5531 ಮೆಣಸಿನಕಾಯಿಗೆ 25,000, 2043 ಬ್ಯಾಡಗಿ ಮೆಣಸಿನಕಾಯಿಗೆ 50,000 ರೂ ಬೆಲೆಗಾಗಿ ಪ್ರತಿಭಟನೆ
ಬಳ್ಳಾರಿ 30: ಇಂದು ಎ ಐ ಕೆ ಕೆ ಎಂ ಎಸ್ ರೈತ ಸಂಘಟನೆ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿಯ ಬಳಿ ಮೆಣಸಿನಕಾಯಿ ಬೆಳೆಗೆ (5531 ವಿಧದ ಬೆಳೆಗೆ ರೂ 25,000, ಬ್ಯಾಡಗಿ 2043 ವಿಧದ ಬೆಳೆಗೆ ರೂ 50,000 ) ಬೆಂಬಲ ಬೆಲೆ ನೀಡಿ, ಬಳ್ಳಾರಿಯಲ್ಲಿ ಮೆಣಸಿನಕಾಯಿ ಮಾರುಕಟ್ಟೆ ಸ್ಥಾಪನೆಗಾಗಿ ಆಗ್ರಹಿಸಿ ಪ್ರತಿಭಟನೆ ಮಾಡಲಾಯಿತು.
ಈ ಪ್ರತಿಭಟನೆಯು ಗಾಂಧಿಭವನದಿಂದ ಪ್ರಾರಂಭವಾಗಿ, ಈಡಿಗ ಹಾಸ್ಟೆಲ್, ರಾಯಲ್ ವೃತ್ತ, ಮೀನಾಕ್ಷಿ ವೃತ್ತ, ನಗರ ಬಸ್ ನಿಲ್ದಾಣ ದ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿ, ಮಾನ್ಯ ಜಿಲ್ಲಾಧಿಕಾರಿಗಳಿಗೆ ನೂರಾರು ರೈತರು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಬರೆದಿರುವ ಮನವಿ ಪತ್ರವನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಗೋವಿಂದ್ ಮಾತನಾಡುತ್ತಾ ಬಳ್ಳಾರಿಯಲ್ಲಿ ಸುಮಾರು ವರ್ಷಗಳಿಂದ ಮೆಣಸಿನಕಾಯಿ ಬೆಳೆ ಬೆಳೆಯುತ್ತಿದ್ದಾರೆ, ಇದುವರೆಗೂ ಸರ್ಕಾರ ಇವರ ಕಡೆ ಗಮನ ಕೊಡದಿರುವುದು , ಇವರಿಗೆ ಮಾಡಿದ ದ್ರೋಹವಾಗಿದೆ. ಇಲ್ಲಿ ಮೆಣಸಿನಕಾಯಿ ಮಾರುಕಟ್ಟೆ ಸ್ಥಾಪನೆ ಬಗ್ಗೆ ಇದುವರೆಗೂ ಸರ್ಕಾರ ಮುಂದಾಗದಿರುವುದು ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದಂತಾಗಿದೆ. ಈ ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರಾಜ್ಯ ಸಮಿತಿ ಸದಸ್ಯರಾದ ಕಾ.ಈ.ಹನುಮಂತಪ್ಪ ಅವರು ಮಾತನಾಡುತ್ತಾ ಬಳ್ಳಾರಿ, ಕುರುಗೋಡು, ಸಿರುಗುಪ್ಪ , ಸಂಡೂರು ಮತ್ತು ಕಂಪ್ಲಿ ಸೇರಿದಂತೆ ಜಿಲ್ಲೆಯ 5 ತಾಲ್ಲೂಕುಗಳಲ್ಲಿ ಬಹುತೇಕ ರೈತರು ಮೆಣಸಿನಕಾಯಿ ಬೆಳೆದಿದ್ದಾರೆ. ಇಲ್ಲಿಯ ಬಹುತೇಕ ಮೆಣಸಿನಕಾಯಿ ಬೆಳೆಯು ಬ್ಯಾಡಗಿಯ ಮಾರುಕಟ್ಟೆಗೆ ಹೋಗಿ ಮಾರಾಟವಾಗುತ್ತಿದೆ, ಇದರಿಂದ ಪ್ರಯಾಣದ ವೆಚ್ಚವೂ ಸಹ ಹೆಚ್ಚಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಒಂದು ಎಕರೆ ಮೆಣಸಿನಕಾಯಿ ಬೆಳೆ ಬೆಳೆಯಲು ಬಳಸುವ ಕೀಟನಾಶಕದ ವೆಚ್ಚ ರೂ 50,000, ರಸಗೊಬ್ಬರದ ವೆಚ್ಚ ರೂ 25,000, ಬೀಜ,ಸಸಿ ಗೆ 25,000 ರೂ , ಕೆಲಸಗಾರರ ವೆಚ್ಚ 30,000 ರೂ ಮತ್ತು ಕುಂಟೆ, ಮಡಿಕೆ ಸೇರಿದಂತೆ ಇನ್ನಿತರೇ ಖರ್ಚುಗಳು ಸೇರಿ ಒಂದೂವರೆ ಲಕ್ಷದಿಂದ ಎರೆಡು ಲಕ್ಷದಷ್ಟು
ದುಬಾರಿ ವೆಚ್ಚವಾಗುತ್ತಿದೆ. ಆದ್ದರಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರ ಈ ಕೂಡಲೇ ಮಧ್ಯಸ್ಥಿಕೆ ವಹಿಸಿಕೊಂಡು, ರೈತರ ಮೆಣಸಿನಕಾಯಿ ಬೆಳೆಗೆ ಬೆಂಬಲ ಬೆಲೆ ನೀಡಿ, ಮೆಣಸಿನಕಾಯಿ ಬೆಳೆಯುವ ರೈತರಿಗೆ ನ್ಯಾಯ ನೀಡಬೇಕೆಂದು ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ(ಂಋಏಒಖ) ಒತ್ತಾಯಿಸುತ್ತದೆ ಎಂದರು.
