಜ್ಞಾನ ಸೇರಿದಂತೆ ಹಲವಾರು ಆಯಾಮಗಳಲ್ಲಿ ವೈಜ್ಞಾನಿಕ ಸಾಧನೆ ಮೆರೆದಿದೆ ಎಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಪ್ರೊ. ಎಸ್‌.ಆರ್‌. ನಿರಂಜನ್ ಹೇಳಿದರು.  

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುವೆಂಪು ಸಭಾಭವನದಲ್ಲಿ ಬುಧವಾರ ಜರುಗಿದ ಸಂಸ್ಥಾಪನ ದಿನದ ನಿಮಿತ್ತ ಸರಣಿ ಉಪನ್ಯಾಸ ಮಾಲಿಕೆ ಭಾರತ ಸ್ವಾತಂತ್ರ್ಯೋತ್ತರದ ನಂತರದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಗತಿ ವಿಷಯದ ಕುರಿತಾಗಿ ಮಾತನಾಡಿದರು.  

1947ರಲ್ಲಿ ಭಾರತ ಸ್ವಾತಂತ್ರ್ಯ ಪಡೆದಾಗ, ದೇಶದಲ್ಲಿ ಮೂಲ ಸೌಕರ್ಯಗಳ ಕೊರತೆಯ ಜೊತೆಗೆ ಆಹಾರದ ಕೊರತೆ ಕೂಡಾ ಭಾರತ ಎದುರಿಸುತ್ತಿತ್ತು. ಕೃಷಿ ವಿಜ್ಞಾನಿ ಎಂ.ಎಸ್‌. ಸ್ವಾಮಿನಾಥನ ಅವರ ಶ್ರಮದ ಫಲವಾಗಿ ದೇಶದಲ್ಲಿ ಹಸಿರು ಕ್ರಾಂತಿಯಿಂದ ಆಹಾರ ಉತ್ಪಾದನೆ ಹೆಚ್ಚಾಯಿತು. 50 ಮಿಲಿಯನ್ ಟನ್ ಉತ್ಪಾದನೆಯಿಂದ ಸದ್ಯ 300 ಮಿಲಿಯನ್ ಟನ್ ಆಹಾರ ಧ್ಯಾನಗಳನ್ನು ಭಾರತದ ಬೆಳೆಯುವುದರ ಮೂಲಕ ಆಹಾರ ಕ್ಷೇತ್ರದಲ್ಲಿ ಸ್ವಾವಲಂಬನೆ ಹೊಂದಿದೆ ಎಂದರು. ಭಾರತ ಸ್ವಾತಂತ್ರ್ಯ ಪಡೆದಾಗ ದೇಶದಲ್ಲಿ ಕೇವಲ ನಾಲ್ಕು ಐಐಐಟಿ ಶಿಕ್ಷಣ ಸಂಸ್ಥೆಗಳಿದ್ದವು. ಆದರೆ ಇಂದು 20ಕ್ಕೂ ಹೆಚ್ಚು ಐಐಐಟಿಗಳು ಇಂದು ಕಾರ್ಯನಿರ್ವಹಿಸುತ್ತಿವೆ. ಬೆರಳೆಣಿಯಷ್ಟಿದ್ದ ವಿಶ್ವವಿದ್ಯಾಲಯಗಳು ಇಂದು 1200ಕ್ಕೂ ಹೆಚ್ಚು ವಿವಿಗಳು ಮತ್ತು 45 ಸಾವಿರ ಪದವಿ ಕಾಲೇಜುಗಳು ಭಾರತದಲ್ಲಿವೆ. ಸಂಶೋಧನಾ ಲೇಖನ ಪ್ರಕಟಿಸುವಲ್ಲಿ ಭಾರತ 4ನೇ ಸ್ಥಾನ ಪಡೆದಿದೆ. ದೇಶದಲ್ಲಿ ಉನ್ನತ ಶಿಕ್ಷಣ ಪಡೆಯುವವರ ಸಂಖ್ಯೆ ಮತ್ತು ಸಂಶೋಧನೆಗಳ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದನ್ನು ಸಂತಸದ ಸಂಗತಿ ಎಂದರು.  

