ಮಹಿಳಾ ವಿವಿ ಮಹತ್ತರ ಸಾಧನೆ- ಮಾಜಿ ಕುಲಪತಿ ಪ್ರೊ.ಮೀನಾ ಚಂದಾವರಕರ ಪ್ರಶಂಸೆ
Great achievement of Women's University- Ex-Chancellor Prof. Meena Chandavaraka praised
ಲೋಕದರ್ಶನ ವರದಿ
ವಿಜಯಪುರ 05 : ಕಳೆದ 10 ವರ್ಷಗಳ ಅವಧಿಯಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಮಹತ್ತರ ಸಾಧನೆ ಮಾಡಿದ್ದು ಪ್ರಗತಿ ಪಥದತ್ತ ಸಾಗುತ್ತಿದೆ ಎಂದು ಮಾಜಿ ಕುಲಪತಿ ಹಾಗೂ ಟ್ರಿಪಲ್ ಎ ಉನ್ನತ ಮಟ್ಟದ ತಜ್ಞರ ತಂಡದ ಮುಖ್ಯಸ್ಥೆ ಪ್ರೊ.ಮೀನಾ ಚಂದಾವರಕರ ಸಂತಸ ವ್ಯಕ್ತಪಡಿಸಿದರು. ಇಲ್ಲಿಯ ಮಹಿಳಾ ವಿಶ್ವವಿದ್ಯಾನಿಲಯದ ಮುಖ್ಯ ಅವರಣದಲ್ಲಿ ಕಳೆದ ಎರಡು ದಿನಗಳಿಂದ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಪರೀಶೀಲನೆ ನಡೆಸಿದ ನಂತರ ಮಂಗಳವಾರ ನಡೆದ ಎಎಎ ಕಮಿಟಿಯ ನಿರ್ಗಮನ ಸಭೆಯಲ್ಲಿ ಮಾತನಾಡಿದರು.
ಮಹಿಳಾ ವಿಶ್ವವಿದ್ಯಾನಿಲಯ ಭೌತಿಕವಾಗಿ, ಶೈಕ್ಷಣಿಕವಾಗಿ ಮತ್ತು ಮೂಲಸೌಕರ್ಯಗಳ ದೃಷ್ಟಿಯಿಂದ ಸಾಕಷ್ಟು ಪ್ರಗತಿ ಸಾಧಿಸಿದೆ. ಹಲವಾರು ಸಮಸ್ಯೆಗಳು ಮತ್ತು ಸವಾಲುಗಳ ಮಧ್ಯೆಯೂ ಈ ಸಾಧನೆ ಮಾಡಿರುವುದು ಅತ್ಯಂತ ಪ್ರಶಂಸನೀಯ ಎಂದು ಅವರು ಹೇಳಿದರು. ಮಹಿಳಾ ವಿಶ್ವವಿದ್ಯಾನಿಲಯ ಪ್ರಗತಿ ಪಥದತ್ತ ಸಾಗುತ್ತಿದ್ದರೂ ಇನ್ನೂ ಹಲವಾರು ಸಮಸ್ಯೆ ಮತ್ತು ಸವಾಲುಗಳಿವೆ. ಇವುಗಳಲ್ಲಿ ಮುಖ್ಯವಾಗಿ ಇತ್ತೀಚಿನ ವರ್ಷಗಳಲ್ಲಿ ಖಾಯಂ ಬೋಧಕರ ಹುದ್ದೆ ಬಹಷ್ಟು ಖಾಲಿ ಉಳಿದಿದ್ದು ಈ ಕಾರ್ಯಭಾರವನ್ನು ಅತಿಥಿ ಉಪನ್ಯಾಸಕರು ನಿಭಾಯಿಸುತ್ತಿದ್ದಾರೆ. ಇದು ಶೈಕ್ಷಣಿಕ ಗುಣಮಟ್ಟದ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತಿದೆ. ಆದ್ದರಿಂದ ಆದಷ್ಟು ಬೇಗ ಬೋಧಕ ಹಾಗೂ ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಲು ವಿಶ್ವವಿದ್ಯಾನಿಲಯದ ಆಡಳಿತ ಮುಂದಾಗಬೇಕು ಎಂದು ಅವರು ಸಲಹೆ ನೀಡಿದರು.
