ಪಟ್ಟಣದ ಬಸ್ ನಿಲ್ದಾಣದ ಎದುರುಗಡೆಯಲ್ಲಿರುವ ಮಹಾಂತೇಶ ಬೇಕರಿ ಬೆಂಕಿಗೆ ಆಹುತಿ. ಸಂಪೂರ್ಣ ಸುಟ್ಟು ಕರಕಲಾದ ಬೇಕರಿ
ಮುಂಡರಗಿ 4: ಪಟ್ಟಣದಲ್ಲಿ ಬೆಳಗಿನ ಜಾವ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಪಟ್ಟಣದ ಪ್ರಮುಖ ನ್ಯೂ ಮಹಾಂತೇಶ ಬೇಕರಿ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಈ ಅವಘಡಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣವಾಗಿದೆ ಎಂದುಬ ಶಂಕಿಸಲಾಗಿದೆ.
ಪಟ್ಟಣದ ಬಸ್ ನಿಲ್ದಾಣದ ಎದುರುಗಡೆಯಲ್ಲಿರುವ ಈ ಮಹಾಂತೇಶ ಬೇಕರಿಯಲ್ಲಿ ಹೊಗೆಯಾಡುತ್ತಿರುವುದು ಯಾರಿಗೂ ಕಂಡಿರಲಿಲ್ಲ. ಬೆಳಗಿನ ಜಾವದಲ್ಲಿ ನಿವಾಸಿಗಳಿಗೆ ನಿದ್ರೆಯಲ್ಲಿ ಮುಳುಗಿರುವ ಸಮಯ ಅದಾಗಿತ್ತು. ಆದರೆ ಕೆಲವು ವ್ಯಕ್ತಗಳಿಗೆ ಬೇಕರಿ ಅಂಗಡಿಯೊಳಗೆ ಜೋರಾಗಿ ಹೊಗೆಯಾಡುವುದನ್ನು ಕಂಡಾಗ ಆಘಾತಕಾರಿ ದೃಶ್ಯವೇ ಸೃಷ್ಟಿಯಾಗಿತ್ತು. ಅದನ್ನು ತೆರದಾಗಿ ಬೃಹತ್ ಅಗ್ನಿ ಆವರಿಸಿಕೊಂಡು ಕ್ಷಣಗಳಲ್ಲಿ ಜ್ವಾಲೆ ಆಕಸ್ಮಿಕವಾಗಿ ವ್ಯಾಪಿಸಿತು. ಬೇಕರಿಯೊಳಗಿದ್ದ ಹಲವಾರು ತಿನಿಸು ಪದಾರ್ಥಗಳು, ಪರಿಕರಗಳು ಮತ್ತು ಇತರೆ ವಸ್ತುಗಳು ಸಂಪೂರ್ಣವಾಗಿ ಬೆಂಕಿಗೆ ಸುಟ್ಟು ಕರಕಲಾಗಿವೆ. ಈ ಅವಘಡದಿಂದಾಗಿ ಬೇಕರಿಗೆ ಸುಮಾರು ರೂ.20 ರಿಂದ 25 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ ಎಂದು ಅಂಗಡಿ ಮಾಲೀಕರಿಂದ ಅಂದಾಜಿಸಲಾಗಿದೆ.
ಸ್ಥಳಕ್ಕೆ ತಕ್ಷಣವೇ ಮುಂಡರಗಿ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ, ಬೆಂಕಿ ನಂದಿಸುವಲ್ಲಿ ಹರಸಾಹಸ ಪಟ್ಟು ಶ್ರಮಿಸಿದರು. ಬೆಂಕಿಯ ಹೊತ್ತಿಗೆಯು ನೆರೆಹೊರೆಯ ಅಂಗಡಿಗಳಿಗೂ ವ್ಯಾಪಿಸುವ ಮುನ್ನವೇ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.
