ಮಹಿಳೆಯರಿಗೆ ಉಚಿತ ಅಣಬೆ ಬೇಸಾಯ ತರಬೇತಿ
ಬಳ್ಳಾರಿ 05: ಮಹಿಳೆಯರು ಬಿಡುವಿನ ಸಮಯದಲ್ಲಿ ತಮ್ಮ ಮನೆಗಳಲ್ಲಿ ಅಣಬೆ ಬೇಸಾಯ ಮಾಡಬಹುದಾಗಿದ್ದು, ಇದರಿಂದ ತಮ್ಮ ಕುಟುಂಬ ನಿರ್ವಹಣೆಗೆ ಆರ್ಥಿಕ ವೃದ್ಧಿಯಾಗುವುದು ಎಂದು ಜಿಲ್ಲಾ ಪಂಚಾಯತ್ನ ಉಪಕಾರ್ಯದರ್ಶಿ ಗಿರಿಜಾ ಶಂಕರ್ ಅವರು ಹೇಳಿದರು. ಶನಿವಾರ, ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ಆವರಣದಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ರಚಿಸಿರುವ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟಗಳ ಮಹಿಳೆಯರಿಗೆ ಆಯೋಜಿಸಿದ್ದ 10 ದಿನಗಳ ಉಚಿತ ಅಣಬೆ ಬೇಸಾಯ ತರಬೇತಿ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.ಕಾರ್ಯಕ್ರಮದಲ್ಲಿ ಗ್ರಾಮೀಣ ಭಾಗದ ಗ್ರಾಮ ಪಂಚಾಯತ್ ಒಕ್ಕೂಟಗಳಿಂದ ನಿರ್ವಹಿಸುತ್ತಿರುವ ಘನ ತ್ಯಾಜ ನಿರ್ವಹಣಾ ಘಟಕಗಳ ವಾಹನ ಚಾಲನಾ ತರಬೇತಿ ಪಡೆದ ಸ್ವ- ಸಹಾಯ ಗುಂಪಿನ ಮಹಿಳೆಯರಿಗೆ ಡ್ರೈವಿಂಗ್ ಲೈಸೆನ್ಸಗಳನ್ನು ವಿತರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ನ ಮುಖ್ಯ ಯೋಜನಾಧಿಕಾರಿ ವಾಗೀಶ್ ಶಿವಾಚಾರ್ಯ, ಯೋಜನಾ ನಿರ್ದೇಶಕ ವಿನೋದ್, ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕ ರಾಜೆಸಾಬ್ ಎಚ್.ಎರಿಮನಿ, ಜಿಪಂ ನ ಸಂಪನ್ಮೂಲ ವ್ಯಕ್ತಿ ರಾಮಚಂದ್ರ ರಾಜಾಪೂರ, ಎನ್ಆರ್ಎಲ್ಎಂ ನ ಸಿಬ್ಬಂದಿಗಳಾದ ರಾಜೇಂದ್ರ, ವಿಜಯ ಕುಮಾರ, ರಘುವರ್ಮ, ಉಪನ್ಯಾಸಕಾರದ ಜಡೇಪ್ಪ, ದಿನೇಶ, ಸಿದ್ದಲಿಂಗಮ್ಮ, ಸಂತೋಷ ಕುಮಾರ್ ಸೇರಿದಂತೆ ಸಿರುಗುಪ್ಪ ತಾಲ್ಲೂಕಿನ 55 ಜನ ಶಿಭಿರಾರ್ಥಿಗಳು ಭಾಗವಹಿಸಿದ್ದರು.