ಮಹಿಳಾ ವಿವಿಯ ಕೆಲವು ವಿಭಾಗಗಳಲ್ಲಿ ವಿದ್ಯಾರ್ಥಿನಿಯರ ಪ್ರವೇಶ ಕಡಿಮೆ ಇದ್ದು ಈ ವಿಭಾಗಗಳಲ್ಲಿ ವಿದ್ಯಾರ್ಥಿನಿಯರು ಹೆಚ್ಚಿನ ಪ್ರಮಾಣದಲ್ಲಿ ಪ್ರವೇಶ ಪಡೆದುಕೊಳ್ಳಲು ಅಗತ್ಯ ಕ್ರಮಗಳನ್ನು ಕೈಕೊಳ್ಳಬೇಕು. ವಿವಿಯ ಮುಖ್ಯ ಆವರಣದಲ್ಲಿ ಆರಂಭಿಸಿರುವ ಸ್ನಾತಕ ಪದವಿ ಕೋರ್ಸ್ಗಳಿಗೆ ಬೇಡಿಕೆ ಹೆಚ್ಚುತ್ತಿರುವುದರಿಂದ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕ್ರಮ ಕೈಕೊಳ್ಳಬೇಕು ಎಂದೂ ಅವರು ಸಲಹೆ ಮಾಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ಮಾತನಾಡಿ, ಕಳೆದ ಎರಡು ದಿನಗಳಲ್ಲಿ, ನಮ್ಮ ವಿವಿಯ ಆವರಣದಲ್ಲಿ ಟ್ರಿಪಲ್ ಎ ತಂಡದ ಭೇಟಿಯು ಪ್ರೋತ್ಸಾಹದಾಯಕ ಮತ್ತು ಸ್ಪೂರ್ತಿದಾಯಕವಾಗಿತ್ತು. ನಮ್ಮ ಅಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಆಡಳಿತ ತಂಡಗಳೊಂದಿಗಿನ ನಡೆಸಿದ ಸಂವಹನವು ನಮ್ಮ ಸಾಧನೆಗಳನ್ನು ಪ್ರಸ್ತುತಪಡಿಸಲು ನಮಗೆ ಅವಕಾಶವನ್ನು ಒದಗಿಸಿದೆ, ಜೊತೆಗೆ ನಮ್ಮ ಅತ್ಯುತ್ತಮ ಅಭ್ಯಾಸಗಳು, ಆಡಳಿತ, ವಿಸ್ತರಣಾ ಚಟುವಟಿಕೆಗಳು, ವ್ಯವಸ್ಥೆಗಳು ಮತ್ತು ಭವಿಷ್ಯದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಪ್ರತಿಬಿಂಬಿಸಲು ನಮಗೆ ಅವಕಾಶ ಮಾಡಿಕೊಟ್ಟಿದೆ ಎಂದರು.
ನಮ್ಮ ವಿಶ್ವವಿದ್ಯಾನಿಲಯವು ಯಾವಾಗಲೂ ಶಿಕ್ಷಣ, ಸಂಶೋಧನೆ ಮತ್ತು ವಿಸ್ತರಣಾ ಸೇವೆಗಳನ್ನು ಅತ್ಯಂತ ಗಂಭೀರವಾಗಿ ಮುನ್ನಡೆಸುವ ತನ್ನ ಪ್ರಮುಖ ಧ್ಯೇಯಕ್ಕೆ ಬದ್ಧವಾಗಿದೆ, ವಿಶೇಷವಾಗಿ ಎಲ್ಲಾ ಅಂಶಗಳಲ್ಲಿ ಮಹಿಳೆಯರನ್ನು ಸಬಲೀಕರಣಗೊಳಿಸುವತ್ತ ಗಮನಹರಿಸುತ್ತದೆ. ಶಿಕ್ಷಣವು ಪರಿವರ್ತಕ ಶಕ್ತಿಯಾಗಿದೆ ಎಂಬ ನಂಬಿಕೆಯಲ್ಲಿ ನಮ್ಮ ದೃಷ್ಟಿಕೋನ ಬೇರೂರಿದೆ - ಅದು ವ್ಯಕ್ತಿಗಳನ್ನು ಉನ್ನತೀಕರಿಸಬಹುದು, ಸಮುದಾಯಗಳನ್ನು ಬಲಪಡಿಸಬಹುದು ಮತ್ತು ರಾಷ್ಟ್ರೀಯ ಅಭಿವೃದ್ಧಿಗೆ ಅರ್ಥಪೂರ್ಣವಾಗಿ ಕೊಡುಗೆ ನೀಡಬಹುದು ಎಂಬುದು ನಮ್ಮ ವಿಶ್ವವಿದ್ಯಾನಿಲಯದ ಧ್ಯೇಯವಾಗಿದೆ ಎಂದು ಅವರು ಪ್ರತಿಪಾದಿಸಿದರು.