ಅವಘಡದ ಮಾಹಿತಿಯ ನಂತರ ತಹಶೀಲ್ದಾರ ಪಿ.ಎಸ್.ಎರಿ್ರಸ್ವಾಮಿ ಹಾಗೂ ಪುರಸಭೆ ಸದಸ್ಯರು ಸ್ಥಳಕ್ಕೆ ತಕ್ಷಣ ಭೇಟಿ ನೀಡಿ ಪರೀಶೀಲನೆ ನಡೆಸಿದರು. ಅಗ್ನಿ ಅವಘಡದ ನಿಖರವಾದ ಕಾರಣ ಮತ್ತು ನಷ್ಟದ ಪ್ರಮಾಣವನ್ನು ಲೆಕ್ಕಹಾಕಲು ಅಂಗಡಿ ಮಾಲೀಕರಿಗೆ ಪೊಲೀಸ್ ಠಾಣೆಗೆ ದೂರು ನೀಡುವಂತೆ ಸೂಚಿಸಿದರು.
ಇನ್ನು ಮಧ್ಯರಾತ್ರಿ ಬೆಂಕಿಯ ಹೊತ್ತಿಗೆಯಲ್ಲಿ ತನ್ನ ಜೀವನಕ್ಕೆ ಆಧಾರವಾಗಿದ್ದ ವ್ಯಾಪಾರವನ್ನೇ ಕಳೆದುಕೊಂಡ ನ್ಯೂ ಮಹಾಂತೇಶ ಬೇಕರಿಯ ಮಾಲೀಕರು ಅಳಲು ತೋಡಿಕೊಂಡಿದ್ದಾರೆ. ತಮ್ಮ ನಿತ್ಯ ಜೀವನದ ಆಧಾರವಾಗಿದ್ದ ಅಂಗಡಿ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿರುವ ದೃಶ್ಯ ನೋಡಿ ಅವರು ತೀವ್ರ ಅಘಾತಕ್ಕೊಳಗಾಗಿದ್ದಾರೆ.
ವರ್ಷಗಳ ನಂಬಿಕೆ, ಪರಿಶ್ರಮ, ಕುಟುಂಬದ ಸಹಕಾರದೊಂದಿಗೆ ನಾವು ಈ ಅಂಗಡಿಯನ್ನು ಬೆಳೆಸಿದ್ದೆವು. ನಮ್ಮ ಬದುಕಿಗೆ ಆಧಾರವಾಗಿದ್ದ ಈ ಬೇಕರಿಯೇ ಕಣ್ಣೆದುರೆಯಲ್ಲೇ ಬೆಂಕಿಗೆ ಆಹುತಿಯಾಯಿತು. ಇದೊಂದು ಕನಸು ಕರಕಲಾಗಿದಂತಾಗಿದೆ. ಶ್ರಮಪಟ್ಟ ಸಂಪತ್ತು ಕಣ್ಮುಂದೇ ನಾಶವಾಯಿತು. ಈ ಘಟನೆ ತುಂಬಾ ನೋವು ತಂದಿದೆ,” ಎಂದು ಭಾವುಕರಾದ ಅಂಗಡಿ ಮಾಲೀಕರು ತಮ್ಮ ನೋವನ್ನು ಹಂಚಿಕೊಂಡರು. ಸ್ಥಳೀಯರು ಮತ್ತು ನೆರೆಹೊರೆಯ ವ್ಯಾಪಾರಸ್ಥರು ಕೂಡ ಈ ದುರ್ಘಟನೆಯ ಬಗ್ಗೆ ಶೋಕ ವ್ಯಕ್ತಪಡಿಸಿದ್ದಾರೆ.
ಹಳೆಯ ವಿದ್ಯುತ್ ಸಂಪರ್ಕ ವ್ಯವಸ್ಥೆ ಹಾಗೂ ತಾಂತ್ರಿಕ ನಿರ್ಲಕ್ಷ್ಯದಿಂದ ಇಂತಹ ಅವಘಡಗಳು ಆಗುತ್ತಿರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ, ವ್ಯಾಪಾರಸ್ಥರು ಮತ್ತು ನಾಗರಿಕರು ಹೆಚ್ಚು ಎಚ್ಚರಿಕೆಯಿಂದ ಇರಬೇಕಾಗಿದೆ. ಅಧಿಕಾರಿಗಳು ಈ ಘಟನೆಗೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳುವ ನೀರೀಕ್ಷೆಯಿದೆ.