ಪ್ರತಿಭಟನೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ ಮಾತನಾಡುತ್ತಾ
ಮೆಣಸಿನಕಾಯಿ ಬೆಳೆಗೆ (5531 ಗೆ ರೂ 25,000, ಬ್ಯಾಡಗಿ 2043 ಗೆ ರೂ 50,000 ) ಬೆಂಬಲ ಬೆಲೆ ನೀಡಬೇಕು. ಬಳ್ಳಾರಿಯಲ್ಲಿ ಶೀಘ್ರವಾಗಿ ಮೆಣಸಿನಕಾಯಿ ಮಾರುಕಟ್ಟೆ ಸ್ಥಾಪಿಸಬೇಕು. ಮೆಣಸಿನಕಾಯಿ ಬೆಳೆಗೆ ತಗುಲುತ್ತಿರುವ ಕಪ್ಪು ಮಚ್ಚೆ ರೋಗಕ್ಕೆ ಓಷಧ ಕಂಡುಹಿಯಬೇಕು ಮತ್ತು ಬೀಜ,ರಸಗೊಬ್ಬರ ಮತ್ತು ಕೀಟನಾಶಕಗಳ ಬೆಲೆಯನ್ನು ನಿಯಂತ್ರಿಸಬೇಕು ಮತ್ತು ಸರ್ಕಾರವೇ ಓಷಧಗಳ ವಿತರಣಾ ಕೇಂದ್ರ ತೆರೆಯಬೇಕು, ಸರ್ಕಾರ ಈ ಬೇಡಿಕೆಗಳನ್ನು ಕೂಡಲೇ ಹಿಡೇರಿಸದಿದ್ದಲ್ಲಿ ಮಾರ್ಚ್ 4 ರಂದು ಮೆಣಸಿನಕಾಯಿ ಬೆಳೆಗಾರರ ಸಮಸ್ಯೆಗಳ ಪರಿಹಾರಕ್ಕಾಗಿ ಬೆಂಗಳೂರಿನಲ್ಲಿ ರಾಜ್ಯ ಮಟ್ಟದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ , ಪ್ರತಿ ಹಳ್ಳಿಗಳಲ್ಲಿಯೂ, ತಾಲೂಕು ಮತ್ತು ಜಿಲ್ಲೆಯಲ್ಲಿ ಮೆಣಸಿನಕಾಯಿ ಬೆಳೆಗಾರರ ಸಂಘವನ್ನು ಸ್ಥಾಪಿಸಿಕೊಂಡು ದೊಡ್ಡ ಸಂಖ್ಯೆಯಲ್ಲಿ ಹೋರಾಟಕ್ಕೆ ಭಾಗವಹಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಕೂಳೂರು ಬಸಣ್ಣ, ಸೋಮಸಮುದ್ರ ಹೊನ್ನೂರ್ಪ, ಜಿಲ್ಲಾ ಸಮಿತಿ ಸದಸ್ಯರಾದ ಲಿಂಗಪ್ಪ, ಧನರಾಜ್, ಗೋಪಾಲ್, ಕಾಸಿಂ ಸಾಬ್, ಮಲ್ಲಪ್ಪ, ರೈತ ಮುಖಂಡ ಕಲ್ಲುಕಂಬ ಪಂಪಾಪತಿ, ರೈತರಾದ ರಾಮಕೃಷ್ಣ, ವೀರೇಶ್ ಗೌಡ, ತಿಮ್ಮಪ್ಪ, ಗೋವಿಂದ್, ಗಂಗಾಧರ, ಎಂಕಾತ್, ಗಾದಿಲಿಂಗಪ್ಪ, ಮಂಜುನಾಥ ಗೌಡ, ರಾಮನ ಗೌಡ, ರಾಜಶೇಖರ್ ರೆಡ್ಡಿ, ಯಂಕಾರೆಡ್ಡಿ, ಶರಣಬಸವ, ನಾಗಪ್ಪ ಸೇರಿದಂತೆ ನೂರಾರು ರೈತರು ಉಪಸ್ಥಿತರಿದ್ದರು.