ಅಂತರಿಕ್ಷ, ಬಾಹ್ಯಕಾಶ, ಅಣು ವಿಜ್ಞಾನ, ಕ್ಷಿಪಣಿಗಳ ತಯಾರಿಕೆಯಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಈ ಎಲ್ಲ ಕ್ಷೇತ್ರದಲ್ಲಿ ಭಾರತ ಬಹಳಷ್ಟು ಪ್ರಗತಿ ಹೊಂದಿದೆ. ಆದರೆ ಇದರ ಜೊತೆಗೆ ಭಾರತ ಅನೇಕ ಸವಾಲುಗಳನ್ನು ಕೂಡಾ ಎದುರಿಸತ್ತಿದೆ. 2018ರಲ್ಲಿ ಭಾರತದ 13 ಲಕ್ಷ ಪ್ರತಿಭಾವಂತರು ಕೆಲಸಕ್ಕಾಗಿ ವಿದೇಶಕ್ಕೆ ತೆರಳಿದ್ದರೆ, 2023ರಲ್ಲಿ 18 ಲಕ್ಷ ಯುವಕರು ವಿದೇಶಕ್ಕೆ ಹೋಗಿದ್ದಾರೆ. ಈ ಪ್ರತಿಭಾ ಪಲಾಯನ ತಡೆಯುವ ನಿಟ್ಟಿನಲ್ಲಿ ಸೂಕ್ತ ಕಾಳಜಿ ವಹಿಸುವ ಅವಶ್ಯಕತೆಯಿದೆ ಎಂದರು. 60 ಕೋಟಿ ಯುವಕರು ತಮ್ಮ ಜವಾಬ್ದಾರಿ ಅರಿತು, ದೇಶದ ಹಿತದ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದರೆ ಮುಂದಿನ ದಿನಗಳಲ್ಲಿ ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಬಹಳಷ್ಟು ಸಾಧನೆ ಗೈಯುವುದರಲ್ಲಿ ಎರಡು ಮಾತಿಲ್ಲ. ಬಹುಶೀಸ್ತಿನ ಮತ್ತು ಅಂತರ್‌ಶಿಸ್ತೀನ ಅಧ್ಯಯನಕ್ಕೆ ಎಲ್ಲರೂ ಅದ್ಯತೆ ನೀಡಬೇಕು. ವಿಜ್ಞಾನ, ಸಾಮಾಜಿಕ ವಿಜ್ಞಾನ, ಭಾಷೆ, ಸಂವಹನ, ವಾಣಿಜ್ಯ ಮತ್ತು ತಂತ್ರಜ್ಞಾನ ಈ ಎಲ್ಲ ವಿಷಯಗಳ ಕುರಿತಾದ ಎಲ್ಲರಿಗೂ ಜ್ಞಾನ ಹೊಂದುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದಾಗ ಮಾತ್ರ ಭಾರತ ಶಕ್ತಿಶಾಲಿಯಾಗುವುದು ಎಂದರು. 

ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ. ಸಿ.ಎಂ. ತ್ಯಾಗರಾಜ ಅವರು ಮಾತನಾಡಿ, ಜ್ಞಾನವು ಕೂಡಾ ಜನ್ಮ ನೀಡಿದ ತಾಯಿಯಷ್ಟೆ ಸಮಾನವಾಗಿರುತ್ತದೆ. ತಾಯಿಯು ಮಗುವನ್ನು ಪೋಷಿಸುವಂತೆ, ಒಬ್ಬ ವ್ಯಕ್ತಿಯ ಜ್ಞಾನವು ಆ ವ್ಯಕ್ತಿಯ ಬೆಳವಣಿಗೆಗೆ ಕಾರಣವಾಗುತ್ತದೆ. ಆದ್ದರಿಂದ ತಾಯಿಗೆ ನೀಡಿದಷ್ಟೆ ಮಹತ್ವವನ್ನು ಜ್ಞಾನ ಸಂಪಾದನೆಗೆ ನೀಡಬೇಕು ಎಂದರು. ಆರ್‌ಸಿಯು ಹೊಸ ಕ್ಯಾಂಪಸ್ ಸಿದ್ಧಗೊಂಡಿದೆ. ಮುಂಬರುವ ದಿನಗಳಲ್ಲಿ ನೂತನ ಕ್ಯಾಂಪಸ್‌ಗೆ ವಿಜ್ಞಾನ ನಿಕಾಯದ ವಿಭಾಗಗಳು ಹೊಸ ಕ್ಯಾಂಪಸ್‌ನಲ್ಲಿ ಕಾರ್ಯನಿರ್ವಹಿಸಲಿವೆ. ಸಂಶೋಧನೆ ಮತ್ತು ಅಧ್ಯಯನಕ್ಕೆ ಹೆಚ್ಚಿನ ಆದ್ಯತೆಗಳನ್ನು ವಿದ್ಯಾರ್ಥಿಗಳು ನೀಡಬೇಕು ಎಂದರು. ಈ ಸಂದರ್ಭದಲ್ಲಿ ಕುಲಸಚಿವರಾದ ಸಂತೋಷ ಕಾಮಗೌಡ, ಹಣಕಾಸು ಅಧಿಕಾರಿ ಎಂ.ಎ. ಸಪ್ನಾ, ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ಸಂಶೋಧನಾರ್ಥಿಗಳು ಹಾಜರಿದ್ದರು. ಪವಿತ್ರಾ ನೂಲಿ ಪ್ರಾರ್ಥಿಸಿದರು. ಪ್ರೊ. ವಿನಾಯಕ ಬಂಕಾಪುರ ಸ್ವಾಗತಿಸಿದರು. ಪ್ರೊ. ಬಸವರಾಜ ಪದ್ಮಶಾಲಿ ಪರಿಚಯಿಸಿದರು. ಡಾ.ಗಜಾನನ ನಾಯ್ಕ್‌ ನಿರೂಪಿಸಿದರು. ಪ್ರೊ. ಎಸ್‌.ಸಿ. ಪಾಟೀಲ ವಂದಿಸಿದರು.