ಟ್ರ್ರಿಪಲ್ ಎ ತಂಡದ ಭೇಟಿಯ ಸಮಯದಲ್ಲಿ, ನಮ್ಮ ಶೈಕ್ಷಣಿಕ ಕಾರ್ಯಕ್ರಮಗಳು, ಸಂಶೋಧನಾ ಉಪಕ್ರಮಗಳು, ವಿಸ್ತರಣಾ ಚಟುವಟಿಕೆಗಳು ಮತ್ತು ವಿದ್ಯಾರ್ಥಿ ಬೆಂಬಲ ವ್ಯವಸ್ಥೆಗಳನ್ನು ಪ್ರದರ್ಶಿಸಲು ನಮಗೆ ಅವಕಾಶ ಸಿಕ್ಕಿತು. ನಾವೀನ್ಯತೆ, ವಿಮರ್ಶಾತ್ಮಕ ಚಿಂತನೆ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಪೋಷಿಸುವ ರೋಮಾಂಚಕ ಶೈಕ್ಷಣಿಕ ವಾತಾವರಣವನ್ನು ನಿರ್ಮಿಸುವಲ್ಲಿ ನಾವು ಇತ್ತೀಚಿನ ವರ್ಷಗಳಲ್ಲಿ ಸಾಧಿಸಿರುವ ಪ್ರಗತಿಯ ಬಗ್ಗೆ ನಮಗೆ ಹೆಮ್ಮೆ ಇದೆ ಎಂದು ಕುಲಪತಿ ಪ್ರೊ.ವಿಜಯಾ ತಿಳಿಸಿದರು.
ಟ್ರ್ರಿಪಲ್ ಎ ತಂಡದ ಅವಲೋಕನಗಳು, ಒಳನೋಟಗಳು ಮತ್ತು ಶಿಫಾರಸುಗಳು ನಮಗೆ ಅಮೂಲ್ಯವಾಗಿವೆ. ಈ ರೀತಿಯ ಬಾಹ್ಯ ಮೌಲ್ಯಮಾಪನವು ನಮ್ಮ ವಿವಿಯ ಸಾಮರ್ಥ್ಯಗಳನ್ನು ಗುರುತಿಸಲು, ಅಂತರವನ್ನು ನಿವಾರಿಸಲು ಮತ್ತು ವಿಕಸನಗೊಳ್ಳುತ್ತಿರುವ ಶೈಕ್ಷಣಿಕ ಮತ್ತು ಸಾಮಾಜಿಕ ನೀರೀಕ್ಷೆಗಳೊಂದಿಗೆ ನಮ್ಮನ್ನು ಹೊಂದಿಸಿಕೊಳ್ಳಲು ಸಹಾಯ ಮಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಟ್ರ್ರಿಪಲ್ ಎ ತಂಡದ ಪ್ರತಿಕ್ರಿಯೆಯನ್ನು ನಾವು ಎಚ್ಚರಿಕೆಯಿಂದ ಪರಿಗಣಿಸುತ್ತೇವೆ ಮತ್ತು ಅರ್ಥಪೂರ್ಣ ಸುಧಾರಣೆಗಳನ್ನು ಕಾರ್ಯಗತಗೊಳಿಸಲು ನಿಶ್ಚಿತ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಅವರು ಭರವಸೆ ನೀಡಿದರು.
ನಿರ್ಗಮನ ಸಭೆಯಲ್ಲಿ ಎಎಎ ಕಮಿಟಿಯ ಸದಸ್ಯರಾದ ಕಲಬುರಗಿ ವಿಶ್ವವಿದ್ಯಾನಿಲಯದ ಗಣಿತ ಅಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕ ಪ್ರೊ.ಎನ್.ಬಿ.ನಡವಿನಮನಿ, ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ.ಬಿ.ಎಚ್.ನಾಗೂರ ಮತ್ತು ಕಲಬುರಗಿಯ ಕೇಂದ್ರೀಯ ವಿಶ್ವವಿದ್ಯಾನಿಲಯದ ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕ ಪ್ರೊ.ಬಸವರಾಜ ಡೋಣೂರು, ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಬಿ.ಎಲ್.ಲಕ್ಕಣ್ಣವರ, ಆರ್ಥಿಕ ಅಧಿಕಾರಿ ರಾಮಣ್ಣ ಅಥಣಿ, ಐಕ್ಯುಎಸಿ ನಿರ್ದೇಶಕಿ ಪ್ರೊ.ಶಾಂತಾದೇವಿ, ಡೀನರುಗಳು, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಬೋಧಕ ಸಿಬ್ಬಂದಿ ಉಪಸ್ಥಿತರಿದ್ದರು.
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ 