ನಾಡಿಗೆ ವಿರೇಶ್ವರ ಪುಣ್ಯಾಶ್ರಮ ಆದರ್ಶವಾಗಿದೆ: ದಿಂಗಾಲೆಶ್ವರ ಶ್ರೀಗಳು

Vireshwar Punyashram is ideal for the nation: Dingaleshwar Sri

ಗದಗ 14 ಉಭಯ ಶ್ರೀಗಳು ಜಾತ್ಯಾತೀತವಾಗಿ   ಈ ವೀರೇಶ್ವರ ಪುಣ್ಯಾಶ್ರಮವನ್ನು ಕಟ್ಟಿದ್ದಾರೆ. ನಾಡಿನಲ್ಲಿ ಹಲವಾರು ಜಾತಿಯ ಮಠಗಳಿವೆ ಅವುಗಳಿಗೆ ಆದರ್ಶ ಮಠವಾಗಿರುವದು  ಗದುಗಿನ ವಿರೇಶ್ವರ ಪುಣ್ಯಾಶ್ರಮ ಎಂದು ಶಿರಹಟ್ಟಿಯ ಜ. ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಹೇಳಿದರು.  

ಅವರು ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಪರಮಪೂಜ್ಯ ಲಿಂ. ಪಂ. ಪಂಚಾಕ್ಷರಿ ಗವಾಯಿಗಳವರ 81ನೇ ಹಾಗೂ ಪದ್ಮಭೂಷಣ ಲಿಂ.ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ 15ನೇ ಪುಣ್ಯಸ್ಮರಣೋತ್ಸವ ಹಾಗೂ ಉಭಯ ಗುರುಗಳ ಜಾತ್ರಾ ಮಹೋತ್ಸವದ ಅಂಗವಾಗಿ ಜರುಗಿದ ಧರ್ಮಸಭೆ ಹಾಗೂ ಕೀರ್ತನ ಸಮ್ಮೇಳನ   ಹಾಗೂ ಅಂಧರಗೋಷ್ಠಿ ಕಾರ್ಯಕ್ರಮದಲ್ಲಿ  ಸಾನಿಧ್ಯವಹಿಸಿ ಮಾತನಾಡಿ,  ಶಿವಯೋಗ ಮಂದಿರದಲ್ಲಿ ಮೂರ್ತಿಯಾದ ಎರಡು ಚೇತನಗಳು ವಿರೇಶ್ವರ ಪುಣ್ಯಾಶ್ರಮದಲ್ಲಿ ಮೂರ್ತಿಗಳಾಗಿದ್ದಾರೆ. ಸಂಪತ್ತಿಗೆ ಬೆಲೆ ಬರುವದು ಅದನ್ನು ಸಾಮಾಜಿಕವಾಗಿ ಬಳಕೆ ಮಾಡಿದಾಗ ಮಾತ್ರ,  ಸ್ವಾರ್ಥಕ್ಕಾಗಿ ಮಾಡಿದಾಗ ಅಲ್ಲ, ಆಗ ಜಿಲ್ಲೆಗೊಬ್ಬರು ಶ್ರೀಮಂತರು ಇದ್ದರು ಈಗ ಊರೊಗೊಬ್ಬ ಶ್ರೀಮಂತರಿದ್ದರೂ ಸಮಾಜಮುಖಿಯಾಗಿ ಇರದೆ ಇರುವುದು ನಮ್ಮ ಅನುಭವದ ಮಾತಾಗಿದೆ. ದುಡ್ಡಿದ್ದವರು ದೊಡ್ಡವರಲ್ಲ ಇನ್ನೊಬ್ಬರ   ದುಖಃವನ್ನು ದೂರು ಮಾಡುವರು  ದೊಡ್ಡವರು. ಅಂದು ವೈರಾಗ್ಯದ ಮಲ್ಲಪ್ಪನವರು ಹಾನಗಲ್‌ಗೆ ಹೋಗಿ ಕುಮಾರಸ್ವಾಮಿಗಳನ್ನು ಬೇಟಿಯಾಗದಿದ್ದರೆ  ಶಿವಯೋಗ ಮಂದಿರ ಸ್ಥಾಪನೆಯಾಗುತ್ತಿರಲಿಲ್ಲ,  ಅದೇರೀತಿ ಬಸರಿಗಿಡದ ಈರ​‍್ಪನವರು  ಶಿರಹಟ್ಟಿಗೆ ಹೋಗಿ ಪಂಚಾಕ್ಷರಿ ಗವಾಯಿಗಳವರನ್ನು ಗದುಗಿಗೆ ಕರೆ ತರದಿದ್ದರೆ ವಿರೇಶ್ವರ ಪುಣ್ಯಾಶ್ರಮವು ಸ್ಥಾಪನೆಯಾಗುತ್ತಿರಲಿಲ್ಲ. ಹಾನಗಲ್ ಕುಮಾರಸ್ವಾಮಿಗಳು, ಪಂ.ಪಂಚಾಕ್ಷರಿ ಗವಾಯಿಗಳವರು ಹಾಗೂ ಪಂ. ಪುಟ್ಟರಾಜ ಗವಾಯಿಗಳು ಎಷ್ಟು ಸ್ಮರಣಿಯರು ಬಸರಿಗಿಡದ ವೀರ​‍್ಪನವರು ಅಷ್ಟೆ ಸ್ಮರಣೀಯರು. ನಾವೇಲ್ಲರೂ ಪೂಜ್ಯಶ್ರೀ ಕಲ್ಲಯ್ಯಜ್ಜನವರೊಂದಿಗೆ ಕೈಜೋಡಿಸಿದರೆ ಸಾಕು  ಉಭಯ ಗುರುಗಳಿಗೆ ಆತ್ಮಕ್ಕೆ ಬಲ ತುಂಬಿದಂತಾಗುತ್ತದೆ ಎಂದು ಹೇಳಿದ ಅವರು ಯಾವುದೇ ಸರಕಾರವಿರಲಿ ವಿರೇಶ್ವರ ಪುಣ್ಯಾಶ್ರಮಕ್ಕೆ ಪ್ರತಿವರ್ಷ ಏನಾದರೂ ಸಹಾಯ ಮಾಡಿದರೆ ಅದಕ್ಕಿಂತ ಸಮಾಜಸೇವೆ ಮತ್ತೊಂದಿಲ್ಲ ಎಂದು ಹೇಳಿದರು.  

ಸಂಸದರಾದ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ,  ಪಂಚಾಕ್ಷರಿ ಗವಾಯಿ ಹಾಗೂ ಪುಟ್ಟರಾಜ ಗವಾಯಿಗಳು ದೇವರ ಮಕ್ಕಳು, ಈ ಭೂಮಿಗೆ ನಾನು ಏನು ಕೊಟ್ಟಿದ್ದೇನೆ ಎಂದು ತೋರಿಸಲು ದೇವರು ಅಂತವರನ್ನು ತಾನೇ ಕಳುಹಿಸುತ್ತಾನೆ. ನಾವೆಲ್ಲ ಕಣ್ಣಿದ್ದರೂ ಕುರುಡರು, ಕಣ್ಣಿಗೆ ಕಂಡಿದ್ದರೂ, ಕಣ್ಣನ್ನು ಬೇರೆ ಕಡೆಗೆ ತಿರುಗಿಸುತ್ತೇವೆ. ನಾವು ಈ ಗುರುಗಳ ಜೀವನ ನೋಡಿದಾಗ ಅವರ ತಪಸ್ಸಿನ ಸಾಕ್ಷಾತ್ಕಾರವಾಗಿರುವ ಈ ಜೀವನ ನಮ್ಮ ಕಣ್ಣು ತೆರೆಸಲು ಇದೆ. ನಾವು ನೋಡದಿರುವುದನ್ನು ಅವರು ನೋಡುತ್ತಿದ್ದರು. ಅದಕ್ಕೆ ಅವರು ಪವಾಡ ಪುರುಷರು ಎಂದು ಹೇಳಿದರು.  

ಈ ಕಾರ್ಯಕ್ರಮದಲ್ಲಿ ಅಡ್ನೂರ-ರಾಜೂರ-ಗದಗ ಬ್ರಹನ್ಮಠದ ಪೂಜ್ಯಶ್ರೀ ಅಭಿನವ  ಶಿವಾನಂದ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು. ಹೋತನಹಳ್ಳಿ ಸಿಂದಗಿ ಶಾಖಾಮಠದ ಪೂಜ್ಯಶ್ರೀ ಶಂಭುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ನೇತೃತ್ವ ವಹಿಸಿದ್ದರು. ಗದುಗಿನ ನೀಲಕಂಠ ಪಟ್ಟದಾರ್ಯ ಮಹಾಸ್ವಾಮಿಗಳ, ಮುಕ್ಕಣ್ಣೇಶ್ವರ ಮಠದ  ಪೂಜ್ಯಶ್ರೀ ಶಂಕರಾನಂದ ಸ್ವಾಮಿಗಳು, ಬೆಳಹೊಡದ ಪೂಜ್ಯಶ್ರೀ ಪರಿಪೂರ್ಣಾನಂದ ಭಾರತಿ ಮಹಾಸ್ವಾಮಿಗಳು, ಮುದ್ದೇಬಿಹಾಳನ ಪೂಜ್ಯಶ್ರೀ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಅಂತೂರು-ಬೆಂತೂರಿನ ಪೂಜ್ಯಶ್ರೀ ಕುಮಾರದೇವರು, ಲಿಂಗಸೂರಿನ ಪೂಜ್ಯಶ್ರೀ ಶಿವಶರಣೆ ನಂದೀಶ್ವರಿ ಅಮ್ಮನವರು ಸಮ್ಮುಖವಹಿಸಿದ್ದರು. 

ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಎಸ್‌.ಎಸ್‌.ಪಾಟೀಲ,  ರವೀಂದ್ರನಾಥ ದಂಡಿನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವೀರಯ್ಯಸ್ವಾಮಿ ಹಿರೇಮಠ,  ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಬಿ. ಬಿ. ಅಸೂಟಿ,  ಜಯಶ್ರೀ ಉಗಲಾಟದ, ಶಿವಲೀಲಾ  ಅಕ್ಕಿ,  ಡಾ. ರಾಜೇಂದ್ರ ಬಸರಿಗಿಡದ, ಜಿಪಂ ಮಾಜಿ ಸದಸ್ಯ  ಶಿವಪ್ರಕಾಶ ಮಹಾಜನಶೆಟ್ರು, ಪಂಕಜ ಬಾಪಣಾ,   ಬಲರಾಮ ಬಸವಾ,  ಬಸವರಾಜ  ಬಿಂಗಿ, ಎಸ್‌. ಎಂ. ಗೌಡರ,  ಸಾಧಿಕ ನರಗುಂದ,  ವಿಕ್ರಂ ಜೈನ,  ಅಯ್ಯಪ್ಪ ನಾಯ್ಕರ, ಮಲ್ಕಾಪುರದ ಗುಂಡಪ್ಪ ಕಬ್ಬಿಣದ ಸೇರಿದಂತೆ ಮುಂತಾದವರು ಉಸ್ಥಿತರಿದ್ದರು.  ಪೂಜ್ಯಶ್ರೀ ಡಾ. ಕಲ್ಲಯ್ಯಜ್ಜನವರು ಅಭಾರ ಮನ್ನಣೆ ಮಾಡಿದರು. 

ಗದುಗಿನ ಪಂ. ಪಂಚಾಕ್ಷರಿ ಗವಾಯಿಗಳವರ ಅಂಧರ ವಸತಿಯುತ ವಿಶೇಷ  ಸಂಗೀತ ಶಾಲೆಯ ಅಂಧ ವಿಧ್ಯಾರ್ಥಿಗಳಿಂದ ಪ್ರಾರ್ಥನೆ ಜರುಗಿತು.