ಹೊಸಮಠದಲ್ಲಿ ಶೂನ್ಯ ಫೌಂಡೇಷನ್ ಜಂಟಿ ಆಶ್ರಯದಲ್ಲಿ ಜರುಗಿದ ಬಸವ ಜಯಂತಿ ಹಾಗೂ ಕಾಯಕ ದಿನಾಚರಣೆ
ಹಾವೇರಿ 05 :ನಿಂದಿಸುವ ಮತ್ತು ಸ್ತುತಿಸುವ ಇಬ್ಬರನ್ನೂ ಹೊಂದಿರುವ ಸಮಾಜದಲ್ಲಿ ನಮ್ಮನ್ನು ನಾವು ಆತ್ಮಾವಲೋಕನ ಮಾಡಿಕೊಳ್ಳುವಂತೆ ಪ್ರೇರೇಪಿಸಿದವರು ವಿಶ್ವಗುರು ಬಸವಣ್ಣನವರು ಎಂದು ಹೊಸಮಠದ ಶಾಂತಲಿಂಗ ಸ್ವಾಮೀಜಿ ಹೇಳಿದರು. ಇಲ್ಲಿನ ಬಸವಕೇಂದ್ರ ಶ್ರೀಹೊಸಮಠದಲ್ಲಿ ಶೂನ್ಯ ಫೌಂಡೇಷನ್ ಜಂಟಿ ಆಶ್ರಯದಲ್ಲಿ ಜರುಗಿದ ಬಸವ ಜಯಂತಿ ಹಾಗೂ ಕಾಯಕ ದಿನಾಚರಣೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು. ಜಗತ್ತಿನ ಗಮನ ಸೆಳೆದ ಕಾರ್ಲ್ ಮಾರ್ಕ್ಸ್, ಲೋಹಿಯಾ,ನೆಲ್ಸನ್ ಮಂಡೇಲಾ.ಅಬ್ರಹಾಂ ಲಿಂಕನ್ ಗಾಂಧೀಜಿ.ಅಂಬೇಡ್ಕರ್ ಅವರಲ್ಲೂ ವೈಚಾರಿಕತೆ ಸಂದೇಶಗಳು.ಜೀವನದ ಮೌಲ್ಯಗಳಿವೆ. ಪಾಪ ಮತ್ತು ಪುಣ್ಯಗಳ ಮಧ್ಯೆ ವಚನ ಚಳವಳಿಯ ಮೂಲಕ ಸಮಾಜದಲ್ಲಿ ಬೆಳಕು ಚೆಲ್ಲಿದ ಬಸವಣ್ಣ ಅನುಭವ ಮಂಟಪದ ಮೂಲಕ ಜಗತ್ತಿನ ಗಮನ ಸೆಳೆದವರು.ಕಾಯಕವೇ ಕೈಲಾಸ ಎಂಬ ದುಡಿಯುವ ವರ್ಗದ ಜೀವಾಳವನ್ನು( ಶ್ರಮ ಸಂಸ್ಕೃತಿ) ರೂಢಿಸಿಕೊಂಡವರು. ಅವರ ಹಾದಿಯಲ್ಲಿ ಸಾಗಿದ ಫ.ಗು.ಹಳಕಟ್ಟಿ ಹಾಗೂ ಹರ್ಡೇಕರ ಮಂಜಪ್ಪನವರೂ ಪ್ರಾತಃಸ್ಮರಣೀಯರು ಕಾಯಕದಲ್ಲಿ ಮಗ್ನನಾದವನ ಮನಸ್ಸು ಏಕಾಗ್ರತೆಲ್ಲಿರಬೇಕು. ಚಿತ್ತ ಚಂಚಲವಾಗಬಾರದು. ನಾವು ಮಾಡುವ ಕಾಯಕದಲ್ಲಿ ಸತ್ಯ-ಶುದ್ಧ ನಿರ್ವಂಚನೆಯಿಂದ ಮಾಡಿದಾಗ ಅದು ಕೈಲಾಸವಾಗುತ್ತದೆ ಶ್ರೀಗಳು ಹೇಳಿದರು.ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸುರೇಶ ಜಂಗಮಶೆಟ್ಟಿ ಮಾತನಾಡಿ ಜನಸಾಮಾನ್ಯರ ಬಗ್ಗೆ ಕಾಳಜಿ ಹೊಂದಿದ್ದ ಬಸವಣ್ಣನವರು ಮಹಿಳೆಯರಿಗೆ ಸಮಾನ ಅವಕಾಶ ನೀಡಿದರು. ಸಾಮಾನ್ಯರ ಬಗ್ಗೆ ಸದಾ ಸ್ಪಂದಿಸುತ್ತಿದ್ದರು.ವಚನಗಳನ್ನು ಜನರಿಗೆ ಮನದಟ್ಟು ಮಾಡಿದವರು ಶ್ರೀಮಠ ಮತ್ತು ಪೂಜ್ಯರು ಸೇವೆ ಅನನ್ಯವಾಗಿದೆ ಎಂದರು.ಬಸವ ಬಳಗದ ಅಧ್ಯಕ್ಷ ವಿ.ಜಿ. ಯಳಗೇರಿ ಮಾತನಾಡಿ ಹೊಸಮಠ ಸದಾಕಾಲ ಮೂಢನಂಬಿಕೆ ಕಂದಾಚಾರಗಳನ್ನು ಜಾಗೃತಿ ಮೂಡಿಸುವ ಕೇಂದ್ರವಾಗಿದೆ ಎಂದರು.ಇದೇ ಸಂದರ್ಭದಲ್ಲಿ ಕಾಯಕ ದಿನ ನಿಮಿತ್ತ ಪೌರ ಕಾರ್ಮಿಕರಾದ ಬಸವರಾಜ ಗಾಳೆಪ್ಪನವರ, ಸುಭಾಷ್ ಹೊನ್ನಮ್ಮನವರ, ಪ್ರಕಾಶ ಹೆಗ್ಗೇರಿ, ಸವಿತಾ ಸಮಾಜದ ಲಕ್ಷ್ಮಣ ರಾಯಚೂರು, ಬ್ಯೂಟಿ ಪಾರ್ಲರ್ ರೇಣುಕಾ ಕರಿಗಾರ, ಕಟ್ಟಡ ನಿರ್ಮಾಣ ಕಾರ್ಮಿಕರಾದ ರಿಯಾಜ್ ಅಹ್ಮದ್ ಹಾಗೂ ಮಕ್ಬೂಲ್ ಮಾಣಿ, ಅಡುಗೆ ತಯಾರಕ ಪರಮೇಶಯ್ಯ ಹಿರೇಮಠ ಮತ್ತು ಬಸವ ಜಯಂತಿ ಪ್ರಯುಕ್ತ ಏರಿ್ಡಸಿದ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.ಮಮತಾ ನಂದಿಹಳ್ಳಿ ಹಾಗೂ ಅಕ್ಕನ ಬಳಗದವರು ವಚನ ಗಾಯನ ಮಾಡಿದರು. ಜಿ.ಎಂ.ಓಂಕಾರಣ್ಣವರ ಸ್ವಾಗತಿಸಿದರು.ಮಲ್ಲಿಕಾರ್ಜುನ ಹಿಂಚಿಗೇರಿ ನಿರೂಪಿಸಿದರು. ಅರಳಿಕಟ್ಟಿ ಗೂಳಪ್ಪ ವಂದಿಸಿದರು.